Ticker

6/recent/ticker-posts

Ad Code

Responsive Advertisement

ಕೋಲಾರ ಮಾಜಿ ಎಂಪಿ ಡಾ. ವಿ.ವೆಂಕಟೇಶ್‌ ಎಎಪಿ ಸೇರ್ಪಡೆ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಾವಿನಿಂದ ಉಂಟಾಗಿದ್ದ ಅನುಕಂಪದ ಅಲೆಯನ್ನು ಭೇದಿಸಿ, 1984ರಲ್ಲಿ ಜನತಾ ಪಕ್ಷದಿಂದ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿದ್ದ ಮಾಜಿ ಸಂಸದ ಡಾ. ವಿ.ವೆಂಕಟೇಶ್‌ರವರು ಆಮ್‌ ಆದ್ಮಿ ಪಾರ್ಟಿಗೆ ಶುಕ್ರವಾರ ಸೇರ್ಪಡೆಯಾದರು.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ಎಎಪಿ ಸೇರಿ ಮಾತನಾಡಿದ ಡಾ. ವಿ.ವೆಂಕಟೇಶ್‌, “ಕಾಂಗ್ರೆಸ್‌ನ ಕುಟುಂಬ ರಾಜಕಾರಣವನ್ನು ವಿರೋಧಿಸಿ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದಿತು. ಆದರೆ ಜನತಾ ಪಕ್ಷ ವಿಭಜನೆಯಾಗಿದ್ದರಿಂದ ಹುಟ್ಟಿಕೊಂಡ ಜೆಡಿಎಸ್‌ನಲ್ಲಿ ಕುಟುಂಬ ರಾಜಕಾರಣವೇ ತುಂಬಿಕೊಂಡಿದೆ. ಈಗ ದೇಶದ ಬಹುತೇಕ ಪಕ್ಷಗಳು ಕುಟುಂಬಗಳ ಸ್ವತ್ತಾಗಿಬಿಟ್ಟಿವೆ. ಕುಟುಂಬ ರಾಜಕೀಯವನ್ನು ವಿರೋಧಿಸಿ ಮುನ್ನೆಲೆಗೆ ಬಂದ ಬಿಜೆಪಿಯು ಕೋಮು ರಾಜಕೀಯದಲ್ಲಿ ನಿರತವಾಗಿದೆ. ಎಲ್ಲ ಧರ್ಮಗಳನ್ನು, ಜಾತಿಗಳನ್ನು ಗೌರವಿಸಬೇಕೆಂಬ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಬಿಜೆಪಿಯು ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸುತ್ತಿದೆ” ಎಂದು ಹೇಳಿದರು.

“ಎಲ್ಲ ಪಕ್ಷಗಳ ನಡೆಯನ್ನು ಇಷ್ಟು ವರ್ಷಗಳ ಕಾಲ ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ರಾಜಕೀಯ ಪಕ್ಷಗಳು ದೇಶವಿರೋಧಿ, ಸಂವಿಧಾನವಿರೋಧಿ ಹಾಗೂ ಮನುಷ್ಯತ್ವದ ವಿರೋಧಿಯಾಗಿರುವುದನ್ನು ಕಂಡು ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದೆ. ಎಲ್ಲರನ್ನೂ ಒಂದುಗೂಡಿಸುವ ನಾಯಕತ್ವಕ್ಕಾಗಿ ದಶಕಗಳಿಂದ ಕಾಯುತ್ತಿದೆ. ಅಂತಹ ನಾಯಕತ್ವವು ಆಮ್‌ ಆದ್ಮಿ ಪಾರ್ಟಿಯಲ್ಲಿದೆ. ಬೇರೆ ಪಕ್ಷಗಳು ಕೇವಲ ಘೋಷಣೆ ಮಾಡಿ ಜನತೆಯನ್ನು ವಂಚಿಸಿದರೆ, ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿಯು ಘೋಷಣೆಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡುತ್ತಿದೆ. ಆದ್ದರಿಂದಲೇ ದೆಹಲಿಯಲ್ಲಿ ಪಕ್ಷವು ನಿರಂತರವಾಗಿ ಜಯಗಳಿಸಿದೆ” ಎಂದು ಡಾ. ವಿ.ವೆಂಕಟೇಶ್‌ ಅಭಿಪ್ರಾಯಪಟ್ಟರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿಯವರು ಮಾತನಾಡಿ, “1984ರಲ್ಲಿ ಇಂದಿರಾ ಗಾಂಧಿಯವರು ಸಾವನ್ನಪ್ಪಿದಾಗ ಇಡೀ ದೇಶದಲ್ಲಿ ಕಾಂಗ್ರೆಸ್‌ ಪರ ಅನುಕಂಪದ ಅಲೆ ಸೃಷ್ಟಿಯಾಗಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸೇತರ ಅಭ್ಯರ್ಥಿಗಳು ಸೆಣಸಾಡುವುದು ಬಹಳ ಕಷ್ಟವಾಗಿತ್ತು. ಆ ಅನುಕಂಪದ ಅಲೆಯನ್ನು ಭೇದಿಸಿ ಗೆಲುವು ಸಾಧಿಸಿದ ಕೆಲವೇ ಕೆಲವು ನಾಯಕರಲ್ಲಿ ಡಾ. ವಿ.ವೆಂಕಟೇಶ್‌ ಒಬ್ಬರು. ಕಾಂಗ್ರೆಸ್‌ಗೆ 414 ಸ್ಥಾನ ಲಭಿಸಿದಾಗಲೂ ಇವರು ಜನತಾ ಪಕ್ಷದಿಂದ ಗೆದ್ದಿದ್ದಾರೆಂದರೆ ಜನರೊಂದಿಗೆ ಇವರಿಗಿದ್ದ ನಂಟು ಹೇಗಿತ್ತೆಂಬುದನ್ನು ಊಹಿಸಬಹುದು” ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ಹಿರಿಯ ಮುಖಂಡರು ಹಾಗೂ ಮಾಜಿ ಶಾಸಕರಾದ ಎಚ್‌.ಡಿ.ಬಸವರಾಜುರವರು ಮಾತನಾಡಿ, “ಡಾ. ವಿ.ವೆಂಕಟೇಶ್‌ರವರು ಸಂಸದರಾಗಿದ್ದ ಸಂದರ್ಭದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಸರೋಜಿನಿ ಮಹಿಷಿ ವರದಿಯ ಪರಾಮರ್ಶೆ ಸಮಿತಿ ಸೇರಿದಂತೆ ಹಲವು ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ವಿಧಾನಸೌಧದ ಎದುರಿಗಿರುವ ಅಂಬೇಡ್ಕರ್‌ ಪ್ರತಿಮೆ ಸ್ಥಾಪನೆಯ ಹಿಂದೆ, ಡಾ. ಬಿ.ಆರ್‌.ಅಂಬೇಡ್ಕರ್‌ ಮಿಷನ್‌ ಅಧ್ಯಕ್ಷರಾಗಿದ್ದ ಇವರ ಹೋರಾಟವಿದೆ. ಕನಕಪುರ ರಸ್ತೆಯಲ್ಲಿರುವ ದಯಾನಂದ ಆರ್ಯ ವಿದ್ಯಾಲಯ (ಡಿಎಪಿ) ಪಬ್ಲಿಕ್‌ ಶಾಲೆಯ ಸಂಸ್ಥಾಪಕ ಹಾಗೂ ಅದರ ನಿವೇಶನದ ದಾನಿಯಾಗಿದ್ದಾರೆ. ಯೋಗಗುರು ಬಾಬಾ ರಾಮದೇವ್‌ರವರ ಜೊತೆಗೂಡಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೇರಳ-ಕರ್ನಾಟಕ ಗಡಿಯಲ್ಲಿ ಬುಡಕಟ್ಟು ಜನಾಂಗದವರಿಗಾಗಿ ಆಸ್ಪತ್ರೆ ಆರಂಭಿಸಿ ಮುನ್ನಡೆಸುತ್ತಿದ್ದಾರೆ. ಜನಸಾಮಾನ್ಯರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಡಾ. ವಿ.ವೆಂಕಟೇಶ್‌ರವರ ಸೇರ್ಪಡೆಯು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ” ಎಂದು ಹೇಳಿದರು.

ಬೆಂಗಳೂರು ನಗರ ಆಮ್‌ ಆದ್ಮಿ ಪಾರ್ಟಿ ಅಧ್ಯಕ್ಷ ಮೋಹನ್‌ ದಾಸರಿ ಮಾತನಾಡಿ, “ಪಕ್ಷದ ಸಿದ್ಧಾಂತ ಹಾಗೂ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ರವರ ಪಾರದರ್ಶಕ ಆಡಳಿತವನ್ನು ಮೆಚ್ಚಿ ಅನೇಕರು ಆಮ್‌ ಆದ್ಮಿ ಪಾರ್ಟಿ ಸೇರುತ್ತಿದ್ದಾರೆ. ಮಾಜಿ ಸಂಸದರಾದ ಡಾ. ವಿ.ವೆಂಕಟೇಶ್‌, ಮಾಜಿ ಶಾಸಕರಾದ ಎಚ್‌.ಡಿ.ಬಸವರಾಜು ಮುಂತಾದ ಅನುಭವಿಗಳ ಮಾರ್ಗದರ್ಶನದಲ್ಲಿ ಪಕ್ಷವು ಇನ್ನಷ್ಟು ಬಲಿಷ್ಠವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಉಸ್ತುವಾರಿ ರೋಮಿ ಭಾಟಿ ಹಾಗೂ ಪಕ್ಷದ ಮುಖಂಡರಾದ ಸಂಚಿತ್‌ ಸೆಹವಾನಿ, ಜಗದೀಶ್‌ ವಿ. ಸದಂ, ದರ್ಶನ್‌ ಜೈನ್‌, ಮಂಜುನಾಥ ಸ್ವಾಮಿ, ಡಾ. ವಿಶ್ವನಾಥ್‌, ರವಿಶಂಕರ್‌, ಜಗದೀಶ್‌ ಚಂದ್ರ, ಶರತ್‌ ಖಾದ್ರಿ, ಪ್ರಭುಸ್ವಾಮಿ ಹಾಗೂ ಇನ್ನಿತರ ಮುಖಂಡರು ಭಾಗವಹಿಸಿದ್ದರು.


Post a Comment

0 Comments

Ad Code

Responsive Advertisement