ಮಲ್ಲೇಶ್ವರದ ಇಡ್ಲಿ ಪ್ರಿಯರಿಗೆ ಮಲ್ಲೇಶ್ವರದ ರೈಲು ನಿಲ್ದಾಣಕ್ಕೆ ಅಂಟಿಕೊಂಡಿರುವ ಅಂದಿನ ನಾರ್ತ್ಸೈಡ್ ಆಸ್ಪತ್ರೆ ಇಂದಿನ ಮಣಿಪಾಲ್ ನಾರ್ತ್ಸೈಡ್ ಆಸ್ಪತ್ರೆ ಎದುರಿಗಿರುವ ರಾಘವೇಂದ್ರ ಸ್ಟೋರ್ಸ್ ಗೊತ್ತು ! ಶ್ರೀ.ರಾಘವೇಂದ್ರ ಸ್ಟೋರ್ಸ್ ! ಇಡ್ಲಿ ವಡೆ ಬೆಣ್ಣೆ ಖಾರಭಾತ್ ಕೇಸರಿ ಭಾತ್ ಶ್ಯಾವಿಗೆಭಾತ್ ಹೀಗೊಂದಷ್ಟು ಮತ್ತು ಎದುರಿಗೆ ಮತ್ತೊಂದು ಅಂಗಡಿಯಲ್ಲಿ ದೋಸೆ ಸಿಗುವುದು ಗೊತ್ತು.ವೀಣಾ ಸ್ಟೋರ್ಸ್ ಮತ್ತು ರಾಘವೇಂದ್ರ ಸ್ಟೋರ್ಸ್ ಇವುಗಳ ನಡುವೆ ಒಂದು ಪೈಪೋಟಿಯೂ ಇದೆ.
ಹೆಚ್ಚೂ ಕಡಿಮೆ ಎರಡೂ ಅಂಗಡಿಗಳೂ ಒಂದೇ ಗಾತ್ರದ ಅಂಗಡಿಗಳು ಒಂದೇ ಸಂಖ್ಯೆಯ ಸಿಬ್ಬಂದಿ.ನಿನ್ನೆ ದಿನ ಶ್ರೀ.ವಿ ಶ್ರೀನಿವಾಸರಾಜು ಅವರು ವೀಣಾ ಸ್ಟೋರ್ಸ್ ಮಾಲೀಕರಾದ ಪ್ರದೀಪ್ ಅವರ ವಿನಯವಂತಿಕೆ ಪ್ರಶಂಸೆ ಮಾಡಿ ವೀಣಾ ಸ್ಟೋರ್ಸ್ ಬಗ್ಗೆ ಬರೆದಿದ್ದೀರಾ ಅಂದಾಗ ಹೌದು ಹಿಂದೆಯೇ ಬರೆದಿದ್ದೆ ಅಂದುಕೊಂಡಾಗ ನೆನಪಾಗಿದ್ದು "ನಾರಾಯಣ" ಕಳೆದ 43 ವರ್ಷಗಳಿಂದ ಶ್ರೀ.ರಾಘವೇಂದ್ರ ಸ್ಟೋರ್ಸಿನಲ್ಲಿರುವ ನಮ್ಮ ವಯಸ್ಸಿನ ಹಳಬರ ಅಚ್ಚುಮೆಚ್ಚಿನ ನಾರಾಯಣ.
ನಾವೆಲ್ಲಾ ಚಿಕ್ಕ ಹುಡುಗರಿದ್ದಾಗ ನಾರಾಯಣ ಕೂಡಾ ಹುಡುಗ.ರಾಮಣ್ಣ ಇಡ್ಲಿ ಹೋಟೆಲ್ ಅಂತ ಕೆಲವರು ಕರೆಯುತ್ತಿದ್ದರು.ರಾಮಣ್ಣ ಅಂತಲೋ ರಾಮನಾಥನ್ ಅಂತಲೋ ಬಿಳಿ ಪಂಚೆ ಬಿಳಿ ಷರಟು ಧರಿಸುತ್ತಿದ್ದ ವ್ಯಕ್ತಿ ಹೋಟೆಲ್ ನಡೆಸುತ್ತಿದ್ದರು.ಅವರ ಶ್ರೀಮತಿ ಕ್ಯಾಷಿಯರ್ ! ಅವರ ಮಗ ಬೈಕಿನಲ್ಲಿ ಆಗಾಗ ಬಂದು ಹೋಗುತ್ತಿದ್ದರು.ಮನೆಯಲ್ಲಿ ರುಬ್ಬಿದ ಚಟ್ನಿಯೋ ವಡೆಯ ಹಿಟ್ಟನ್ನೋ ತಂದುಕೊಡುತ್ತಿದ್ದರು.ಕೆಲವು ವರ್ಷಗಳ ಬಳಿಕ ಮಾಲೀಕರ ಮಡದಿ ನಿಧನರಾದರು.ಅದಾದ ನಂತರ ಮಾಲೀಕರು.ಕೆಲ ಸಮಯ ಮಾಲೀಕರ ಮಗ ಮತ್ತಿತ್ತರ ಬಂಧುಗಳು ಹೋಟೆಲ್ ನಡೆಸುತ್ತಾ ಬಂದರೂ.ಆಗಲೂ ಮಹಿಳೆಯೊಬ್ಬರು ಕ್ಯಾಷಿಯರ್ ಒಂದಷ್ಟು ಜನ ಹುಡುಗರು ಕೌಂಟರ್ ಮತ್ತು ಒಳಗಡೆ ಕಿಚನ್.ಎಲ್ಲರೂ ಕೂಗುತ್ತಿದ್ದ ಒಂದೇ ಹೆಸರು ನಾರಾಯಣ !.
ನಾರಾಯಣ ಒಂದು ಪ್ಲೇಟ್ ಇಡ್ಲಿ ವಡೆ ಒಂದು ಬೆಣ್ಣೆ ಆಮೇಲೆ ಒಂದು ಕಾಫಿ.ನಾರಾಯಣ ಚಟ್ನಿ ಅಂತ ಎರಡೆರಡು ಸಲ ಕೆಲವೊಮ್ಮೆ ಮೂರು ಸಲ ಚಟ್ನಿ ಹಾಕಿಸಿಕೊಂಡಿದ್ದೂ ಇದೆ.ಒಮ್ಮೆ ಚಟ್ನಿ ಖಾಲಿಯಾಗಿತ್ತು.ಚಟ್ನಿ ಬದಲು ಚಕ್ಕುಲಿ ಕೊಡಿ ಅಂತ ರಾಮಣ್ಣ ಅವರ ಬಳಿ ಕೇಳಿದ್ದೆ ಮುಖ ಮುಖ ನೋಡಿದ್ದರು.ಅಂದ ಹಾಗೆ ಈ ಶ್ರೀ.ರಾಘವೇಂದ್ರ ಸ್ಟೋರ್ಸಿನ ಹುಡುಗರಿಗೂ ಕೊರೋನಾ ಬಂದು ಒಂದಷ್ಟು ಸಮಯ ಅಂಗಡಿ ಮುಚ್ಚಿತ್ತು.ಮತ್ತೆ ಪುನರಾರಂಭ.ಪುನಃ ಜನ ಮರುಳೋ ಜಾತ್ರೆ ಮರುಳೋ ! ನಾರಾಯಣ ನಾರಾಯಣ ನಾರಾಯಣ.ಈ ಹುಡುಗರನ್ನೆಲ್ಲಾ ನೋಡಿದರೆ ಖುಷಿಯಾಗುತ್ತದೆ. ಅಂಗಡಿ ಹೆಸರೇನೋ ಪ್ರಚಲಿತವಾಗುತ್ತದೆ.ಅಲ್ಲಿ ಕೆಲಸ ಮಾಡುವ ಮಂದಿಯನ್ನೂ ನೆನಪಿಟ್ಟುಕೊಳ್ಳಬೇಕು ಅಂತ ನನ್ನ ಬಯಕೆ ಹಾಗಾಗಿ ಈ ನಾರಾಯಣ ಅವರನ್ನು ಪರಿಚಯಿಸಿದ್ದೇನೆ.
-C.N.RAMESH

0 Comments