ಗೌರಿಬಿದನೂರು, ಡಿ 18: ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಯಿಂದಾಗಿ ಬೆಳೆಗಳ ನಷ್ಟ ಅನುಭವಿಸಿದ ರೈತರು, ಮನೆಗಳನ್ನು ಸಂಪೂರ್ಣವಾಗಿ ಕಳೆದುಕೊಂಡು ನಿರಾಶ್ರಿತರಾಗಿರುವಂತಹವರು ಹಾಗೂ ಕೋವಿಡ್ನಿಂದ ಮೃತ ಪಟ್ಟ ಕುಟುಂಬಗಳನ್ನು ಗುರುತಿಸಿ ಕೇಂದ್ರ ಮತ್ತು ರಾಜ್ಯ ಸರಕಾರ ಜಂಟಿಯಾಗಿ ಪರಿಹಾರವನ್ನು ತ್ವರಿತಗತಿಯಲ್ಲಿ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ನಗರದ ಎಚ್.ಎನ್. ಕಲಾಭವನದಲ್ಲಿ ಕೋವಿಡ್ನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಚೆಕ್ ವಿತರಣೆ ಮತ್ತು ಅತಿವೃಷ್ಟಿ, ಪ್ರವಾಹದಿಂದ ಹಾನಿಯಾದ ಕುಟುಂಬಗಳಿಗೆ ಪರಿಹಾರ ಧನದ ಚೆಕ್ ಮತ್ತು ಮಂಜೂರಾತಿ ಪತ್ರವನ್ನು ವಿತರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ೯೧,೦೫೩ ರೈತರ ಬೆಳೆ ಹಾನಿಗೊಳಗಾಗಿದೆ. ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಗೆ ೩೪೧ ಮಂದಿ ಸಾವನ್ನಪ್ಪಿದ್ದು, ತಾಲೂಕಿನಲ್ಲಿ ೪೮ ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಬಿಪಿಎಲ್ ಪಡಿತರದಾರರು ೩೩ ಮಂದಿ ಇದ್ದಾರೆ ಇವರಿಗೆ ೧.೫ ಲಕ್ಷ ರೂ. ಪರಿಹಾರ, ಉಳಿದ ೧೫ ಮಂದಿಯ ಕುಟುಂಬಕ್ಕೆ ೫೦ ಸಾವಿರ ಪರಿಹಾರವನ್ನು ಕೇಂದ್ರ ಸರಕಾರ ನೀಡಿದೆ ಎಂದರು.
Varthajala Daily, Bengaluru
0 Comments