2018ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಕೆಆರ್ ಎಸ್ ಸುತ್ತಮುತ್ತ 20ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ಆಗಬಾರದೆಂದು ಜಿಲ್ಲಾಧಿಕಾರಿಗಳ ಮೂಲಕ ಆದೇಶ ಹೊರಡಿಸಿದ್ದೆ. 2018ರಲ್ಲಿ ಸೆಕ್ಷನ್ 144 ನ್ನು ತಂದಿದ್ದೆವು. ನಮ್ಮ ಪಕ್ಷದ ಶಾಸಕರು ಕೂಡ ಅಕ್ರಮ ಗಣಿಗಾರಿಕೆಗೆ ಬೆಂಬಲಿಸುವುದಿಲ್ಲ, ಮಾಧ್ಯಮಗಳಲ್ಲಿ ನನ್ನ ಬಗ್ಗೆ ಋಣಾತ್ಮಕವಾಗಿ, ಜನಸಾಮಾನ್ಯರಲ್ಲಿ ನನ್ನ ಬಗ್ಗೆ ತಪ್ಪು ಅಭಿಪ್ರಾಯ ಬರುವ ರೀತಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇಂದು ಸುದ್ದಿವಾಹಿನಿಗಳು, ಅವುಗಳನ್ನು ನಡೆಸುವವರನ್ನು ವ್ಯಕ್ತಿಗತವಾಗಿ ತೇಜೋವಧೆ ಮಾಡುವಂತಹ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದಾರೆ. ನನ್ನ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದೀರಿ ಎಂದು ಸಹ ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಮಾಧ್ಯಮಗಳು 2019ರಲ್ಲಿ ಮಂಡ್ಯ ಲೋಕಸಭೆ ಚುನಾವಣೆ ವೇಳೆ ಯಾರನ್ನೋ ಎತ್ತಿಕಟ್ಟಿ, ಮತ್ತಿನ್ಯಾರನ್ನೋ ತುಳಿಯುವ ಕೆಲಸ ಏಕೆ ಮಾಡುತ್ತಿದ್ದೀರಿ, ಆಮಿಷಕ್ಕೊಳಗಾಗಿ ಸುದ್ದಿಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಿ ಎಂದು ಕೇಳಿದರು.
ಸಂಸದೆ ಸುಮಲತಾ ವಿಷಯವನ್ನು ಮಾಧ್ಯಮ ಪ್ರತಿನಿಧಿಗಳು ಪ್ರಸ್ತಾಪಿಸಿದಾಗ ಕೈ ಮುಗಿದ ಕುಮಾರಸ್ವಾಮಿ, ಅವರ ಬಗ್ಗೆ ನಾನೇಕೆ ಮಾತನಾಡಲಿ, ಅವರು ಮಹಿಳೆ ಬೇರೆ, ರಾಜ್ಯದ ಬೇರೆ ಬಡ ಮಹಿಳೆಯರ ಬಗ್ಗೆ, ಅವರ ಸಮಸ್ಯೆಗಳ ಬಗ್ಗೆ ಮಾತನಾಡೋಣ, ಅವರ ಬಗ್ಗೆಯೇ ಮಾತನಾಡಿ ಸಮಯ ಹಾಳು ಮಾಡುವುದೇಕೆ ಎಂದು ವ್ಯಂಗ್ಯದಿಂದ ಕೇಳಿದರು.
ನಾನೇನು ಅಂಬರೀಷ್ ಗುಲಾಮನಾ; ಅಂಬರೀಷ್ ಮುಂದೆ ಕೈಕಟ್ಟಿ ನಿಂತುಕೊಂಡ ಫೋಟೋ ಸೋಷಿಯಲ್ ಮೀಡಿಯಾದಲ್ಲಿ, ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಕುಮಾರಸ್ವಾಮಿ, ಜನಸಾಮಾನ್ಯರಿಗೆ ಅಗತ್ಯವಿಲ್ಲದ ಸುದ್ದಿಗಳಿಗೆ, ಅವರಿಗೆ ಸ್ಕೋಪ್ ಕೊಡುವ ವಿಷಯಗಳಿಗೆ ಏಕೆ ಆದ್ಯತೆ ನೀಡುತ್ತೀರಿ, ನಾನು ಜನಸಾಮಾನ್ಯರ ಮಧ್ಯೆ ಗುರುತಿಸಿಕೊಂಡು ರಾಜಕೀಯವಾಗಿ ಮೇಲೆ ಬಂದವನು, ಸಾಮಾನ್ಯ ಜನರ ಮುಂದೆ ಕೂಡ ಕೈಕಟ್ಟಿ ನಿಲ್ಲುತ್ತೇನೆ, ನನ್ನ ಅಭ್ಯಾಸವದು, ಅಂಬರೀಷ್ ಮುಂದೆ ಕೈಕಟ್ಟಿ ನಿಲ್ಲಲು ನಾನೇನು ಅವರ ಗುಲಾಮನಾಗಿದ್ದೆನೇ ಎಂದು ಕೇಳಿದರು.

0 Comments