ಚೆನ್ನೈ: ಕೇಂದ್ರ ತನಿಖಾ ದಳ (ಸಿಬಿಐ) ಒಂದು ಸ್ವಾಯತ್ತ ಸಂಸ್ಥೆಯಾಗಿರಬೇಕು. ಅದು ಸಂಸತ್ಗೆ ಮಾತ್ರವೇ ವರದಿ ಸಲ್ಲಿಸುವಂತಿರಬೇಕು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಕೇಂದ್ರ ಸಂಸ್ಥೆಯ ಸ್ವಾಯತ್ತತೆ ಹಾಗೂ ಸ್ವಾತಂತ್ರ್ಯದ ಪರ ಧ್ವನಿ ಎತ್ತಿರುವ ಹೈಕೋರ್ಟ್, ಅದನ್ನು ರಾಜಕೀಯ ಹಿಡಿತದಿಂದ ಮುಕ್ತಗೊಳಿಸಬೇಕು ಎಂದು ಹೇಳಿದೆ.
’ಸಿಬಿಐಗೆ ಆದಷ್ಟು ಬೇಗನೇ ಹೆಚ್ಚಿನ ಅಧಿಕಾರದೊಂದಿಗೆ ಶಾಸನಬದ್ಧ ಮಾನ್ಯತೆ ಹಾಗೂ ವ್ಯಾಪ್ತಿಗಳನ್ನು ನೀಡಲು ಪ್ರತ್ಯೇಕ ಕಾಯ್ದೆ ರೂಪಿಸಲು ನಿರ್ಧಾರ ತೆಗೆದುಕೊಳ್ಳುವಂತೆ ಭಾರತ ಸರ್ಕಾರಕ್ಕೆ ಸೂಚಿಸಲಾಗಿದೆ. ಸರ್ಕಾರದ ಆಡಳಿತಾತ್ಮಕ ನಿಯಂತ್ರಣವಿಲ್ಲದೆ ಕಾರ್ಯನಿರ್ವಹಣೆ ಸ್ವಾಯತ್ತತೆ ಜತೆ ಸಿಬಿಐ ಅನ್ನು ಸ್ವತಂತ್ರಗೊಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕು’ ಎಂದು ಕೋರ್ಟ್ ಹೇಳಿದೆ.
’ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾದಂತೆ ಸಿಬಿಐ ಸ್ವಾಯತ್ತವಾಗಿರಬೇಕು. ಅದರಂತೆ ಸಂಸತ್ತಿಗೆ ಮಾತ್ರ ಹೊಣೆಗಾರನಾಗಿರಬೇಕು’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ’ಈ ಆದೇಶವು ಪಂಜರದಲ್ಲಿರುವ ಗಿಳಿಯನ್ನು ಬಿಡುಗಡೆ ಮಾಡುವ ಪ್ರಯತ್ನವಾಗಿದೆ’ ಎಂದಿರುವ ನ್ಯಾಯಾಲಯ, ಪ್ರಸ್ತುತದ ವ್ಯವಸ್ಥೆ ಕುರಿತು 12 ಅಂಶಗಳ ಸೂಚನೆಯನ್ನು ನೀಡಿದೆ.
’ಸಿಬಿಐ ನಿರ್ದೇಶಕರಿಗೆ ಸರ್ಕಾರದ ಕಾರ್ಯದರ್ಶಿಯ ಅಧಿಕಾರಗಳನ್ನು ನೀಡಬೇಕು. ಅವರು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮೂಲಕ ಹೋಗದೆ, ನೇರವಾಗಿ ಸಚಿವರು ಅಥವಾ ಪ್ರಧಾನಿಗೆ ವರದಿ ಸಲ್ಲಿಸುವಂತೆ ಇರಬೇಕು’ ಎಂದು ನ್ಯಾಯಾಲಯ ಸೂಚಿಸಿದೆ.
0 Comments