ಆರೋಗ್ಯ ತಪಾಸಣೆ, ವೈದ್ಯಕೀಯ ಸಲಹೆಯನ್ನು ಉಚಿತ ಹಾಗೂ ತ್ವರಿತವಾಗಿ ನೀಡುವ ನಿಟ್ಟಿನಲ್ಲಿ ಆಮ್ ಆದ್ಮಿ ಪಾರ್ಟಿಯು ಮಹತ್ವದ ಹೆಜ್ಜೆ ಇಟ್ಟಿದ್ದು, ಜಯನಗರದಲ್ಲಿ “ಆಮ್ ಆದ್ಮಿ ಹೆಲ್ತ್ ಪಾಯಿಂಟ್” ಕೇಂದ್ರವನ್ನು ಶುಕ್ರವಾರ ಲೋಕಾರ್ಪಣೆ ಮಾಡಿದೆ.
- ಮಾಧ್ಯಮಗಳೊಂದಿಗೆ ಮಾತನಾಡಿದ ಜಯನಗರ ವಿಧಾನಸಭಾ ಕ್ಷೇತ್ರದ ಎಎಪಿ ವೀಕ್ಷಕರಾದ ಡಾ. ಬಿ.ಎಲ್.ವಿಶ್ವನಾಥ್ರವರು, “ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೂಕ್ತ ಸೇವೆ ದೊರೆಯುತ್ತಿಲ್ಲ. ಸಣ್ಣ ತಪಾಸಣೆಗೂ ಅಲ್ಲಿನ ಸಿಬ್ಬಂದಿ ಗಂಟೆಗಟ್ಟಲೆ ಕಾಯಿಸುತ್ತಾರೆ. ಖಾಸಗಿ ಆಸ್ಪತ್ರೆಗಳು ಬಡ ಹಾಗೂ ಮಧ್ಯಮವರ್ಗದ ರೋಗಿಗಳಿಗೆ ಗಗನಕುಸುಮವಾಗಿವೆ. ಈ ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು ಎಎಪಿಯು ಆಮ್ ಆದ್ಮಿ ಹೆಲ್ತ್ ಪಾಯಿಂಟ್ ತೆರೆದಿದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ ಮುಂತಾದ ಕಾಯಿಲೆಗಳಿಗೆ ಸಂಬಂಧಿಸಿ ಉಚಿತವಾಗಿ ರಕ್ತದ ಪರೀಕ್ಷೆ ನಡೆಸಲಾಗುತ್ತದೆ. ಅನುಭವಿ ವೈದ್ಯರು ವೈದ್ಯಕೀಯ ಸಲಹೆ ನೀಡಲಿದ್ದಾರೆ” ಎಂದು ಹೇಳಿದರು.
- ಜಯನಗರ ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷರಾದ ಆರ್.ಮಂಜುನಾಥ್ರವರು ಮಾತನಾಡಿ, “ಪ್ರಸ್ತುತ ಜಯನಗರ ಪೂರ್ವ ವಾರ್ಡ್ನ ನಾಲ್ಕನೇ ಹಂತದ ಪಾರ್ಕ್ನಲ್ಲಿ ಆಮ್ ಆದ್ಮಿ ಹೆಲ್ತ್ ಪಾಯಿಂಟ್ ಆರಂಭವಾಗಿದೆ. ಕೆಲವೇ ದಿನಗಳಲ್ಲಿ ಬೆಂಗಳೂರಿನ ಎಲ್ಲಾ ವಾರ್ಡ್ಗಳಲ್ಲೂ ಒಂದೊಂದು ಪಾಯಿಂಟ್ ಆರಂಭಿಸುವ ಗುರಿ ಹೊಂದಿದ್ದೇವೆ. ಜನರಿಗೆ ನೆರವಾಗುವ ಉದ್ದೇಶದಿಂದಲೇ ಹೆಲ್ತ್ ಪಾಯಿಂಟ್ಗಳನ್ನು ಆರಂಭಿಸಲಾಗುತ್ತಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಜನ ಪಡೆಯುವ ಮೂಲಕ ಇದನ್ನು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
ಮೂಲಭೂತವಾದ ವೈದ್ಯಕೀಯ ಸೇವೆಗಳು ಉಚಿತವಾಗಿ ಹಾಗೂ ಸುಲಭವಾಗಿ ಸಿಗುವಂತೆ ಮಾಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಇದರಲ್ಲಿ ಅದು ವಿಫಲವಾಗಿರುವುದರಿಂದ ಈ ಮಹತ್ಕಾರ್ಯಕ್ಕೆ ಎಎಪಿ ಮುಂದಾಗಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ರವರ ಸರ್ಕಾರವು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ. ಅದರಿಂದ ಪ್ರೇರಣೆ ಪಡೆದು ನಾವು ಆರೋಗ್ಯವಂತ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಮುನ್ನಡೆದಿದ್ದೇವೆ ಎಂದು ಜಯನಗರ ವಿಧಾನಸಭಾ ಕ್ಷೇತ್ರದ ವೈದ್ಯಕೀಯ ಘಟಕದ ಅಧ್ಯಕ್ಷರಾದ ಡಾ. ಮಹೇಶ್ರವರು ಹೇಳಿದರು.
ಸ್ಥಳೀಯ ಎಎಪಿ ಮುಖಂಡರಾದ ಫಿರೋಜ್ ಖಾನ್, ಇರ್ಷದ್, ಸೈಫ್, ಉಮೇಶ್ ಹಾಗೂ ಇತರರು ಉಪಸ್ಥಿತರಿದ್ದರು.




0 Comments