ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದವರು ರಮೇಶ್ ಜಾರಕಿಹೊಳಿ. ಸರ್ಕಾರದಲ್ಲಿ ಪ್ರಭಾವಿ ಖಾತೆ ಪಡೆಯುವ ಮೂಲಕ ಬಿಜೆಪಿ ಸರ್ಕಾರದಲ್ಲಿ ಶಕ್ತಿ ಹೆಚ್ಚಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಈಗ ಮಾಜಿ ಸಚಿವರು. ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆಹೊತ್ತು ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಸಿಡಿ ಪ್ರಕರಣ ಸ್ಪೋಟಗೊಳ್ಳುತ್ತಿದ್ದಂತೆ ಅಜ್ಞಾತವಾಸಕ್ಕೆ ತೆರಳಿದ ಅವರು ತಮ್ಮ ರಾಜೀನಾಮೆಯನ್ನು ಸಹೋದರ ಬಾಲಚಂದ್ರ ಜಾರಕಿಹೊಳಿ ಕೈಯಿಂದ ಮುಖ್ಯಮಂತ್ರಿಗಳಿಗೆ ತಲುಪಿಸುವ ಕಾರ್ಯ ಮಾಡಿದರು. ಈ ವೇಳೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಶೀಘ್ರದಲ್ಲಿಯೇ ಈ ಸಿಡಿ ವಿಚಾರ ಸಂಬಂಧ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಲಿದ್ದಾರೆ ಎಂದಿದ್ದರು.
ಈ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಖುದ್ದು ರಮೇಶ್ ಜಾರಕಿಹೊಳಿ ಈ ಸಿಡಿ ಪ್ರಕರಣ ಸಂಬಂಧ ಮಾತನಾಡಲು ಸುದ್ಧಿಗೋಷ್ಟಿ ನಡೆಸಲು ಮುಂದಾಗಿದ್ದಾರೆ. ಮಾರ್ಚ್ 9ರ ಅಂದರೆ ನಾಳೆ ಬೆಳಗ್ಗೆ 10. 30ಕ್ಕೆ ಅವರು ಈ ಪ್ರಕರಣ ಸಂಬಂಧ ಮಾತನಾಡುವ ಸಾಧ್ಯತೆ ಇದೆ. ನಾಳೆ ತಮ್ಮ ಸದಾಶಿವನಗರದ ಮನೆಯಲ್ಲಿ ಸುದ್ದಿಗೋಷ್ಠಿಯನ್ನು ಕರೆದಿದ್ದು, ಈ ಸಿಡಿ ಪ್ರಕರಣ ಬಹಿರಂಗಕ್ಕೆ ಕಾರಣ ಯಾರು? ಎಂಬ ಬಗ್ಗೆ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ.ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಸಚಿವರು, ನಾಯಕರು ಮೌನ ತಾಳಿದ್ದು, ಇದುವರೆಗೂ ಯಾರು ಈ ಪ್ರಕರಣ ಕುರಿತು ತುಟಿ ಬಿಚ್ಚಿಲ್ಲ. ಸರ್ಕಾರಕ್ಕೆ ಸಾಕಷ್ಟು ಮುಜುಗರ ಉಂಟು ಮಾಡಿದ್ದ ಈ ಪ್ರಕರಣವನ್ನು ಕಾಂಗ್ರೆಸ್ ಸದಸ್ಯರು ಮಾತ್ರ ಅಸ್ತ್ರ ಮಾಡಿಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.

0 Comments