ಕೆಎಸ್ಸಾರ್ಟಿಸಿಯ 200 ಭದ್ರತಾ ರಕ್ಷಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಮೂರು ವರ್ಷ ಕಳೆದರೂ ಇನ್ನೂ ನೇಮಕಾತಿ ಮಾಡದಿರುವುದಕ್ಕೆ ಆಮ್ ಆದ್ಮಿ ಪಾರ್ಟಿ ಬೇಸರ ವ್ಯಕ್ತಪಡಿಸಿದ್ದು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನು ಶೀಘ್ರವೇ ಬದಲಾಯಿಸಬೇಕೆಂದು ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, “ಕೆಎಸ್ಸಾರ್ಟಿಸಿಯ ಭದ್ರತಾ ರಕ್ಷಕ (ದರ್ಜೆ-3) 200 ಹುದ್ದೆಗಳಿಗೆ 2018ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2020ರ ಫೆಬ್ರವರಿಯಲ್ಲಿ ಇದಕ್ಕೆ ಪರೀಕ್ಷೆಯನ್ನೂ ನಡೆಸಿತ್ತು. ಆದರೆ ಇನ್ನೂ ನೇಮಕಾತಿ ಮಾಡಲಾಗಿಲ್ಲ. ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸಿ ಯುವಜನತೆಗೆ ನೆರವಾಗಬೇಕಿರುವ ಸರ್ಕಾರಿ ಸಂಸ್ಥೆಗಳೇ ನೇಮಕಾತಿ ವಿಚಾರದಲ್ಲಿ ನಿದ್ರೆಗೆ ಜಾರಿರುವುದು ಖಂಡನೀಯ” ಎಂದು ಹೇಳಿದರು.
“ಕೆಎಸ್ಸಾರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದರವರು ನೇಮಕಾತಿ ಮಾಡಲು ಆರ್ಥಿಕ ಸ್ಥಿತಿ ಸರಿಯಿಲ್ಲ ಎಂದಿದ್ದಾರೆ. ಸರ್ಕಾರವನ್ನು ಒತ್ತಾಯಿಸಿ ಸಂಸ್ಥೆಗೆ ಅನುದಾನ ತರಬೇಕಾದ ಅವರೇ ಹೀಗೆ ಹೇಳುವುದು ಎಷ್ಟು ಸರಿ? ಶಿವಯೋಗಿಯವರನ್ನು ಬೇರೆ ಇಲಾಖೆಗೆ ಎತ್ತಂಗಡಿ ಮಾಡಿ, ಸಮರ್ಥರನ್ನು ಕೆಎಸ್ಸಾರ್ಟಿಸಿ ನಿರ್ದೇಶಕ ಹುದ್ದೆಗೆ ನೇಮಿಸಿದರೆ ಸಮಸ್ಯೆ ಬಗೆಹರಿಯಬಹುದು. ಸಂಸ್ಥೆಯ ಉನ್ನತ ಅಧಿಕಾರಿಗಳ ಅಂಧಾದುಂಧಿ ದರ್ಬಾರಿಗೆ ಯಾವುದೇ ಕೊರತೆ ಆಗದಿರುವಾಗ, ಹೊಸ ನೇಮಕಾತಿಗೆ ಮಾತ್ರ ಅನುದಾನ ಕೊರತೆಯಾಗುವುದು ಹೇಗೆ?” ಎಂದು ಮೋಹನ್ ದಾಸರಿ ಪ್ರಶ್ನಿಸಿದರು.
ಎಎಪಿ ಮುಖಂಡರಾದ ವಿ. ಗೋಪಾಲ್ ರವರು ಮಾತನಾಡಿ, “ಕೆಎಸ್ಸಾರ್ಟಿಸಿಯಂತಹ ಸರ್ಕಾರಿ ಸಂಸ್ಥೆಗಳ ಉದ್ದೇಶವು ಸಮಾಜಕ್ಕೆ ನೆರವಾಗುವುದು ಆಗಿರಬೇಕು. ಆದರೆ ಅದು ಕೇವಲ ಹಣ ಮಾಡುವುದು ಹಾಗೂ ಲಾಭ-ನಷ್ಟದ ಲೆಕ್ಕಾಚಾರದಲ್ಲಿಯೇ ನಿರತವಾಗಿದೆ. ನೌಕರರು, ಪ್ರಯಾಣಿಕರ ಹಾಗೂ ಉದ್ಯೋಗಾಕಾಂಕ್ಷಿಗಳ ಹಿತವನ್ನು ಸಂಸ್ಥೆಯಲ್ಲಿ ಸಂಪೂರ್ಣ ಕಡೆಗಣಿಸಲಾಗುತ್ತಿದೆ. ಅಧಿಸೂಚನೆ ಹೊರಡಿಸಿ, ಪರೀಕ್ಷೆ ನಡೆಸಿದ ನಂತರ ನೇಮಕಾತಿ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಪರೀಕ್ಷೆ ಬರೆದ ಸಾವಿರಾರು ಯುವಕರ ಕನಸುಗಳೊಂದಿಗೆ ಕೆಎಸ್ಆರ್ಟಿಸಿ ಆಟವಾಡುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
0 Comments