ಮಧುಗಿರಿ - ಪಟ್ಟಣದ ಪುರಸಭೆಯ 107 ಅಂಗಡಿ ಮಳಿಗೆಗಳನ್ನು ಖಾಲಿ ಮಾಡಿಸಿ ಹೊಸದಾಗಿ ಟೆಂಡರ್ ಕರೆಯುವಂತೆ ಶಾಸಕ ಎಂ.ವಿ.ವೀರಭದ್ರಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳಿಗೆಗಳಿಗೆ ಹಳೆಯ ಬಾಡಿಗೆ ದರವನ್ನೇ ನೀಡುತ್ತಿದ್ದು, ಹೊಸ ಟೆಂಡರ್ ಪ್ರಕ್ರಿಯೆಯಿಂದ ಪುರಸಭೆಗೆ ಹೆಚ್ಚು ಆದಾಯ ಬರಲಿದೆ ಎಂದು ತಿಳಿಸಿದರು.
ಪಟ್ಟಣದ ಕೆಎಸ್ಆರ್ಟಿಸಿ ಡಿಪೋ ಆವರಣವನ್ನು 3 ಕೋಟಿ ರೂ ಅನುಧಾನದಲ್ಲಿ ಕಾಂಕ್ರೀಟಿಕರಣ ಗೊಂಡಿದ್ದು, ಅದನ್ನು ಶೀಘ್ರ ಉದ್ಘಾಟಿಸಲಾಗುವುದು ಎಂದ ಅವರು ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ವಿತರಿಸುವಂತೆ ಸಿಡಿಪಿಒ ಅವರಿಗೆ ಸೂಚಿಸಿದರು.
ಗಂಗಾ ಕಲ್ಯಾಣ ಯೋಜನೆ ಪಲಾನುಭವಿಗಳಿಗೆ ಕಳೆದ 3 ವರ್ಷಗಳಿಂದ ಮೋಟಾರು ಪಂಪ್ಗಳನ್ನು ಏಕೆ ವಿತರಿಸಿಲ್ಲ ಎಂದು ಅಂಬೇಡ್ಕರ್ ಆದಿಜಾಂಭವ ನಿಗಮದ ಅಧಿಕಾರಿಯನ್ನು ಪ್ರಶ್ನಿಸಿದಾಗ ಟೆಕ್ಸ್ಮೋ ಕಂಪನಿಯ ವಿರುದ್ದ ರಾಜ್ಯದ ವಿತರಕರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದರಿಂದ ಇಡೀ ರಾಜ್ಯದಲ್ಲಿ ಈ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ಮಾಹಿತಿ ನೀಡಿದರು.
ಮಳೆಗಾಲ ಪ್ರಾರಂಬವಾಗಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆಯಾಗದಂತೆ ರೈತರಿಗೆ ವಿತರಿಸಬೇಕೆಂದು ಕೃಷಿ ಸಹಾಯಕ ನಿರ್ದೇಶಕರಿಗೆ ಸೂಚಿಸಿ ಬೆಳೆ ವಿಮೆ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿ ನೀಡಿ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಿ ಎಂದರು.
ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅಂಬೇಡ್ಕರ್, ಜಗಜೀವನ ರಾಮ್ ಭವನಗಳನ್ನು ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ತಾಲೂಕಿನಲ್ಲಿ ಕೆಲ ಪಿಡಿಒಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆ.7ರಂದು ಪಿಡಿಒಗಳ ಸಭೆ ಕರೆದಿದ್ದು, ಆ ಸಭೆಯಲ್ಲಿ ಸರಿಯಾಗಿ ಕೆಲಸ ಮಾಡುವಂತೆ ಎಚ್ಚರಿಸಲಾಗುವುದು ಎಂದರು.
ತಾಲೂಕಿನಲ್ಲಿ ಮೊದಲನೆ ಮತ್ತು ಎರಡನೇ ಹಂತದ ಲಸಿಕೆ ಹಾಕಲಾಗಿದ್ದು, ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕ ಹಾಗೂ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ ಎಂದು ಟಿಎಚ್ಒ ರಮೇಶ್ ಬಾಬು ಸಭೆಗೆ ಮಾಹಿತಿ ನೀಡಿದಾಗ, ಕೋವಿಡ್ 3ನೇ ಅಲೆ ತಡೆಗಟ್ಟಲು ಆರೋಗ್ಯ ಇಲಾಖೆ ಸನ್ನದ್ದವಾಗಿದ್ದು, ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಶಾಸಕರು ತಿಳಿಸಿದರು.
ತಾ.ಪಂ ಇಒ ಡಿ.ದೊಡ್ಡಸಿದ್ದಯ್ಯ, ಆಡಳಿತಾಧಿಕಾರಿ ಡಾ.ಸುಬ್ರಾನಾಯ್ಕ, ಮುಖ್ಯಾಧಿಕಾರಿ ನಜ್ಮಾ, ಸಿಡಿಪಿಒ ಅನಿತಾ, ಲೋಕೋಪಯೋಗಿ ಇಲಾಖೆ ಎಇಇ ರಾಜಗೋಪಾಲ್, ಜಿ.ಪಂ ಎಇಇ ಸುರೇಶ್ ರೆಡ್ಡಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ರಾಮದಾಸು, ಭೂ ಸೇನಾ ನಿಗಮದ ಎಇಇ ಹನುಮಂತರಾಜು, ರೇಷ್ಮೆ ಇಲಾಖೆಯ ಲಕ್ಷ್ಮೀನರಸಯ್ಯ, ಅಬಕಾರಿ ಇಲಾಖೆಯ ರಾಮಮೂರ್ತಿ, ಸಾಮಾಜಿಕ ಅರಣ್ಯ ಇಲಾಖೆಯ ತಾರಕೇಶ್ವರಿ, ಆಹಾರ ಇಲಾಖೆಯ ಶಿರಸ್ಥೇದಾರ್ ಹೆಚ್.ಆರ್.ಗಣೇಶ್, ಬಿಸಿಎಂ ಇಲಾಖೆಯ ಜಯರಾಮಯ್ಯ, ತೋಟಗಾರಿಕೆ ಇಲಾಖೆಯ ವಿಶ್ವನಾಥ್ ಗೌಡ, ಪಶು ವೈಧ್ಯ ಇಲಾಖೆಯ ಗಿರೀಶ್ ಬಾಬು ರೆಡ್ಡಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಕಾರ್ಮಿಕ ಇಲಾಖೆಯ ಶ್ರೀಕಾಂತ್ ಹಾಗೂ ಮುಂತಾದವರು ಇದ್ದರು.




0 Comments