ಮಧುಗಿರಿ : ಲಾಕ್ಡೌನ್ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳ ಸರಗು ಸಾಗಾಣೆ ವಾಹನ ಚಾಲಕರಿಗೆ ಊಟದ ತೊಂದರೆಯಾಗಬಾರದೆಂದು ಜಿಬಿಎನ್ ಗೇಟ್ ಗೆಳೆಯರ ಬಳಗದ ವತಿಯಿಂದ ಮುಖ್ಯ ಪೇದೆ ಕುಮಾರ್ ಅವರ ನೇತೃತ್ವದಲ್ಲಿ ಪಟ್ಟಣದ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಮುಂಭಾಗದ ಕೆಶಿಪ್ ರಸ್ತೆಯಲ್ಲಿ ಊಟದ ಪ್ಯಾಕೇಟ್ಗಳನ್ನು ವಿತರಿಸಲಾಯಿತು.
ಸರಕು ಸಾಗಣೆಯ ಲಾರಿಗಳು, ಸಣ್ಣ ಪುಟ್ಟ ತರಕಾರಿ ರವಾನೆ ಮಾಡುವ ವಾಹನಗಳು, ಆಂಬ್ಯುಲೆನ್ಸ್, ಆಟೊರಿಕ್ಷಾ, ದ್ವಿಚಕ್ರ ವಾಹನ, ಕುಟುಂಬ ಸಮೇತ ತೆರಳುತ್ತಿದ್ದ ವಾಹನಗಳ ಸವಾರರಿಗೆ ಕರೋನಾ ನಿಯಮದಡಿ ಆಹಾರವನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿ ಜೊತೆಯಲ್ಲಿ ಕುಡಿಯುವ ನೀರನ್ನು ನೀಡಿ ಸಹಕಾರಿಯಾದರು.
ಈ ಗೆಳೆಯರ ಬಳಗ ಕಳೆದ ಹದಿನೈದು ದಿನಗಳಿಂದ ಪಟ್ಟಣದ ತೋಟದವರು, ಮಂಡಿ ವರ್ತಕರು, ವ್ಯಾಪಾರಸ್ಥರು ದಾನಿಗಳಿಂದ ಹಣ್ಣುಗಳನ್ನು ಪಡೆದು ಸಿದ್ಧರಬೆಟ್ಟ, ತಿಮ್ಲಾಪುರ ಕರಡಿ ಧಾಮ, ವಿದುರಾಶ್ವತ್ಥ, ಮರುವೇಕೆರೆ- ಬಂದ್ರೆಹಳ್ಳಿನ ತೇರಿನಬೀದಿಯಲ್ಲಿರುವ ಶ್ರೀ ಮಲೆ ರಂಗನಾಥಸ್ವಾಮಿ ದೇವಸ್ಥಾನದ ಬಯಲಿನಲ್ಲಿರುವ ವಾನರ ಸೈನ್ಯಕ್ಕೆ ನೀಡುತ್ತಾ ಬಂದಿದ್ದು, ಸಾರ್ವಜನಿಕರು ಇವರ ಸೇವೆಯನ್ನು ಶ್ಲಾಘಿಸಿದ್ದಾರೆ.
ಪೊಲೀಸ್ ಮುಖ್ಯ ಪೇದೆ ಕುಮಾರ್, ಸೀಮೆಎಣ್ಣೆ ರಂಗನಾಥ್, ಹೋಟೆಲ್ ನರಸಿಂಹಸ್ವಾಮಿ, ಹೋಟೆಲ್ ಪವನ್, ಸ್ಟುಡಿಯೋ ಪ್ರತಾಪ್, ವಾರ್ಡನ್ ಗಣೇಶ್, ವಿನಯ್ ಮತ್ತಿತರ ತಂಡ ಈ ಸತ್ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

0 Comments