ಬೆಂಗಳೂರಿನಲ್ಲಿ ಕೊರೊನಾ ಲಸಿಕೆಗಳಿಗೆ ತಿಂಗಳುಗಟ್ಟಲೆ ಅಭಾವ ಉಂಟಾದ ನಂತರ, ಬಿಬಿಎಂಪಿ ಅಧಿಕ ಪ್ರಮಾಣದ ಲಸಿಕೆಗಳನ್ನು ಪಡೆದುಕೊಂಡಿದ್ದು, ಕಡಿಮೆ ಲಸಿಕೆ ಪೂರೈಕೆ ಮಾಡಿದ್ದ ಸ್ಥಳಗಳಲ್ಲಿ ಹೆಚ್ಚಿನ ಲಸಿಕೆಗಳನ್ನು ಒದಗಿಸಲು ಯೋಜನೆ ರೂಪಿಸಿದೆ.
ಈಚೆಗಷ್ಟೇ ಅಭಿವೃದ್ಧಿ ಆಯುಕ್ತರು ಹಾಗೂ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಕೊರೊನಾ ಲಸಿಕೆಗಳನ್ನು ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಪತ್ರ ಬರೆದಿದ್ದರು.
ರಾಜ್ಯಕ್ಕೆ ಪ್ರತಿ ದಿನ 5 ಲಕ್ಷ ಡೋಸ್ ಕೋವಿಡ್ ಲಸಿಕೆ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈಗ ಪ್ರತಿ ದಿನ 3.5 ಲಕ್ಷದಿಂದ 4 ಲಕ್ಷ ಲಸಿಕೆ ರಾಜ್ಯಕ್ಕೆ ಪೂರೈಕೆ ಆಗುತ್ತಿದೆ. ಸೆಪ್ಟೆಂಬರ್ ತಿಂಗಳಿಂದ ಪ್ರತಿ ದಿನ 5 ಲಕ್ಷ ಲಸಿಕೆ ಹಾಕಲು ರಾಜ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ಸಂಗತಿಯನ್ನು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಅವರ ಗಮನಕ್ಕೆ ತರಲಾಯಿತು. ರಾಜ್ಯದ ಈ ಪ್ರಸ್ತಾವನೆಗೆ ಅವರು ಒಪ್ಪಿಗೆ ಸೂಚಿಸಿದರು.
ಮುಂದಿನ ದಿನಗಳಲ್ಲಿ ಪ್ರತಿದಿನ 5 ಲಕ್ಷ ಡೋಸ್ ಲಸಿಕೆ ನೀಡುವ ಭರವಸೆ ನೀಡಿದರು ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಇದುವರೆಗೆ 1 ಕೋಟಿ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಬಿಬಿಎಂಪಿ ಮತ್ತು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗುರುವಾರದ ವೇಳೆಗೆ 1 ಕೋಟಿ ಮಂದಿಗೆ ಲಸಿಕೆ ಹಾಕಿಸುವಲ್ಲಿ ಬೆಂಗಳೂರು ಜಿಲ್ಲಾಡಳಿತ ಹಾಗೂ ಬಿಬಿಎಂಪಿ ಯಶಸ್ವಿಯಾಗಿದೆ.
ಗುರುವಾರದವರೆಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಟ್ಟು 1,00,34,598 ಮಂದಿ ಲಸಿಕೆ ಪಡೆದಿದ್ದಾರೆ. ಇವರಲ್ಲಿ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದವರು 24,43,914 ಮಂದಿ ಹಾಗೂ ಒಂದು ಡೋಸ್ ಮಾತ್ರ ಪಡೆದವರ ಸಂಖ್ಯೆ 75,90,684 ಆಗಿದೆ. ಬೆಂಗಳೂರು ನಗರ ಜಿಲ್ಲೆಯ 5 ತಾಲೂಕುಗಳು, 198 ವಾರ್ಡ್ಗಳು, 6 ಪುರಸಭೆಗಳು, 1 ನಗರಸಭೆ, 87 ಗ್ರಾಮ ಪಂಚಾಯಿತಿಗಳ 1038 ಗ್ರಾಮಗಳಲ್ಲಿ ಈ ಲಸಿಕೆಗಳನ್ನು ನೀಡಲಾಗಿದೆ.
ಬೆಂಗಳೂರಿಗೆ ಪ್ರತಿದಿನ ಕನಿಷ್ಠ 75 ಸಾವಿರ ಡೋಸ್ಗಳನ್ನು ವಿತರಿಸಬೇಕೆಂದು ನಾವು ವಿನಂತಿಸಿದ್ದೆವು ಮತ್ತು ಕಳೆದ ಕೆಲವು ದಿನಗಳಿಂದ ಪೂರೈಕೆ ಗಣನೀಯವಾಗಿ ಸುಧಾರಿಸಿದೆ. ಬಿಬಿಎಂಪಿ ದಿನನಿತ್ಯ ಸರಾಸರಿ 35ರಿಂದ 40 ಸಾವಿರ ಡೋಸ್ಗಳನ್ನು ಪಡೆಯುತ್ತಿದ್ದು, ಕಳೆದ ಐದು ದಿನಗಳಿಂದ ಲಸಿಕೆ ಪೂರೈಕೆ ದಿನಕ್ಕೆ 65 ರಿಂದ 70 ಸಾವಿರಕ್ಕೆ ತಲುಪಿದೆ ಎಂದು ಗುಪ್ತಾ ಹೇಳಿದ್ದಾರೆ.
ಲಸಿಕೆ ಪೂರೈಕೆ ಹೆಚ್ಚುತ್ತಿದ್ದಂತೆ ಸಜ್ಜಾಗಿರುವ ಬಿಬಿಎಂಪಿ, ಮೊಬೈಲ್ ಲಸಿಕಾ ಶಿಬಿರಗಳನ್ನು ಪುನರಾರಂಭಿಸಲು ಹಾಗೂ ಮಿನಿ ವ್ಯಾಕ್ಸಿನೇಷನ್ ಶಿಬಿರಗಳನ್ನು ತೆರೆದು ಹಿಂದುಳಿದ ಪ್ರದೇಶಗಳಿಗೆ ಲಸಿಕೆ ತಲುಪಿಸುವ ಕಾರ್ಯಕ್ಕೆ ಯೋಜನೆ ಹಾಕಿಕೊಂಡಿದೆ.
'ಈ ಹಿಂದೆ ಲಸಿಕೆ ಕೊರತೆಯಿಂದಾಗಿ, ನಾವು ಮೊಬೈಲ್ ಲಸಿಕಾ ಶಿಬಿರಗಳನ್ನು ಸ್ಥಗಿತಗೊಳಿಸಿದ್ದೆವು. ವಾರ್ಡ್ನಲ್ಲಿ ಒಂದೇ ಕೇಂದ್ರಕ್ಕೆ ಲಸಿಕೆ ನೀಡುತ್ತಿದ್ದೆವು. ಇದೀಗ ಪೂರೈಕೆ ಹೆಚ್ಚಾಗಿರುವ ಕಾರಣವಾಗಿ ಕೊಳೆಗೇರಿ, ಗಾರ್ಮೆಂಟ್ ಫ್ಯಾಕ್ಟರಿಗಳು ಹಾಗೂ ಇತರೆ ಕಡೆಗಳಲ್ಲಿ ಶಿಬಿರಗಳನ್ನು ತೆರೆಯಲು ನಿರ್ಧರಿಸಿದ್ದೇವೆ' ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ. ರಣದೀಪ್ ಮಾಹಿತಿ ನೀಡಿದ್ದಾರೆ.
ಹಿಂದುಳಿದಿರುವ ಪ್ರದೇಶಗಳಲ್ಲಿ ಲಸಿಕೆ ಮಟ್ಟವನ್ನು ಸುಧಾರಿಸುವ ಗುರಿ ಹೊಂದಿರುವ ಬಿಬಿಎಂಪಿ, ಒಂದೇ ಲಸಿಕಾ ಕೇಂದ್ರ ರೂಪಿಸುವ ಬದಲು ನಿವಾಸಿಗಳಿಗೆ ಹತ್ತಿರ ಶಿಬಿರಗಳನ್ನು ಆಯೋಜನೆ ಮಾಡಲು ಯೋಜನೆ ರೂಪಿಸಿದೆ. ಲಸಿಕೆ ಕುರಿತು ಹಿಂಜರಿಕೆಯಿಂದಾಗಿ ಕಡಿಮೆ ಲಸಿಕಾ ವ್ಯಾಪ್ತಿ ದಾಖಲಾಗಿರುವ ಪ್ರದೇಶಗಳಲ್ಲಿ ಲಸಿಕಾ ಶಿಬಿರಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸುತ್ತೇವೆ ಹಾಗೂ ಹೆಚ್ಚಿನ ಜನರಿಗೆ ಲಸಿಕೆ ನೀಡಲು ಪ್ರಯತ್ನಿಸುತ್ತೇವೆ ಎಂದು ರಣದೀಪ್ ಹೇಳಿದ್ದಾರೆ.

0 Comments