ಬೆಂಗಳೂರು, ಜೂನ್ 29 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಕಬ್ಬನ್ ಉದ್ಯಾನವನವನ್ನು ನೂತನವಾಗಿ ನಿರ್ಮಿಸಿರುವ ರಾಜ್ಯ ಸರ್ಕಾರಿ ನೌಕರರ ಶತಮಾನೋತ್ಸವ ಭವನ ಹಾಗೂ ವಸತಿ ಗೃಹಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಜುಲೈ 1, 2021 ರಂದು ಬೆಳಿಗ್ಗೆ 11.00 ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಲೋಕಾರ್ಪಣೆ ಮಾಡಲಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಭವನವನ್ನು ಆಧುನಿಕ ಮಾದರಿಯಲ್ಲಿ ನವೀಕರಿಸಲು ಸರ್ಕಾರವು ರೂ. 12 ಕೋಟಿಗಳ ಅನುದಾನವನ್ನು ಮಂಜೂರು ಮಾಡಿತ್ತು. ಭವನದ ನವೀಕರಣ ಕಾಮಗಾರಿಗಳು 2020ನೇ ಜನವರಿಯಲ್ಲಿ ಪ್ರಾರಂಭಗೊಂಡು ಪ್ರಸ್ತುತ ಪೂರ್ಣಗೊಂಡಿರುವ ಭವ್ಯ ಹಾಗೂ ಅಲಂಕೃತ ಭವನವು ಸುಸಜ್ಜಿತ ವಿಶಾಲವಾದ ಕಾರ್ಯಾಲಯ, ಕಾನೂನು ಸಲಹಾ ಕೇಂದ್ರ, ಬೋರ್ಡ್ ಹಾಲ್, ಅತ್ಯಾಧುನಿಕ ಮಾದರಿಯ ಮೀಟಿಂಗ್ ಹಾಲ್, ಸುಸಜ್ಜಿತವಾದ ಸುಮಾರು 350 ಆಸನವುಳ್ಳ ಸಭಾಂಗಣ, 08 ಹವಾ ನಿಯಂತ್ರಿತ ವಿ.ವಿ.ಐ.ಪಿ. ಕೊಠಡಿಗಳು, 40 ಸುಸಜ್ಜಿತ ವಸತಿಗೃಹ, ವಿಶಾಲವಾದ ವಾಹನ ನಿಲುಗಡೆ ಪ್ರದೇಶ, ವಿಶಾಲವಾದ ಪ್ರಾಂಗಣವನ್ನು ಹೊಂದಿರುತ್ತದೆ.
ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಸಚಿವರಾದ ಗೋವಿಂದ ಎಂ. ಕಾರಜೋಳ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಪಿ. ರವಿಕುಮಾರ್ ಸೇರಿದಂತೆ ಸರ್ಕಾರದ ಉನ್ನತ ಅಧಿಕಾರಿಗಳು, ಗಣ್ಯರು ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

0 Comments