Ticker

6/recent/ticker-posts

Ad Code

Responsive Advertisement

ಪುನೀತ್‌ ರಾಜ್‌ಕುಮಾರ್‌ ನಿಧನಕ್ಕೆ ಆಮ್‌ ಆದ್ಮಿ ಪಾರ್ಟಿ ಶ್ರದ್ಧಾಂಜಲಿ

ವರನಟ ಡಾ. ರಾಜ್‌ಕುಮಾರ್‌ರವರ ಪುತ್ರ ಹಾಗೂ ಖ್ಯಾತ ನಟ ಪುನೀತ್‌ ರಾಜ್‌ಕುಮಾರ್‌ರವರ ಅಕಾಲಿಕ ನಿಧನಕ್ಕೆ ಆಮ್‌ ಆದ್ಮಿ ಪಾರ್ಟಿ ಶ್ರದ್ಧಾಂಜಲಿ ಕೋರಿದ್ದು, ಇದು ಚಿತ್ರರಂಗಕ್ಕೆ ಮಾತ್ರವಲ್ಲದೇ ಇಡೀ ನಾಡಿಗೆ ತುಂಬಲಾರದ ನಷ್ಟವೆಂದು ಅಭಿಪ್ರಾಯಪಟ್ಟಿದೆ.


ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, “ಕನ್ನಡದ ಖ್ಯಾತ ನಟನಾಗಿ ಅಸಂಖ್ಯಾಂತ ಅಭಿಮಾನಿಗಳನ್ನು ಹೊಂದಿದ್ದ ಪುನೀತ್‌ ರಾಜ್‌ಕುಮಾರ್‌ರವರ ಅಕಾಲಿಕ ನಿಧನವು ಆಘಾತ ಉಂಟುಮಾಡಿದೆ. ಡಾ. ರಾಜ್‌ಕುಮಾರ್‌ರವರ ಮಗನಾದ ಅವರು ತಂದೆಯಂತೆಯೇ ಸರಳ, ಸಹೃದಯಿ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು. ಬಾಲ್ಯದಿಂದಲೂ ಅನೇಕ ಅತ್ಯುತ್ತಮ ಸಿನಿಮಾಗಳಲ್ಲಿ ನಟಿಸಿದ ಅವರು ಅಭಿಮಾನಿಗಳ ಹೃದಯಾಂತರಾಳದಲ್ಲಿ ಸ್ಥಾನ ಪಡೆದಿದ್ದಾರೆ. ದೇವರು ಅವರನ್ನು ಇಷ್ಟು ಬೇಗ ಕರೆಸಿಕೊಳ್ಳಬಾರದಿತ್ತು” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

“ನಟನೆಯ ಜೊತೆಗೆ ಹಾಡುಗಾರಿಕೆ ಕಲೆಯೂ ಪುನೀತ್‌ ರಾಜ್‌ಕುಮಾರ್‌ರವರಿಗೆ ಒಲಿದಿತ್ತು. ಅವರ ಸುಮಧುರ ಕಂಠದ ಅನೇಕ ಹಾಡುಗಳು ಸಂಗೀತಪ್ರಿಯರ ಮನಗೆದ್ದಿವೆ. ಕಿರುತರೆಯ ರಿಯಾಲಿಟಿ ಶೋಗಳನ್ನೂ ಯಶಸ್ವಿಯಾಗಿ ನಡೆಸಿಕೊಟ್ಟ ಅವರು ಬಹುಮುಖ ಪ್ರತಿಭೆ. ಎಲ್ಲಕ್ಕಿಂತ ಮುಖ್ಯವಾಗಿ, ಅಷ್ಟು ದೊಡ್ಡ ಕುಟುಂಬದಲ್ಲಿ ಜನಿಸಿದ್ದರೂ, ಮುಗಿಲೆತ್ತರದ ಕೀರ್ತಿ ಗಳಿಸಿದ್ದರೂ, ಕಿಂಚಿತ್ತೂ ಅಹಂಕಾರವಿಲ್ಲದೇ, ಎಂದೂ ಹೆಸರು ಕೆಡಿಸಿಕೊಳ್ಳದೇ ಸದಾ ನಗುಮೊಗದಿಂದ ಬದುಕಿದ್ದರು. ಅವರ ಈ ಸ್ವಭಾವವು ಸರ್ವರಿಗೂ ಮಾದರಿಯಾಗಬೇಕಿದೆ” ಎಂದು ಪೃಥ್ವಿ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ರವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ದುಃಖದಲ್ಲಿ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಘಟಕ ಭಾಗಿಯಾಗುತ್ತಿದೆ. ಅಪ್ಪು ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಪೃಥ್ವಿ ರೆಡ್ಡಿಯವರು ಹೇಳಿದ್ದಾರೆ.




Post a Comment

0 Comments

Ad Code

Responsive Advertisement