ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಾಳ ದಾರಿಯಲ್ಲಿ ಜಾರಿ ಹೋಗಿ ಇಂದಿಗೆ 18ನೇ ದಿನ ಸಂದಿದೆ. ಅಪ್ಪು ಹಠಾತ್ತಾಗಿ ಉಸಿರು ನಿಲ್ಲಿಸಿ ನಾಳೆಗೆ 19ನೇ ದಿನ. ಅಪ್ಪು ಉಸಿರು ನಿಂತರೂ ಅವರ ಹೆಸರು ಮಾತ್ರ ಅಜರಾಮರ. ಯುವರತ್ನನೆಂಬ ಬೆಳಕು ಇಲ್ಲದನ್ನು ಇನ್ನೂ ಕೂಡ ಅಭಿಮಾನಿಗಳಿಗೆ, ಕನ್ನಡಿಗರಿಗೆ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಈ ಹಿನ್ನೆಲೆ ಫಿಲ್ಮ್ ಚೇಂಬರ್ ಮಂಗಳವಾರ ಅರಮನೆ ಮೈದಾನದಲ್ಲಿ ‘ಪುನೀತ ನಮನ’ ಕಾರ್ಯಕ್ರಮ ಹಮ್ಮಿಕೊಂಡಿದೆ.
PALACE GROUNDS ಗಾಯತ್ರಿ ವಿಹಾರ್ ನಲ್ಲಿ ನಡೆಯಲಿರುವ ಈ ನುಡಿನಮನ ಕಾರ್ಯಕ್ರಮಕ್ಕೆ ತಯಾರಿ ಮುಗಿದಿದೆ. ನುಡಿನಮನ ಕಾರ್ಯಕ್ರಮವು ಮಧ್ಯಾಹ್ನ 3 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಯ ತನಕ ನಡೆಯಲಿದೆ. ಈ ಕಾರ್ಯಕ್ರಮಕ್ಕೆ 1500 ಮಂದಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ.. ಮುಖ್ಯಮಂತ್ರಿಗಳು, ಸಚಿವರು ಹಾಗೂ ವಿರೋಧ ಪಕ್ಷದ ನಾಯಕರಿಗೆ ಹಾಗೂ ನಾಲ್ಕು ರಾಜ್ಯದ ನಟರಿಗೆ, ಮೈಸೂರು ಒಡೆಯರಿಗೆ ಆಹ್ವಾನಿಸಲಾಗಿದೆ. ಇನ್ನು ನುಡಿನಮನ ಕಾರ್ಯಕ್ರಮದ ದಿನ ಚಿತ್ರೀಕರಣ ಸಂಪೂರ್ಣ ಸ್ಥಬ್ಧವಾಗಿರಲಿದೆ.
ಸ್ಯಾಕ್ಸೋಫೋನ್ ವಾದನ, ಪುನೀತ್ ನಡೆದು ಬಂದ ಹಾದಿಯ ಮೆಲುಕು, ಪುನೀತ ನಮನ ಕಾರ್ಯಕ್ರಮಕ್ಕೆ ನಾಗೇಂದ್ರ ಪ್ರಸಾದ್ ಹಾಡು, ಪುನೀತ್ ರಾಜ್ಕುಮಾರ್ ಟ್ರಿಬ್ಯೂಟ್ ಮಾಡಲಾಗುತ್ತೆ. ಕಾರ್ಯಕ್ರಮದ ನಡುನಡುವೆ ಅಪ್ಪು ನಟನೆಯ ಹಾಡುಗಳು ಪ್ಲೇ ಆಗುತ್ತೆ. ಹಾಗೂ ಸಂಗೀತ ಕಾರ್ಯಕ್ರಮಕ್ಕೆ ಅವಕಾಶ ಇರೋದಿಲ್ಲ. ನುಡಿನಮನ ಕಾರ್ಯಕ್ರಮಕ್ಕೆ ದಕ್ಷಿಣಭಾರತದ ಖ್ಯಾತನಟರಿಗೆ ಅಷ್ಟೇ ಆಹ್ವಾನ ನೀಡಿರುವರು. ಕಮಲ್ ಹಾಸನ್, ವಿಶಾಲ್, ಪ್ರಕಾಶ್ ರಾಜ್, ಜಗಪತಿ ಬಾಬು, ಅಲಿ, ತಮಿಳುನಟ ವಿಜಯ್, ಸುದೀಪ್, ದರ್ಶನ್, ವಿಜಯ್, ಬಿ.ಸರೋಜಾದೇವಿ, ಭಾರತಿ, ಸುಮಲತಾ, ರಕ್ಷಿತಾ, ರಮ್ಯಾ ಭಾಗವಹಿಸಲಿದ್ದಾರೆ. ಸಾಹಿತ್ಯ ವಲಯದಿಂದ ಸುಧಾ ಮೂರ್ತಿ, ಬರಗೂರು ರಾಮಚಂದ್ರಪ್ಪ ಸೇರಿದಂತೆ ಸಾಹಿತಿಗಳು, ಮಹಾರಾಜ ಯದುವೀರ್ ಒಡೆಯರ್ ಹಾಗೂ ಯದುವೀರ್ ಅವ್ರ ತಂದೆ ಅವರಿಗೂ ಆಹ್ವಾನ ಕೊಡಲಾಗಿದೆ.
ಸಿನಿರಂಗದವರಲ್ಲದೇ ರಾಜಕೀಯ, ಕ್ರೀಡಾ, ಸಾಹಿತ್ಯ ಕ್ಷೇತ್ರದ ಗಣ್ಯರಿಗೆ ಆಹ್ವಾನ ಕೊಡಲಾಗಿದೆ. ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿಕೆಶಿ ಅವರಿಗೆ ಆಹ್ವಾನ ಕೊಡಲಾಗಿದ್ದು, ದೊಡ್ಮನೆ ಕುಟುಂಬಸ್ಥರು ‘ಪುನೀತ ನಮನ’ದಲ್ಲಿ ಭಾಗಿಯಾಗಲಿದ್ದಾರೆ. ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ, ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ರಾಜ್ ಕುಟುಂಬಸ್ಥರು ಉಪಸ್ಥಿತರಿರಲಿದ್ದಾರೆ ಎನ್ನಲಾಗಿದೆ.

0 Comments