ಸಿ.ವಿ.ರಾಮನ್ ಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಗುತ್ತಿಗೆ ಕಾಮಗಾರಿಗಳಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಾರ್ಟಿಯು ಪ್ರತಿಭಟನೆ ನಡೆಸಿತು.
ಬೆಂಗಳೂರಿನ ತಿಪ್ಪಸಂದ್ರ ಮುಖ್ಯರಸ್ತೆಯ ಮಹಾದ್ವಾರದ ಬಳಿ ಪ್ರತಿಭಟನೆಯಲ್ಲಿ ಮಾತನಾಡಿದ ಎಎಪಿಯ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ, “ಸಿ.ವಿ.ರಾಮನ್ ನಗರದ ಒಟ್ಟು 3 ಕೋಟಿ ರೂ. ಮೊತ್ತದ ಆರು ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲಾಗಿತ್ತು. ಅಂದಾಜು ಮೊತ್ತಕ್ಕಿಂತ ಶೇ. 15ರಷ್ಟು ಕಡಿಮೆ ದರದಲ್ಲಿ ಟೆಂಡರ್ ನಿರ್ವಹಿಸಲು ಗುತ್ತಿಗೆದಾರರು ಮುಂದೆ ಬಂದಿದ್ದರು. ಆದರೂ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಎಲ್ಲ ಕಾಮಗಾರಿಗಳನ್ನು ಕೆಆರ್ಐಡಿಎಲ್ಗೆ ವಹಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಈ ಅನುಮಾನಾಸ್ಪದ ನಡೆಯ ಹಿಂದೆ ಶಾಸಕ ಎಸ್.ರಘುರವರ ಕಮಿಷನ್ ದಂಧೆಯಿದೆ” ಎಂದು ಆರೋಪಿಸಿದರು.
“ಕೆಆರ್ಐಡಿಎಲ್ ನಿರ್ವಹಿಸಿದ ಕಾಮಗಾರಿಗಳಲ್ಲಿ ಗುಣಮಟ್ಟ ಇಲ್ಲದಿರುವುದರಿಂದ ಯಾವುದೇ ಕಾಮಗಾರಿಗಳನ್ನು ಅದಕ್ಕೆ ವಹಿಸಬಾರದೆಂದು ಸಮಾಜ ಕಲ್ಯಾಣ ಇಲಾಖೆಯು 2018ರಲ್ಲಿ ಸುತ್ತೋಲೆ ಹೊರಡಿಸಿತ್ತು. ಈಗ ಅಂದಾಜು ವೆಚ್ಚಕ್ಕಿಂತ ಕಡಿಮೆ ದರಕ್ಕೆ ಗುತ್ತಿಗೆದಾರರು ಸಿದ್ಧರಿದ್ದರೂ, ಕೆಆರ್ಐಡಿಎಲ್ಗೆ ಸಿ.ವಿ.ರಾಮನ್ ನಗರದ ಕಾಮಗಾರಿಗಳನ್ನು ವಹಿಸಲಾಗಿದೆ. ಕೆಆರ್ಐಡಿಎಲ್ ಕಾಮಗಾರಿಯಲ್ಲಿ ತಮ್ಮ ಹಿಂಬಾಲಕರಿಂದಲೇ ಕೆಲಸ ಮಾಡಿಸಿ ದುಡ್ಡು ಹೊಡೆಯುವುದಕ್ಕೆ ಅವಕಾಶವಿರುವುದರಿಂದಲೇ ಶಾಸಕರು ಪ್ರಭಾವ ಬಳಿಸಿ ಈ ರೀತಿ ಬದಲಾಯಿಸಿದ್ದಾರೆ” ಎಂದು ಮೋಹನ್ ದಾಸರಿ ಹೇಳಿದರು.
“ಕಾಮಗಾರಿಗಳನ್ನು ವಿಭಜಿಸಿ ಗುತ್ತಿಗೆ ನೀಡಬಾರದು ಎಂಬ ಸುತ್ತೋಲೆಯಲ್ಲಿದ್ದ ನಿಯಮವನ್ನು ಉಲ್ಲಂಘಿಸಿ, ಆರು ಭಾಗ ಮಾಡಲಾಗಿದೆ. ಗುತ್ತಿಗೆದಾರರಿಗೆ ನೀಡಿದ್ದರೆ ಈ ಪೈಕಿ ಎರಡು ಕಾಮಗಾರಿಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಗುತ್ತಿಗೆದಾರರಿಗೆ ಸಿಗಬೇಕಿತ್ತು. ಆದರೆ ಕೆಆರ್ಐಡಿಎಲ್ಗೆ ನೀಡಿರುವುದರಿಂದ ದಲಿತರಿಗೆ ಅನ್ಯಾಯ ಮಾಡಿದಂತಾಗಿದೆ. ರಾಜ್ಯದ ಇನ್ನೂ ಅನೇಕ ಕಡೆ ಎಸ್ಸಿಪಿ, ಟಿಎಸ್ಪಿ ಅನುದಾನಗಳನ್ನು ಪೋಲು ಮಾಡಲಾಗುತ್ತಿದೆ” ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕ್ಷೇತ್ರದ ನಾಯಕರುಗಳಾದ ಆನಂದ್ ವಾಸುದೇವನ್, ಜಗದೀಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
0 Comments