ಕೋಲ್ಕತ್ತಾ (ಮಾರ್ಚ್ 16); ಚುನಾವಣಾ ಪ್ರಚಾರದ ವೇಳೆ ಇಂದು ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಬಿಜೆಪಿ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದೆ. ನನ್ನನ್ನು ಕೊಂದು ಟಿಎಂಸಿ ಪಕ್ಷವನ್ನು ಸರ್ವನಾಶ ಮಾಡುವುದೇ ಬಿಜೆಪಿ ನಾಯಕರ ಗುರಿ. ಅದಕ್ಕೆ ಅವರು ಸಂಚು ಹೂಡಿದ್ದಾರೆ" ಎಂಬ ಗುರುತರವಾದ ಆರೋಪ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಬಂಕುರಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ವೀಲ್ ಚೇರ್ನಲ್ಲಿಯೇ ಕುಳಿತು ಮಾತನಾಡಿದ ಮಮತಾ ಬ್ಯಾನರ್ಜಿ, "ದೆಹಲಿಯ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಸಹ ಎಲ್ಲಾ ಬಿಜೆಪಿ ಸಚಿವರು ಬಂಗಾಳದಲ್ಲಿದ್ದಾರೆ. ಕಳೆದ 6 ತಿಂಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಕ್ಯಾರೆ ಎನ್ನದ ಇವರು ಬಂಗಾಳದಲ್ಲಿ ಹೋಟೆಲ್ಗಳನ್ನು ಕಾಯ್ದಿರಿಸಿ ನನ್ನನ್ನು ಕೊಲ್ಲಲು ಟಿಎಂಸಿಯನ್ನು ನಾಶ ಮಾಡಲು ಸಂಚು ರೂಪಿಸುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.
"ನಂದಿಗ್ರಾಮದಲ್ಲಿ ನನ್ನ ಮೇಲೆ ಹಲ್ಲೆ ನಡೆಸಲಾಗಿತ್ತು. ಆದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸದೆ ನನ್ನ ಭದ್ರತಾ ಸಿಬ್ಬಂದಿಯನ್ನು ತೆಗೆದುಹಾಕ ಲಾಗಿದೆ. ಇದರ ಹಿಂದಿನ ಉದ್ದೇಶ ನನ್ನನ್ನು ಕೊಲ್ಲಲು ನಡೆಸಿರುವ ಪಿತೂರಿಯೇ ಆಗಿದೆ" ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶವನ್ನು ನಡೆಸುತ್ತಿದ್ದಾರಾ? ಅಥವಾ ಬಂಗಾಳದಲ್ಲಿ ನಮಗೆ ಕಿರುಕುಳ ನೀಡಲು ಸಂಚು ರೂಪಿಸುತ್ತಿದ್ದಾರಾ? ಅವರಿಗೆ ಏನು ಬೇಕು? ಅವರು ನನ್ನನ್ನು ಕೊಲ್ಲಲು ಬಯಸಿದ್ದಾರೆಯೇ? ನನ್ನನ್ನು ಕೊಲ್ಲುವ ಮೂಲಕ ಈ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಅವರು ಭಾವಿಸಿದ್ದಾರೆಯೇ? ಹೀಗೆ ಭಾವಿಸಿದ್ದರೆ ಅದು ಅವರ ತಪ್ಪು ಕಲ್ಪನೆ" ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
0 Comments