ಎರಡು ವಿಧಾನಸಭಾ ಮತ್ತು ಒಂದು ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದ್ದು, ಕೆಲ ಹೊತ್ತಿನಲ್ಲೇ ಅಂತಿಮ ಫಲಿತಾಂಶ ಹೊರ ಬೀಳಲಿದೆ. ಈಗಾಗಲೇ ಮಸ್ಕಿಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಬಸವಕಲ್ಯಾಣದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾನೇರಾ ಪೈಪೋಟಿ ಏರ್ಪಟ್ಟಿದೆ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕೋವಿಡ್ ಬಿಕ್ಕಟ್ಟಿನ ನಡುವೆ ಯಾರೂ ಸಹ ಗೆಲುವನ್ನು ಸಂಭ್ರಮಿಸಬಾರದು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ತೀರ್ಪನ್ನ ನಾವು ಸ್ವಾಗತಿಸುತ್ತೇವೆ. ಸೋಲು ಗೆಲುವು ಎರಡನ್ನು ಒಪ್ಪಿಕೊಳ್ಳಬೇಕು. ಮಸ್ಕಿ ವಿಧಾನ ಸಭೆ ಕ್ಷೇತ್ರದಲ್ಲಿ ನಾವು ಗೆಲುವು ಸಾಧಿಸಿದ್ದೇವೆ. ಯಾರೂ ಸಹ ಗೆಲುವನ್ನು ಸಂಭ್ರಮಿಸಬಾರದು. ಕೋವಿಡ್ ನಿಯಮವನ್ನ ಎಲ್ಲಾ ಕಾರ್ಯಕರ್ತರು ಪಾಲಿಸಬೇಕು ಎಂದು ಮನವಿ ಮಾಡಿದರು.ಮುಂದುವರೆದ ಅವರು, ವಿಜಯೋತ್ಸವ ಆಚರಣೆಗೆ ಯಾರು ಮುಂದಾಗಬಾರದು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋತಿದೆ ಅಂತಾನೂ ವಿಜಯೋತ್ಸವ ಬೇಡ. ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ ಗೆದ್ದಿರುವುದಕ್ಕೂ ಸೆಲೆಬ್ರೇಷನ್ ಬೇಡ ಎಂದು ಡಿಕೆಶಿ ಎಲ್ಲಾ ಕಾರ್ಯಕರ್ತರಲ್ಲೂ ಮನವಿ ಮಾಡಿದರು. ಕೆಪಿಸಿಸಿ ಕಚೇರಿಗೆ ಇಂದು ಬರಬಾರದು. ಕೆಪಿಸಿಸಿ ಕಚೇರಿ ಎದುರು ವಿಜಯೋತ್ಸವಕ್ಕೆ ಅವಕಾಶವಿಲ್ಲ. ಫಲಿತಾಂಶ ಮುಖ್ಯ ಅಲ್ಲ. ಜನರ ಜೀವ ಮುಖ್ಯ ಎಂದರು. ಪಶ್ಚಿಮ ಬಂಗಾಳದ ಜನ ಉತ್ತರ ಕೊಟ್ಟಿದ್ದಾರೆ. ಆ ಮತದಾರರಿಗೆ ನಾನು ಕೈ ಮುಗಿದು ನಮಸ್ಕರಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು. ಜನರು ರಾಜ್ಯದಲ್ಲಿ ಒಳ್ಳೆ ವಾತಾವರಣ ಬಯಸ್ತಿದ್ದಾರೆ, ಮತದಾರರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸ್ತೇನೆ ಎಂದು ಹೇಳಿದರು.

0 Comments