ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಹತ್ತಾರು ಕೋಟಿ ರೂ. ನಷ್ಟವಾಗಿದೆ. ಇದರ ಜೊತೆಗೆ ಸಾರ್ವಜನಿಕರ ಸಂಚಾರಕ್ಕೂ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಬಂದ್ ಆಗಿದ್ದರಿಂದ ತನಗೆ ತೊಂದರೆಯಾಗಿದೆ ಎಂದು ಪರಿಹಾರ ಕೇಳಿ ವಿದ್ಯಾರ್ಥಿನಿಯೊಬ್ಬಳು ಬಿಎಂಟಿಸಿ ಎಂಡಿಗೆ ಲೀಗಲ್ ನೋಟೀಸ್ ಕಳುಹಿಸಿದ್ದಾಳೆ!
ಬಿಎಂಟಿಸಿ ನೌಕರರ ಮುಷ್ಕರದಿಂದ 2 ದಿನಗಳಿಂದ ಬಸ್ ಸಂಚಾರದಲ್ಲಿ ವ್ಯತ್ಯಯವಾಗಿದೆ. ಹೀಗಾಗಿ, ನನಗೆ ತೊಂದರೆಯಾಗಿದ್ದು, 10 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಿ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಬಿಎಂಟಿಸಿ ಎಂಡಿಗೆ ವಿದ್ಯಾರ್ಥಿನಿ ಲೀಗಲ್ ನೋಟೀಸ್ ನೀಡಿದ್ದಾಳೆ. . ಸರ್ಕಾರ ಅಧಿಕೃತವಾಗಿ ಖಾಸಗಿ ಬಸ್ಗಳಿಗೆ ಟಿಕೆಟ್ ರೇಟ್ ಫಿಕ್ಸ್ ಮಾಡಿದ್ದರೂ ದರ ಸುಲಿಗೆ ಮಾತ್ರ ನಿಂತಿಲ್ಲ. ಖಾಸಗಿ ಬಸ್ಗಳು ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ ದರವನ್ನೇ ಪಡೆಯಬೇಕು ಎಂದು ಸೂಚಿಸಿದ್ದರೂ ಖಾಸಗಿ ಬಸ್ಗಳಲ್ಲಿ ದುಬಾರಿ ಹಣ ಪಡೆಯಲಾಗುತ್ತಿದೆ.
2 ದಿನಗಳಿಂದ ಬಿಎಂಟಿಸಿ ಬಸ್ ಸಂಚಾರ ಬಂದ್ ಆಗಿದ್ದು, ಪಾಸ್ ಇದ್ದರೂ ಪ್ರಯೋಜನವಾಗಿಲ್ಲ ಎಂದು ಕೆಂಗೇರಿ ಜೆಎಸ್ಎಸ್ ಅಕಾಡೆಮಿ ಆಪ್ ಟೆಕ್ನಿಕಲ್ ಎಜುಕೇಷನ್ ಕಾಲೇಜಿನ ಬಿಇ ಮೊದಲ ಸೆಮಿಸ್ಟರ್ನಲ್ಲಿ ಓದುತ್ತಿರುವ ತುಮಕೂರು ಮೂಲದ ಪಾವನಾ ಎಂಬ ವಿದ್ಯಾರ್ಥಿನಿ ತನ್ನ ವಕೀಲ ರಮೇಶ್ ನಾಯಕ್ ಮೂಲಕ ಲೀಗಲ್ ನೋಟೀಸ್ ಕಳುಹಿಸಿದ್ದಾಳೆ. ನಾನು ಬಿಎಂಟಿಸಿ ವಾರ್ಷಿಕ ಪಾಸ್ ಖರೀದಿಸಿದ್ದು, ಎರಡು ದಿನಗಳಿಂದ ಬಸ್ ಸೇವೆ ಇಲ್ಲದೆ ಹೆಚ್ಚುವರಿ ಹಣ ಪಾವತಿಸಿ ಓಡಾಡುವಂತಾಗಿದೆ. ಪಾಸ್ ಹೊಂದಿರುವರಿಗೆ ಬಸ್ ಸೌಲಭ್ಯ ಒದಗಿಸದೆ ಇರುವುದು ಸೇವಾ ನ್ಯೂನ್ಯತೆ ಹಾಗೂ ಅನುಚಿತ ವ್ಯಾಪಾರ ಪದ್ಧತಿಯಾಗಿದೆ. ಹೀಗಾಗಿ, ನನಗೆ 10 ಲಕ್ಷ ರೂ. ಪರಿಹಾರ ಕೊಡುವಂತೆ ಲೀಗಲ್ ನೋಟೀಸ್ ನೀಡಿದ್ದಾಳೆ.

0 Comments