ಹೈದರಾಬಾದ್: ತೆಲಂಗಾಣ ರಾಜ್ಯದ ಕಾಳೇಶ್ವರಂ ಏತ ನೀರಾವರಿ ಯೋಜನೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಈ ಯೋಜನೆ ಸತ್ಯಾಂಶ ಹಾಗೂ ಯಶ್ಸಿನ ಬಗ್ಗೆ ಡಿಸ್ಕವರಿ ಚಾನೆಲ್ ಕಳೆದ ಜೂ. 25 ರಂದು ವಿಶೇಷ ಸಾಕ್ಷ್ಯ ಚಿತ್ರವನ್ನು ಪ್ರಸಾರ ಮಾಡಿತ್ತು. ಭೂ ತಳದಲ್ಲಿ ಪಂಪ್ ಹೌಸ್ ನಿರ್ಮಿಸಿ ಸಮುದ್ರ ಮಟ್ಟದಿಂದ 600 ಮೀಟರ್ ಎತ್ತರಕ್ಕೆ ನೀರನ್ನು ಮೇಲಕ್ಕೆ ಎತ್ತುವ ಈ ಯೋಜನೆ ವಿಶ್ವದ ಅತಿ ದೊಡ್ಡ ಏತ ನೀರಾರಿ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಗೋದಾವರಿ ನದಿ ನೀರಿಗೆ ಕಟ್ಟಲಾಗಿರುವ ಕಾಳೇಶ್ವರಂ ಏತ ನೀರಾವರಿ ಯೋಜನೆ ಭಾರತದ ಪ್ರತಿಷ್ಠಾತ್ಮಕ ಯೋಜನೆ ಎಂದೇ ಬಣ್ಣಿಸಲಾಗಿದೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಕನಸಿನ ಯೋಜನೆಯನ್ನು ಮೆಘಾ ಇಂಜಿನಿಯರಿಂಗ್ ಇನ್ಫ್ರಾಸ್ಟ್ರಕ್ಷರ್ ನನಸಾಗಿದೆ. ಈ ಯೋಜನೆಯ ವಿಶೇಷತೆ ಬಗ್ಗೆ ಸತತ ಮೂರು ವರ್ಷಗಳ ಕಾಲ ಚಿತ್ರೀಕರಿಸಿ ಡಿಸ್ಕವರಿ ಚಾನೆಲ್ ಡಾಕುಮೆಂಟರಿ ಮಾಡಿರುವುದು ಇದೀಗ ವಿಶ್ವದ ಗಮನ ಸೆಳೆದಿದೆ. ಗುರುತ್ವಾಕರ್ಷಣದ ದಿಕ್ಕಿಗೆ ಹರಿಯುತ್ತಿರುವ ಗೋದಾವರಿ ನದಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಸಮರ್ಥ ಅಳವಡಿಕೆ ಮೂಲಕ ತಿರುಗಿಸಿರುವುದು ಇದರ ವಿಶೇಷತೆ.
ಭೂತಲದಲ್ಲಿ ಬಹುಮಹಡಿ ಕಟ್ಟಡವನ್ನು ನಾಚಿಸುವಂತೆ ಪಂಪ್ ಹೌಸ್ ನಿರ್ಮಿಸಲಾಗಿದೆ. ಈ ಮೂಲಕ ನೀರನ್ನು ಅಣೆಕಟ್ಟುಗಳಲ್ಲಿ ಸಂಗ್ರಹಿಸಿ ಕಾಲುವೆ ಮತ್ತು ಪೈಪ್ಗಳ ಮೂಲಕ ಕೆರೆಗಳಿಗೆ ಹರಿಸಿ ಅಲ್ಲಿಂದ ವಿವಿಧ ಬಳಕೆಗಳಿಗೆ ನೀರನ್ನು ಉಪಯೋಗಿಸಲಾಗುತ್ತಿದೆ. ಇದಕ್ಕಾಗಿ ಎಂಇಐಎಲ್ 15 ಪಂಪಿಂಗ್ ಕೇಂದ್ರಗಳನ್ನು ನಿರ್ಮಿಸಿದ್ದು, 5,159 ಮೆಗಾವ್ಯಾಟ್ ಪಂಪಿಂಗ್ ಸಾಮರ್ಥ್ಯದ 104 ಪಂಪ್ ಅಳವಡಿಸಿದ್ದು, ಈ ಪ್ರಮಾಣದ ನೀರು ಎತ್ತುವಳಿ ಸಾಧನ ಅಳವಡಿಕೆ ಮಾಡಿರುವುದು ವಿಶ್ವದಲ್ಲೇ ಪ್ರಥಮ ಎನ್ನಲಾಗಿದೆ. ಈ ಮೂಲಕ ಪ್ರತಿ ನಿತ್ಯ ಎರಡು ಟಿಎಂಸಿ ನೀರನ್ನು ಎತ್ತುವಳಿ ಮಾಡಲು ಸಾಧ್ಯವಾಗಲಿದೆ. ಇದಕ್ಕಾಗಿ ಭೂ ತಳದಲ್ಲಿ ಎಂಟು ಪಂಪ್ ಹೌಸ್ ನಿರ್ಮಿಸಲಾಗಿದ್ದು, ಈಗಾಗಲೇ ಏಳು ಕಾರ್ಯ ನಿರ್ವಹಿಸುತ್ತಿವೆ.

0 Comments