ವೇದಮಾತೆ ಗಾಯತ್ರಿ ಹಿಂದೂ ಸನಾತನ ಪರಂಪರೆಯ ಜನನಿ ಎಂದು ಗುರುತಿಸಲ್ಪಡುವ ಶಕ್ತಿ.ಬ್ರಹ್ಮ ವಿಷ್ಣು ಮಹೇಶ್ವರರ ಅವತಾರಗಳಿಗೂ ವೇದಮಾತೆ ಗಾಯತ್ರಿಯೇ ಮೂಲ ಎಂಬುದು ವೇದಾಧ್ಯಯನ ಮಾಡಿದ ಮಂದಿಗೆ ತಿಳಿದಿರುವ ವಿಚಾರ.ಗಾಯತ್ರಿ ಮಂತ್ರದ ಶಕ್ತಿ ಅಗೋಚರ ಪಾರಮಾರ್ಥಿಕ ಸತ್ಯ.
ಯಶವಂತಪುರದ ಶ್ರೀ.ಮಹಾಯಾಗ ಕ್ಷೇತ್ರ ಶ್ರೀ.ಗಾಯತ್ರಿ ದೇವಸ್ಥಾನದ ಸಂಸ್ಥಾಪಕರು ಶ್ರೀ.ಚಿದಂಬರ್ ದೀಕ್ಷಿತ್ ಸ್ವಾಮೀಜಿಯವರು.ದೇವಾಲಯದ ಆವರಣದಲ್ಲಿ ಯಾಗ ಮಂಟಪ ಮತ್ತು ಇತರೆ ಹಲವು ದೇವರ ಮೂರ್ತಿಗಳಿವೆ.ಷಣ್ಮುಖನ ಬೃಹತ್ ವಿಗ್ರಹ,ಶ್ರೀ.ಧನ್ವಂತರಿ,ಶ್ರೀ.ಮಹಾವಿಷ್ಣು,ಶ್ರೀ.ಸ್ವರ್ಣ ಗೌರಿ ಸಮೇತ ಶ್ರೀ ಅಗಸ್ತ್ಯೇಶ್ವರ ಸ್ವಾಮಿ,ಶ್ರೀ.ಆಂಜನೇಯ ಮತ್ತು ಪಂಚಮುಖಿ ಗಣಪತಿ ದೇವರುಗಳು ದೇವಸ್ಥಾನದ ಆವರಣಕ್ಕೆ ಶಕ್ತಿ ತುಂಬಿದೆ.
ದೇವಾಲಯದಲ್ಲಿ ಇಂದು ಕೋವಿದ್ ಲಸಿಕೆ ನೀಡುವ ಕಾರ್ಯಕ್ರಮ ನೆರವೇರಿತು.ಮೊದಲ ಲಸಿಕೆ ಮತ್ತು ಎರಡನೇ ಲಸಿಕೆ ಎರಡೂ ಲಭ್ಯವಿದ್ದು ಅನೇಕರು ಪ್ರಯೋಜನ ಪಡೆದುಕೊಂಡರು. ಶುಕ್ರವಾರದ ಈ ದಿನ ಬಂದವರಿಗೆ ಪಾನಕ ಮತ್ತು ಭೋಜನ ವ್ಯವಸ್ಥೆಯನ್ನೂ ಮಾಡಲಾಗಿತ್ತು. ದೇವಸ್ಥಾನದಲ್ಲಿ ಆಗಾಗ ವಿಶೇಷ ಹೋಮ ಹವನ ಪೂಜೆಗಳ ಆಚರಣೆ ನಡೆಯುತ್ತದೆ.ಸಂಕಷ್ಟಿ,ಪೌರ್ಣಮಿಯ ದಿನ ಸತ್ಯನಾರಾಯಣ ಪೂಜೆ,ಗಾಯತ್ರಿ ಮಹಾಯಾಗ, ಸಾಮೂಹಿಕ ವಿವಾಹಗಳು ಮೊದಲಾದ ಲೋಕ ಕಲ್ಯಾಣಾರ್ಥವಾಗಿ ಹೋಮ ಹವನಗಳು ಆಗಾಗ ನಡೆಯುತ್ತಿರುತ್ತದೆ.ಕೋವಿಡ್__19 ವೈರಾಣು ಸೋಂಕು ನಿವಾರಣೆಗೆ ಹಾಗೂ ಸಮಸ್ತ ಮನುಕುಲದ ದೀರ್ಘ ಆರೋಗ್ಯ ,ದೀರ್ಘ ಆಯುಷ್ಯ ಮತ್ತು ಕ್ಷೇಮಾಭಿವೃದ್ಧಿಗೆ ಸಂಕಲ್ಪ ಮಾಡಿ ಮೇ ತಿಂಗಳ ಸಂಕಷ್ಟ ಚೌತಿ ದಿನ ಸಹಸ್ರ ಮೋದಕ ಹಾಗೂ ದೂರ್ವಾಯುಗ್ನಂ ಹೋಮವನ್ನು ನೆರವೇರಿಸಲಾಗಿತ್ತು.
ಹೋಮದ ಅಧ್ವರ್ಯವನ್ನು ಶ್ರೀ ಶ್ರೀ ಚಿದಂಬರ ದೀಕ್ಷಿತ ಸ್ವಾಮೀಜಿ ವಹಿಸಿದ್ದರು.ವೇದಮಾತೆ ಎಲ್ಲರನ್ನೂ ಅನುಗ್ರಹಿಸಿ ಕೊರೋನಾದಿಂದ ಜಗತ್ತನ್ನು ಪಾರು ಮಾಡಲಿ ಎಂಬ ಪ್ರಾರ್ಥನೆ ಸಲ್ಲಿಸಲಾಗಿತ್ತು.
ಆತ್ಮೀಯ ಮಿತ್ರರಾದ ಶ್ರೀ.ಶಂಕರೇ ಗೌಡರು ಸ್ವಯಂ ಸೇವಕರಾಗಿ ಸಾಕಷ್ಟು ಸೇವೆ ಸಲ್ಲಿಸುತ್ತಾ ಬಂದಿರುವುದು ನಮಗೆಲ್ಲಾ ಖುಷಿಯ ವಿಚಾರ.ಮಲ್ಲೇಶ್ವರದ ಪಶ್ಚಿಮ ಮುಗಿಯುತ್ತಿದ್ದಂತೆಯೇ ಶುರುವಾಗುವ ಯಶವಂತಪುರದ ಬಸ್ ಸ್ಟ್ಯಾಂಡಿನ ಪಕ್ಕಕ್ಕೂ ಹಳೇ ಗಾಯತ್ರಿ ಹೋಟೆಲ್ ಇದ್ದ ಕಟ್ಟಡದ ನಡುವೆಯೂ ಶುರುವಾಗುವ ಸಣ್ಣ ರಸ್ತೆಯೇ ಈ ಶ್ರೀ.ಮಹಾಯಾಗ ಕ್ಷೇತ್ರ.ಶ್ರೀ.ಗಾಯತ್ರಿ ದೇವಸ್ಥಾನ.ಈ ದೇವಸ್ಥಾನಕ್ಕೆ ಆಂಧ್ರದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಶ್ರೀ.ಎನ್ ಟಿ ರಾಮರಾವ್ ಅವರೂ ಬಂದು ಹೋಗುತ್ತಿದ್ದರು.ದೇವಾಲಯದಲ್ಲಿ ಒಂದು ಆನೆಯನ್ನೂ ಸಾಕಲಾಗಿತ್ತು.ಪ್ರಾಣಿ ದಯಾ ಸಂಘದ ನಿಯಮವೋ ಏನೋ ಆನೆಯನ್ನು ದೇವಸ್ಥಾನದಿಂದ ವಾಪಸ್ಸು ಕಳುಹಿಸಿಕೊಡಬೇಕಾಯಿತು ಎಂದು ಕೇಳಿದ ನೆನಪು.ನೀವೂ ದೇವಾಲಯಕ್ಕೆ ಭೇಟಿ ನೀಡಿ ವೇದಮಾತೆ ಗಾಯತ್ರಿಯ ಅನುಗ್ರಹ ನಿಮಗೂ ಲಭಿಸಲಿ ಎಂದು ಆಶಿಸುತ್ತೇವೆ.
0 Comments