ಬಳ್ಳಾರಿ,ಸೆ.02:ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೊಸ ಶಿಷ್ಯವೇತನ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಗೆ ಸೆ.5ರಂದು ಮುಖ್ಯಮಂತ್ರಿಗಳು ಬೆಂಗಳೂರಿನ ವಿಧಾನಸೌಧದಲ್ಲಿ ಚಾಲನೆ ನೀಡಲಿದ್ದಾರೆ.
ಸದರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಿಂದ 5 ಜನ ವಿದ್ಯಾರ್ಥಿಗಳು ಭಾಗಿಯಾಗಲಿದ್ದು, ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಸೆ.5ರಂದು ಬೆಳಗ್ಗೆ 9.30ಕ್ಕೆ ಕಾರ್ಯಕ್ರಮವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೆಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
10ನೇ ತರಗತಿ ಪೂರ್ಣಗೊಳಿಸಿದ ನಂತರ ಕರ್ನಾಟಕ ರಾಜ್ಯದ ರೈತರ ಎಲ್ಲಾ ಮಕ್ಕಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಪದ್ದತಿಯ ಮೂಲಕ ಕರ್ನಾಟಕ ಸರ್ಕಾರವು ಹೊಸ ಶಿಷ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ.
ಪದವಿಯ ಮುಂಚೆ ಪಿ.ಯು.ಸಿ/ಐ.ಟಿ.ಐ/ಡಿಪ್ಲೊಮಾ ಹುಡುಗರಿಗೆ ರೂ.2,500, ಹುಡುಗಿಯರು/ಅನ್ಯ ಲಿಂಗದವರಿಗೆ ರೂ.3,000, ಎಲ್ಲಾ ಬಿ.ಎ/ಬಿ.ಎಸ್.ಸಿ/ಬಿ.ಕಾಂ ಇತ್ಯಾದಿ
ಎಂ.ಬಿ.ಬಿ.ಎಸ್/ಬಿ.ಇ/ಬಿ.ಟೆಕ್ ಮತ್ತು ವೃತ್ತಿಪರ ಕೋರ್ಸ್ಗಳನ್ನು ಹೊರತುಪಡಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ರೂ.5,000, ಹುಡುಗಿಯರಿಗೆ ರೂ.5,500, ಎಲ್.ಎಲ್.ಬಿ/ಪ್ಯಾರಾ ಮೆಡಿಕಲ್/ಬಿ.ಫಾರ್ಮ/ನರ್ಸಿಂಗ್, ಇತ್ಯಾದಿ ವೃತ್ತಿಪರ ಕೋರ್ಸ್ಗಳನ್ನು ಅಭ್ಯಾಸಿಸುವ ವಿದ್ಯಾರ್ಥಿಗಳಿಗೆ ರೂ.7,500, ವಿದ್ಯಾರ್ಥಿನಿಯರಿಗೆ ರೂ.8,000, ಎಂ.ಬಿ.ಬಿ.ಎಸ್/ಬಿ.ಇ/ಬಿ.ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ರೂ.10,000, ವಿದ್ಯಾರ್ಥಿನಿಯರಿಗೆ ರೂ.11,000 ವಾರ್ಷಿಕ ಹಣ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
*ಸದರಿ ಯೋಜನೆಯ ಪ್ರಮುಖ ಷರತ್ತುಗಳು: ರೈತರ ಮಕ್ಕಳು ಕರ್ನಾಟಕ ರಾಜ್ಯದ ಅನುದಾನದಿಂದ ಪಾವತಿಸುವಂತಹ ಒಂದು ಶಿಷ್ಯ ವೇತನಕ್ಕೆ ಮಾತ್ರ ಅರ್ಹರಾಗುತ್ತಾರೆ. ಆದರೆ, ಮೆರಿಟ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ರ್ಯಾಂಕ್ ಇತ್ಯಾದಿಗಳ ಆಧಾರದ ಮೇಲೆ ಪಡೆಯುವ ಶಿಷ್ಯವೇತನ/ಪ್ರಶಸ್ತಿಗಳನ್ನು ರೈತರ ಮಕ್ಕಳು ಪಡೆದಿದ್ದರೂ, ಈ ಶಿಷ್ಯವೇತನವನ್ನು ಪಡೆಯಲು ಅರ್ಹರಾಗುತ್ತಾರೆ. ರೈತರ ಮಕ್ಕಳ ತಂದೆ-ತಾಯಿ ಇಬ್ಬರೂ ಕೃಷಿ ಜಮೀನಿನ ಒಡೆಯರಾಗಿದ್ದರೆ, ಈ ಯೋಜನೆಯಲ್ಲಿ ಒಂದು ಶಿಷ್ಯವೇತನಕ್ಕೆ ಮಾತ್ರ ರೈತರ ಮಕ್ಕಳು ಅರ್ಹರಾಗಿರುತ್ತಾರೆ. ಶಿಷ್ಯವೇತನವು ಶಿಕ್ಷಣದ ಯಾವುದೇ ಕೋರ್ಸಿಗೆ ಸೆಮಿಸ್ಟರ್/ಶೈಕ್ಷಣಿಕ ವರ್ಷಗಳಿಗೆ ಮಿತಿಯಾಗಿರತಕ್ಕದ್ದು, ಕೋರ್ಸ್ಗೆ ಸೆಮಿಸ್ರ್ನಲ್ಲಿ/ಶೈಕ್ಷಣಿಕ ವರ್ಷದಲ್ಲಿ ಅನುತ್ತೀರ್ಣ ಹೊಂದಿ ಪುನಃ ಆ ಸೆಮಿಸ್ಟರ್/ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸದ ಪುನರಾವರ್ತನೆಯಾದರೆ (ಪುನಃ ಪರೀಕ್ಷೆ ತೆಗೆದುಕೊಂಡರೆ) ವಿದ್ಯಾರ್ಥಿಗಳು ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುವುದಿಲ್ಲ. ಶಿಷ್ಯ ವೇತನ ಯಾವುದಾದರೂ ಒಂದು ಕೋರ್ಸ್ಗೆ ಮಾತ್ರ ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ.
ಯೋಜನೆಯ ಉದ್ಘಾಟನಾ ಕಾರ್ಯಕ್ರಮವು ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ನೇರ ಪ್ರಸಾರವಾಗುತ್ತಿದ್ದು, ಜಿಲ್ಲೆಯ ಎಲ್ಲಾ ರೈತ ಭಾಂದವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ತಾಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಹೋಬಳಿಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು.
VARTHAJALA- BELLARY.
0 Comments