ಬಳ್ಳಾರಿ, ಡಿ 09: ಬಳ್ಳಾರಿ ಜಿಲ್ಲಾ ಜನತಾದಳ (ಜಾತ್ಯತೀತ) ಪಕ್ಷದಲ್ಲಿ ಕಳೆದ ೩೦ ವರ್ಷಗಳಿಂದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಹುದ್ದೆ ಸೇರಿದಂತೆ ಹಲವು ಹುದ್ದೆಗಳನ್ನು ಸ್ವೀಕರಿಸಿ, ಎಲ್ಲಾ ಹುದ್ದೆಗಳಿಗೆ ಮತ್ತು ಪಕ್ಷದ ವರಿಷ್ಠರು, ರಾಜ್ಯ ಮುಖಂಡರು ನನ್ನ ಮೇಲೆ ಇಟ್ಟಿದ್ದ ವಿಶ್ವಾಸಕ್ಕೆ ಧಕ್ಕೆ ಭಾರದಂತೆ ಕಾರ್ಯನಿರ್ವಹಿಸಿಕೊಂಡು ಪಕ್ಷ ಸಂಘಟನೆಗೆ ಹಗಲಿರುಳು ಶ್ರಮಿಸಿದ್ದೇನೆ ಎಂದು ಮೀನಳ್ಳಿ ತಾಯಣ್ಣನವರು ಜೆಡಿಎಸ್ ಕಛೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದನ್ನು ಪರಿಗಣಿಸಿ ಇಂದು ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯಾಧ್ಯಕ್ಷರಾದ ಎಚ್.ಕೆ. ಕುಮಾರಸ್ವಾಮಿ ಅವರು ಮತ್ತಿತರೆ ಎಲ್ಲಾ ಮುಖಂಡರುಗಳು ನನ್ನ ಮೇಲೆ ನಂಬಿಕೆ ಇಟ್ಟು, ಪಕ್ಷದಲ್ಲಿ ಇಡೀ ಜಿಲ್ಲೆಯಲ್ಲಿ ನನ್ನನ್ನು ಗುರುತಿಸಿ, ಬಳ್ಳಾರಿ ಜಿಲ್ಲಾ ಜನತಾದಳ (ಜಾತ್ಯತೀತ) ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ನನ್ನನ್ನು ನೇಮಕ ಮಾಡಿದ ಪಕ್ಷದ ಎಲ್ಲಾ ಮುಖಂಡರೂ ಹಾಗು ರಾಜ್ಯ ಮಟ್ಟದ ಪದಾಧಿಕಾರಿಗಳಿಗೂ ಕಾರ್ಯಕರ್ತರಿಗೂ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು.
ಕಳೆದ ೩೦ ವರ್ಷಗಳಿಂದ ಪಕ್ಷದಲ್ಲಿದ್ದುಕೊಂಡು ತಾಲೂಕು ಪಂಚಾಯಿತಿ, ಜಲ್ಲಾ ಪಂಚಾಯಿತಿ ಮತ್ತು ಬಳ್ಳಾರಿ ಗ್ರಾಮೀಣ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಅಲ್ಲದೆ, ಪಕ್ಷದಲ್ಲಿ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಹುದ್ದೆ ಸೇರಿದಂತೆ ಹಲವು ಹುದ್ದೆಗಳನ್ನು ಪಡೆದು ಪಕ್ಷಕ್ಕೆ ಹಗಲಿರುಳು ಶ್ರಮಿಸಿದ್ದೇನೆ. ಈಗ ಪಕ್ಷದ ಮುಖಂಡರು ನನ್ನನ್ನು ಗುರುತಿಸಿ, ಈ ಗುರುತರವಾದ ಜವಾಬ್ದಾರಿಯನ್ನು ನೀಡಿದ್ದು, ಈ ಹುದ್ದೆಗೆ ಮತ್ತು ಪಕ್ಷದ ಮುಖಂಡರು ನನ್ನ ಮೇಲೆ ಇಟ್ಟಿರುವ ಗೌರವ, ಪ್ರೀತಿ ಮತ್ತು ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಪಕ್ಷದ ರಾಜ್ಯ ಮುಖಂಡರಾದ ಎನ್. ಪ್ರತಾಪರೆಡ್ಡಿ ಅವರ ನೇತೃತ್ವದಲ್ಲಿ ನನಗೆ ನೀಡಿರುವ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಇಡೀ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಶ್ರಮಿಸುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಮತ್ತೆ ಹೊಸ ಹುರುಪು ತುಂಬಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಡಿ. ೧೦ ರಂದು ವಿಧಾನ ಪರಿಷತ್ ಚುನಾವಣೆ ನಂತರ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಅವರು ಸೇರಿದಂತೆ ಉಳಿದಂತೆ ಪಕ್ಷದ ರಾಜ್ಯ ಮುಖಂಡರನ್ನು ಬಳ್ಳಾರಿಗೆ ಕರೆಯಿಸಿ, ಇಡೀ ಜಿಲ್ಲೆಯಲ್ಲಿರುವ ಪಕ್ಷದ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ, ಮುಂದಿನ ದಿನಗಳಲ್ಲಿ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ರೂಪಿಸಲಾಗುವುದು. ಅತೀ ಶೀಘ್ರದಲ್ಲೇ ಪಕ್ಷದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ದಿನಾಂಕ ನಿಗದಿ ಪಡಿಸಲಾಗುವುದು ಎಂದರು.ಮು0ಬರುವ ಕುರುಗೋಡು ಮತ್ತು ಕುರೇಕುಪ್ಪ ಪುರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಅಲ್ಲದೆ, ಕುರುಗೋಡು ಪುರಸಭೆಯ ಎಲ್ಲಾ ೨೧ ವಾರ್ಡ್ಗಳಲ್ಲಿ ಕುರೇಕುಪ್ಪ ಪುರಸಭೆಯ ೨೩ ವಾರ್ಡ್ಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸ`ಲಾಗುವುದು. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಎಲ್ಲಾ ರೀತಿಯ ರಾಜಕೀಯ ತಂತ್ರಗಾರಿಕೆಯನ್ನು ರೂಪಿಸಲಾಗುವುದು ಎಂದರು.
ಇತ್ತೀಚಿಗೆ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ರೈತರು ಬೆಳೆದ ಭತ್ತ, ಮೆಣಸಿನಕಾಯಿ, ಕಡಲೆ ಸೇರಿದಂತೆ ಮತ್ತಿತರೆ ಬೆಳೆ ಸಂಪೂರ್ಣ ಹಾನಿಯಾಗಿದ್ದು, ರೈತರು ಎಕರೆಗೆ ಕನಿಷ್ಠ ೩೦ ರಿಂದ ೩೫ ಸಾವಿರ ರು. ವೆಚ್ಚ ಮಾಡಿದ್ದಾರೆ. ಅಲ್ಲದೆ, ಈಗ ಬೆಳೆ ಕೈ ಸೇರದೇ ಹಾಳಾಗಿದೆ. ಸರಕಾರ ಕೂಡಲೇ ರೈತರಿಗೆ ಪ್ರತಿ ಎಕರೆಗೆ ೩೦ ಸಾವಿರ ರು. ಬೆಳೆನಷ್ಟ ಪರಿಹಾರ ನೀಡಬೇಕು ಎಂದು ಮೀನಳ್ಳಿ ತಾಯಣ್ಣನವರು ಒತ್ತಾಯಿಸಿದ್ದಾರೆ. ಇದೇ ಸಂಧರ್ಭದಲ್ಲಿ ಮೀನಳ್ಳಿ ತಾಯಣ್ಣನವರಿಗೆ ಸನ್ಮಾನಿಸಿದರು. ಮುನ್ನಾಬಾಯಿ,ವಿಜಯ್ಕುಮಾರ್, ಗೋಪಾಲ್ ಇನ್ನಿತರರು ಉಪಸ್ಥಿತರಿದ್ದರು.
Varthajala Daily, Bengaluru
0 Comments