ಕೊರೊನಾ ಪರೀಕ್ಷಾ ಪ್ರಮಾಣವನ್ನು ಅಧಿಕಗೊಳಿಸುವಂತೆ ರಾಜ್ಯಗಳಿಗೆ ಸೂಚಿಸಿದೆ. ಜಿಲ್ಲಾ ಮಟ್ಟದಲ್ಲಿ ಮಕ್ಕಳ ಆರೈಕೆ ಕೇಂದ್ರ ಸ್ಥಾಪನೆ, ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಸೇರಿದಂತೆ ಮಕ್ಕಳಿಗಾಗಿ ಹೆಚ್ಚುವರಿ ಹಾಸಿಗೆಗಳನ್ನು ಮೀಸಲಿಡುವಂತೆ ನಿರ್ದೇಶನ ನೀಡಿದೆ.
ಕೊರೊನಾ ಮೂರನೇ ಅಲೆ ಎಚ್ಚರಿಕೆ ಹಿನ್ನೆಲೆಯಲ್ಲಿ ಆರೋಗ್ಯ ಮೂಲಸೌಕರ್ಯದೆಡೆಗೆ ಗಮನ ಹರಿಸಬೇಕು, ಮಕ್ಕಳ ಆರೈಕೆ ಕೇಂದ್ರ ಹಾಗೂ ಸಾಕಷ್ಟು ಆಮ್ಲಜನಕ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
"ಭಾರತದಲ್ಲಿನ ಕೊರೊನಾ ತುರ್ತು ಪರಿಸ್ಥಿತಿ ಹಾಗೂ ಆರೋಗ್ಯ ವ್ಯವಸ್ಥೆ ಸಿದ್ಧತಾ ಪ್ಯಾಕೇಜ್; ಹಂತ 2"ಗಾಗಿ ಈಚೆಗೆ ಕೇಂದ್ರ ಸರ್ಕಾರ 23,123 ಕೋಟಿ ರೂ ಅನುಮೋದನೆ ನೀಡಿದ್ದು, ಈ ಸಂಬಂಧ ಗುರುವಾರ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಲಾಗಿದೆ. ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳು ಹಾಗೂ ಎಲ್ಲಾ ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳೊಂದಿಗೆ ಆರೋಗ್ಯ ಸಚಿವಾಲಯ ಸಂವಹನ ನಡೆಸಿದೆ. ಈ ಸಂದರ್ಭ ಆರೋಗ್ಯ ಸೌಕರ್ಯಗಳ ಅಭಿವೃದ್ಧಿ ಹಾಗೂ ಕೊರೊನಾ ನಿರ್ವಹಣೆ ಕುರಿತು ಪರಿಣಾಮಕಾರಿಯಾಗಿ ಸಿದ್ಧತೆಗಳನ್ನು ಕೈಗೊಳ್ಳುವ ಅಂಶವನ್ನು ಒತ್ತಿ ಹೇಳಿದೆ.
ಕೊರೊನಾ ಔಷಧಗಳು, ಪರೀಕ್ಷಾ ಕಿಟ್ಗಳು, ಪಿಪಿಇಗಳ ಲಭ್ಯತೆ ಕುರಿತು ನಿಗಾ ವಹಿಸಬೇಕು. ಕೋವಿಡ್ ಕೇಂದ್ರಗಳು, ಸಮುದಾಯ ಕೇಂದ್ರಗಳು, ಆಮ್ಲಜನಕದ ಲಭ್ಯತೆ ಕುರಿತು ಸಿದ್ಧವಾಗಿರಬೇಕು ಎಂದು ಹೇಳಿದೆ. ಮಕ್ಕಳಲ್ಲಿನ ಕೊರೊನಾ ಸೋಂಕು ನಿರ್ವಹಣೆ ಅಗತ್ಯಗಳಿಗೆ ಸ್ಪಂದಿಸಲು 736 ಜಿಲ್ಲೆಗಳಲ್ಲಿ ಮಕ್ಕಳ ಆರೈಕೆ ಘಟಕ ಸ್ಥಾಪಿಸಲು ರಾಜ್ಯಗಳಿಗೆ ಬೆಂಬಲ ನೀಡುವುದಾಗಿ ತಿಳಿಸಿದೆ.

0 Comments