ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕರು ಮತ್ತು ಅಖಿಲ ಭಾರತ ಕಿಸಾನ್ ಸಭಾ(AIKS)ದ ಪ್ರಧಾನ ಕಾರ್ಯದರ್ಶಿಗಳೂ ಆದ ಹನನ್ ಮೊಲ್ಲಾರವರಿಗೆ ಮಂಡ್ಯದಲ್ಲಿ ರೈತ ಸನ್ಮಾನ ಮಾಡಲು ತೀರ್ಮಾನಿಸಲಾಗಿದೆ. ಕೇಂದ್ರ ಸರ್ಕಾರ ತಂದಿರುವ ರೈತ ದ್ರೋಹಿ, ಕಾರ್ಪೊರೇಟ್ ಪರವಾದ ಮೂರು ಕೃಷಿ ಕಾನೂನುಗಳ ವಿರುದ್ಧ ನವದೆಹಲಿಯ ಗಡಿಗಳಲ್ಲಿ ಕಳೆದ ನವೆಂಬರ್ ತಿಂಗಳಿನಿಂದ ನಡೆಯುತ್ತಿರುವ ರೈತರ ಸಮರಶೀಲ ಹೋರಾಟಕ್ಕೆ ನೇತೃತ್ವ ನೀಡುತ್ತಿರುವ ನಾಯಕರಲ್ಲಿ ಅಗ್ರಗಣ್ಯ ನಾಯಕ ಹನನ್ ಮೊಲ್ಲಾ.
ಇದೇ 28,29 ರಂದು ಮಂಡ್ಯ ನಗರದಲ್ಲಿ ನಡೆಯಲಿರುವ ಕೃಷಿ ಕೂಲಿಕಾರರ ಸಂಘದ ಅಖಿಲ ಭಾರತ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ಆಗಮಿಸುತ್ತಿರುವ ರೈತ ನಾಯಕರು 27 ರ ರಾತ್ರಿಯೇ ಮಂಡ್ಯ ಜಿಲ್ಲೆಗೆ ಆಗಮಿಸುತ್ತಿದ್ದು 27 ರ ರಾತ್ರಿ ಮದ್ದೂರಿನ ನಿಡಘಟ್ಟದಲ್ಲಿ ಅವರನ್ನು ರೈತ ಸಂಘದ ನೂರಾರು ಕಾರ್ಯಕರ್ತರು ಪುಷ್ಪಾರ್ಚನೆ ಮೂಲಕ ಸ್ವಾಗತಿಸಲಿದ್ದಾರೆ.
ಪಶ್ಚಿಮ ಬಂಗಾಳದ ಉಲ್ಬೇರಿಯಾ ಕ್ಷೇತ್ರದಿಂದ ಸತತವಾಗಿ ಎಂಟು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಹನನ್ ಮೊಲ್ಲಾ ದೇಶದ 500 ಕ್ಕೂ ಹೆಚ್ಚಿನ ರೈತ ಸಂಘಟನೆಗಳನ್ನು ಒಂದೆಡೆ ಬೆಸೆದು ಕೇಂದ್ರ ಸರ್ಕಾರದ ಕೃಷಿ ವಿರೋಧಿ ನೀತಿಗಳ ವಿರುದ್ಧ ಹೋರಾಟ ಬೆಸೆದ ಶಿಲ್ಪಿ. ಯೋಗೇಂದ್ರ ಯಾದವ್ ಸೇರಿದಂತೆ ಸಂಯುಕ್ತ ಕಿಸಾನ್ ಮೋರ್ಚಾದ ಕೇಂದ್ರ ಕಾರ್ಯಾಕಾರಿ ಸಮಿತಿಯ ಏಳು ಜನ ಸಂಚಾಲಕರಲ್ಲಿ ಒಬ್ಬರಾದ ಹನನ್ ಮೊಲ್ಲಾ ದೇಶದ ಅತಿದೊಡ್ಡ ರೈತ ಸಂಘಟನೆಯ ನಾಯಕ.
ದೆಹಲಿರೈತ ಹೋರಾಟದ ಭವಿಷ್ಯ ಮತ್ತು ರೈತ ಹಾಗೂ ರೈತಾಪಿ ಕೃಷಿಯ ಭವಿಷ್ಯದ ಕುರಿತು ತಿಳಿಯಲು ರೈತ ಚಳುವಳಿಯ ಬಲಿಷ್ಠ ಕೇಂದ್ರವಾದ ಮಂಡ್ಯ ಜಿಲ್ಲೆಯ ಜನರಿಗೂ ಕೂಡ ಆಸಕ್ತಿ ಇದ್ದು, ಸ್ವತಃ ಅದರ ಮುಖ್ಯ ನಾಯಕರ ಬಾಯಿಂದಲೇ ದೆಹಲಿ ಹೋರಾಟ ಕುರಿತು ಹೆಚ್ಚಿನ ವಿಷಯ ತಿಳಿದುಕೊಳ್ಳುವ ಸದವಕಾಶ ಹನನ್ ಮೊಲ್ಲಾ ರವರ ಭೇಟಿ ಯಿಂದ ಲಭ್ಯವಾಗಲಿದೆ...

0 Comments