ಅರುಣ್ ಸಿಂಗ್ ಒಟ್ಟು 53 ಶಾಸಕರು, ಸಚಿವರ “ಮುಖಾ ಮುಖೀ’ ಅಭಿಪ್ರಾಯ ಸಂಗ್ರಹದ ಸಂದರ್ಭದಲ್ಲಿ 15 ಮಂದಿ ತಟಸ್ಥರಾಗಿದ್ದರೆ, 36 ಮಂದಿ ಸಿಎಂ ಪರ ಇದ್ದರು ಎಂದು ಮೂಲಗಳು ತಿಳಿಸಿವೆ. ತಾವು ಸ್ಪಷ್ಟ ಸೂಚನೆ ನೀಡಿದ್ದರೂ ಬಹಿರಂಗ ಹೇಳಿಕೆ ಮುಂದುವರಿಸಿದ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅರುಣ್ ಸಿಂಗ್ ಸ್ಪಷ್ಟವಾಗಿ ಹೇಳಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಮ್ಮ ಭೇಟಿಯ ದ್ವಿತೀಯ ದಿನ ಶಾಸಕರು ಮತ್ತು ಸಚಿವರ ಅಭಿಪ್ರಾಯ ಸಂಗ್ರಹ ನಡೆಸಿದ್ದು, ಬಹುತೇಕ ಶಾಸಕರು ಸಿಎಂ ಯಡಿಯೂರಪ್ಪ ಪರ ನಿಂತಿದ್ದಾರೆ. ಇಬ್ಬರು ಮಾತ್ರ ಬಿಎಸ್ವೈ ನಾಯಕತ್ವಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಸಿಎಂ ಪರ ಮತ್ತು ವಿರುದ್ಧ ಬಹಿರಂಗ ಹೇಳಿಕೆಗಳು ಕೂಡ “ಸ್ಫೋಟ’ಗೊಂಡಿದ್ದು, ಪರಿಸ್ಥಿತಿ ಇನ್ನಷ್ಟು ಗೋಜಲಾಗಿದೆ. ಸಿಎಂ ಸ್ಥಾನಾಕಾಂಕ್ಷಿ ಎನ್ನಲಾದ ಪಂಚಮ ಸಾಲಿ ಸಮುದಾಯದ ಅರವಿಂದ ಬೆಲ್ಲದ ಅವರು “ಫೋನ್ ಕದ್ದಾಲಿಕೆ’ ಬಾಂಬ್ ಸ್ಫೋಟಿಸುವ ಮೂಲಕ ಸರಕಾರದ ವಿರುದ್ಧ ನೇರ ದಾಳಿ ನಡೆಸಿದರು.
ಒಂದೆಡೆ ಶಾಸಕರು, ಸಚಿವರು ಅರುಣ್ ಸಿಂಗ್ ಬಳಿ ಅಭಿಪ್ರಾಯಗಳನ್ನು ತಿಳಿಸುತ್ತಿದ್ದರೆ, ಇನ್ನೊಂದೆಡೆ ಬೆಲ್ಲದ ಅವರ ಹೇಳಿಕೆ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರ ಟೀಕಾಸ್ತ್ರ “ಎಲ್ಲವೂ ಸರಿಯಾಗಿಲ್ಲ’ ಎಂಬ ಸಂದೇಶವನ್ನು ರವಾನಿಸಿತು.
ಪಕ್ಷದ ಕಚೇರಿಯಲ್ಲಿ ಅರುಣ್ ಸಿಂಗ್ ಗುರುವಾರ ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ನಿರಂತರವಾಗಿ ಶಾಸಕರಿಂದ ಅಭಿಪ್ರಾಯ ಸ್ವೀಕರಿಸಿದರು.

0 Comments