ಸರ್ಕಾರ ಸಂಗ್ರಹಿಸುವ ಎಲ್ಲಾ ತೆರಿಗೆ ಹಣವು ಇಂದು ಜನಸಾಮಾನ್ಯರ ಅಭಿವೃದ್ಧಿಯ ಹೆಸರಿನಲ್ಲಿ ಭ್ರಷ್ಟರ ಪಾಲಾಗುತ್ತಿದೆ ಯೇ ಹೊರತು ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಭ್ರಷ್ಟಾಚಾರಿಗಳು ಮಕ್ಕಳು- ಮೊಮ್ಮಕ್ಕಳಿಗಾಗಿ ಅಕ್ರಮ ಸಂಪತ್ತನ್ನು ಗಳಿಸಿ ಬೊಕ್ಕಸವನ್ನು ಬರಿದು ಮಾಡುತ್ತಿದ್ದಾರೆಯೇ ಹೊರತು ಮತ್ತಿನ್ಯಾವ ಸಾಧನೆಯನ್ನು ಮಾಡುತ್ತಿಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನ ವಿಜಯನಗರದ ಬಂಟರ ಸಂಘದಲ್ಲಿ ಆಮ್ ಆದ್ಮಿ ಪಕ್ಷದ ಬಿಬಿಎಂಪಿ ಚುನಾವಣಾ ಅಭ್ಯರ್ಥಿಗಳ ಕಾರ್ಯತಂತ್ರ ಯೋಜನಾ ಸಭೆಯಲ್ಲಿ ಮಾತನಾಡಿದ ಪೃಥ್ವಿರೆಡ್ಡಿ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಹಾಗೂ ಪ್ರಾಮಾಣಿಕ ಬಿಬಿಎಂಪಿ ಆಡಳಿತಕ್ಕಾಗಿ ಪಕ್ಷದ ಅಭ್ಯರ್ಥಿಗಳೆಲ್ಲರೂ ಹಣಬಲ, ತೋಳ್ಬಲ , ಅಧಿಕಾರ ಬಲವುಳ್ಳ ಅನ್ಯ ಪಕ್ಷಗಳ ಅಭ್ಯರ್ಥಿಗಳ ವಿರುದ್ಧ ಗೆಲ್ಲುವ ಪಣ ತೊಡಬೇಕೆಂದು ಕರೆ ನೀಡಿದರು.
ಮುಂಬರುವ ದಿನಗಳಲ್ಲಿ ಆಮ್ ಆದ್ಮಿ ಪಕ್ಷ ಆಡಳಿತವುಳ್ಳ ಸ್ವಚ್ಚ ಬಿಬಿಎಂಪಿ ಆಡಳಿತವನ್ನು ಬೆಂಗಳೂರಿಗರು ನೋಡಬಹುದೆಂಬ ಆಶಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮಾ , ಪ್ರಧಾನ ಕಾರ್ಯದರ್ಶಿ ಸಂಚಿತ್ ಸೆಹ್ವಾನಿ , ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ಬಿ. ಟಿ ನಾಗಣ್ಣ ಸುರೇಶ್ ರಾಥೋಡ್ ಸೇರಿದಂತೆ ಬೆಂಗಳೂರಿನ 150 ಕ್ಕೂ ಹೆಚ್ಚು ವಾರ್ಡ್ ಗಳ ಅಭ್ಯರ್ಥಿಗಳು ಭಾಗವಹಿಸಿದ್ದರು.
0 Comments