ಕಾರವಾರ: ಮೀನುಗಾರಿಕೆ ನಡೆಸುತ್ತಿದ್ದ ಬೋಟ್ಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟ ಘಟನೆ ಅರಬ್ಬೀ ಸಮುದ್ರದ ಲೈಟ್ ಹೌಸ್ ಸಮೀಪ ಸಂಭವಿಸಿದ್ದು, ಬೋಟ್ನಲ್ಲಿದ್ದ ೭ ಜನ ಮೀನುಗಾರರನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಇನ್ನೊಂದು ಮೀನುಗಾರಿಕೆ ಬೋಟ್ ಸಹಾಯದಿಂದ ರಕ್ಷಿಸಿದ್ದಾರೆ.
ಸಮುದ್ರದಲ್ಲಿ ಮೀನು ಹಿಡಿಯಲು ತೆರಳಿದ್ದ ಉಡುಪಿ ಮೂಲದ ವರದಾ ಹೆಸರಿನ ಬೋಟೊಂದು ಬೆಂಕಿ ಅವಘಡಕ್ಕೆ ಒಳಗಾಗಿ ದೋಣಿಯಲ್ಲಿದ್ದ ಏಳು ಮಂದಿ ಮೀನುಗಾರರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.
ಉಡುಪಿ ಜಿಲ್ಲೆಯ ಮಲ್ಪೆಯ ವರದಾ ಹೆಸರಿನ (ನೋಂದಣಿ ಸಂಖ್ಯೆ ಐಎನ್ಡಿ ಕೆಎ೦೨ ಎಮ್ಎಮ್ ೪೪೯೫) ದೋಣಿಯು ಲೈಟ್ ಹೌಸ್ ನಡುಗಡ್ಡೆಯಿಂದ ೧೦ ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತಿತ್ತು.
ಈ ವೇಳೆ ಇಂಜಿನ್ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಶಾರ್ಟ್ ಸರ್ಕೀಟ್ನಿಂದ ಬೆಂಕಿ ಹೊತ್ತಿಕೊಂಡಿತ್ತು. ಅವಘಡದ ಬಗ್ಗೆ ಮಾಹಿತಿ ಪಡೆದ ನವ ಮಂಗಳೂರಿನ ಕೋಸ್ಟ್ ಗಾರ್ಡ್ ಅಧಿಕಾರಿಗಳು, ತಕ್ಷಣವೇ ಕಾರವಾರದ ಸಿ ೧೫೫ ಗಸ್ತು ನೌಕೆಯಲ್ಲಿ ರಕ್ಷಣಾ ಸಿಬ್ಬಂದಿಯನ್ನು ಕಾರವಾರಕ್ಕೆ ಕಳುಹಿಸಿಕೊಟ್ಟರು. ಧಗಿಸುತಿದ್ದ ದೋಣಿಯಲ್ಲಿ ಮೀನುಗಾರರು ಸಹ ಇದ್ದಿದ್ದರಿಂದ ಮೀನುಗಾರರನ್ನು ಸಮೀಪದಲ್ಲಿದ್ದ ಮತ್ತೊಂದು ಮೀನುಗಾರಿಕಾ ದೋಣಿ ವಜ್ರಕ್ಕೆ ಸ್ಥಳೀಯ ಮೀನುಗಾರರು ರಕ್ಷಿಸಿ, ರವಾನಿಸಿದರು. ಬಳಿಕ ಬೆಂಕಿಯನ್ನು ನಂದಿಸಲಾಯಿತು. ರಕ್ಷಿಸಲಾದ ಎಲ್ಲ ಮೀನುಗಾರರೂ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ದೋಣಿಯನ್ನು ಕಾರವಾರದ ಬೈತಖೋಲ್ ಮೀನುಗಾರಿಕಾ ಬಂದರಿಗೆ ಎಳೆದು ತರಲಾಗಿದೆ. ಕರಾವಳಿ ಭದ್ರತಾ ಪಡೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
0 Comments