ಕೋವಿಡ್ ಸಂಕಷ್ಟದ ಸಮಯದಲ್ಲಿ ಅತ್ಯಂತ ಮಹತ್ವದ ಸೇವೆ ಸಲ್ಲಿಸಿದವರೆಂದರೆ ಆರೋಗ್ಯ ಕಾರ್ಯಕರ್ತರು. ಅವರಲ್ಲಿ ಬಹುತೇಕರು ತಮ್ಮ ಕುಟುಂಬವನ್ನೇ ನಿರ್ಲಕ್ಷಿಸಿ ಸಮಾಜದ ಸೇವೆಗೆ ನಿಂತರು. ಇಂತಹ ನಿಸ್ವಾರ್ಥ ಕಾರ್ಯಕರ್ತರಿಗೆ ಗೌರವ ಸಲ್ಲಿಸಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯ. ಆದರೆ ಅವರಿಗೆ ಗೌರವ ಸಲ್ಲಿಸುವುದು ಹಾಗಿರಲಿ, ಕನಿಷ್ಠ ಅವರ ಹಕ್ಕಿನ ನ್ಯಾಯವೂ ಸಿಗುತ್ತಿಲ್ಲ.
ಈ ವರ್ಷ ಎಂಡಿ ಪರೀಕ್ಷೆ ಬರೆದ ಬಹುತೇಕರು ಆರೋಗ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಬರೆದ ಪರೀಕ್ಷೆಯ ಮೌಲ್ಯಮಾಪನ ಸರಿಯಾಗಿರದೇ ಹೋದಲ್ಲಿ ಮರುಮೌಲ್ಯಮಾಪನ ಮಾಡಿಸಿಕೊಳ್ಳಬೇಕಾದದ್ದು ಅವರ ಸಹಜ ಹಕ್ಕು. ಆರೋಗ್ಯ ಕಾರ್ಯಕರ್ತರ ಈ ಹಕ್ಕನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಿರಾಕರಿಸುತ್ತಿದೆ. ತಾನು ಮಾಡಿದ್ದೇ ಸರಿ, ತನ್ನ ಮೌಲ್ಯಮಾಪಕರು ದೈವಾಂಶ ಸಂಭೂತರು, ಪ್ರಶ್ನಾತೀತರು ಎಂದು ರಾಆವಿವಿ ಭಾವಿಸಿದಂತಿದೆ. ಈ ಹಿಂದೆ ಇದೇ ರೀತಿ ಮೊಂಡುತನ ತೋರಿ, ಎರಡು ಬಾರಿ (೨೦೧೯ & ೨೦೨೦) ಹೈಕೋರ್ಟ್ ನಿಂದ ತಪರಾಕಿ ಹಾಕಿಸಿಕೊಂಡರೂ ರಾಆವಿವಿಗೆ ಬುದ್ದಿ ಬಂದಂತಿಲ್ಲ. ಸರ್ಕಾರ ಈ ವಿಚಾರವಾಗಿ ಖಂಡಿತವಾಗಿಯೂ ಮಧ್ಯಪ್ರವೇಶಿಸಿ, ರಾಆವಿವಿಯ ದುಂಡಾವರ್ತನೆಗೆ ಆರೋಗ್ಯ ಕಾರ್ಯಕರ್ತರ ಹಕ್ಕನ್ನು ಎತ್ತಿಹಿಡಿಯಬೇಕೆಂದು ಆಮ್ ಆದ್ಮಿ ಪಕ್ಷ ಯುವ ಘಟಕದ ಅಧ್ಯಕ್ಷ ಮುಕುಂದ ಗೌಡ ಆಗ್ರಹಿಸಿದರು.
ಮತ್ತು ಈ ಕೆಳಕಂಡ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.
೧) ಯಾವ ಯಾವ ವಿದ್ಯಾರ್ಥಿಗಳು ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆಯೋ ತಕ್ಷಣವೇ ಅವರ ಮರುಮೌಲ್ಯಮಾಪನವನ್ನು ಸರಿಯಾಗಿ ಮತ್ತು ಪಾರದರ್ಶಕವಾಗಿ ಮಾಡಬೇಕು.
೨) ಬೇಕಾಬಿಟ್ಟಿ ಮೌಲ್ಯಮಾಪನ ಮಾಡಿರುವ ಸಿಬ್ಬಂದಿಗಳಿಗೆ ದಂಡ ವಿಧಿಸಿ, ಕೆಲಸದಿಂದ ವಜಾ ಮಾಡಬೇಕು
೩) ಕೋರ್ಟ್ ಗೆ ಹೋಗಿ ಕಾಲವ್ಯಯ ಮಾಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಲ್ಲು ಹಾಕುವ ಬದಲು ತಕ್ಷಣವೇ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಕುಲಪತಿಗಳ ಮಟ್ಟದಲ್ಲೇ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವಂತಾಗಲು ಸರ್ಕಾರ ಕ್ರಮ ಕೈಗೊಳ್ಳಬೇಕು.
ಈ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಪೂರೈಸದೇ ಹೋದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಮುಕುಂದ್ ಗೌಡ ಎಚ್ಚರಿಸಿದರು.


0 Comments