ಮೈಸೂರು: ಕೊರೋನಾ ಎರಡನೆ ಅಲೆ ಭೀತಿ ನಡುವೆಯೇ, ನಂಜನಗೂಡಿನಲ್ಲಿ ಇಂದು ಸರಳ ಹಾಗೂ ಶಾಸ್ತ್ರೋಕ್ತವಾಗಿ ಪಂಚಮಹಾರಥೋತ್ಸ ನೆರವೇರಿಸಲಾಯಿತು. ಕೋವಿಡ್ ಹಿನ್ನೆಲೆ ಈ ಬಾರಿ ಸರಳವಾಗಿ ರಥೋತ್ಸವ ಆಚರಣೆಗೆ ಅನುಮತಿ ನೀಡಿದ್ದ ಮೈಸೂರು ಜಿಲ್ಲಾಡಳಿತ ಕೇವಲ 500 ಮಂದಿ ಸ್ಥಳೀಯರಿಗೆ ರಥೋತ್ಸವದಲ್ಲಿ ಭಾಗಿಯಾಗಲು ಅವಕಾಶ ನೀಡಿತ್ತು. ದೇವಾಲಯದ ದೊಡ್ಡ ರಥಗಳನ್ನು ಎಳೆಯದೆ ಚಿಕ್ಕರಥ ಬಳಸಿ ರಥೋತ್ಸವ, ಬೆಳಗ್ಗೆ 6 ರಿಂದ 7 ಗಂಟೆಯ ಮೀನಾ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಆದರೆ ರಥೋತ್ಸವ ಆರಂಭವಾದ ಕೆಲ ಘಳಿಗೆಯಲ್ಲೇ ವಿಘ್ನ ಎದುರಾಗಿದೆ. ಪಾರ್ವತಿ ರಥದ ಚಕ್ರ ಮುರಿದು ಬಿದ್ದು ಪುಡಿಪುಡಿಯಾಗಿದೆ. ರಥೋತ್ಸವದಂದು ಜರುಗಿದ ಈ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿದೆ.
ಮೀನಾ ಲಗ್ನದಲ್ಲಿ ನಂಜನಗೂಡಿನ ಪಂಚರಥಗಳ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ರಥದಲ್ಲಿಟ್ಟು ಮೆರವಣಿಗೆ ಆರಂಭಿಸಲಾಯಿತು. ನಂಜುಂಡೇಶ್ವರ, ಪಾರ್ವತಿ, ಸುಬ್ರಮಣ್ಯ, ಚಂಡಿಕೇಶ್ವರ, ಗಣಪತಿ ದೇವರುಗಳ ಪಂಚರಥವನ್ನು ಎಳೆಯಲು ಸ್ಥಳೀಯರಿಗೆ ಮಾತ್ರ ಅವಕಾಶ ಇದ್ದುದ್ದರಿಂದ, ದೇವಾಲಯದ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆಟೋಗಳಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರದ ಪಾಠ ಮಾಡುತ್ತಿದ್ದ ದೇವಾಲಯದ ಆಡಳಿತ ಮಂಡಳಿ, ಮೈಕ್ಗಳಲ್ಲಿ ಮಾಸ್ಕ್ ಹಾಕುವಂತೆ ಮನವಿ ಮಾಡಿ ರಥೋತ್ಸವನ್ನ ಆರಂಭಿಸಿದರು. ರಥಗಳು ಸ್ವಲ್ಪ ದೂರ ಕ್ರಮಿಸಿದ ತಕ್ಷಣ ನಂಜನಗೂಡು ರಥೋತ್ಸವದಲ್ಲಿ ವಿಘ್ನ ಎದುರಾಗಿತ್ತು. ಪಂಚರಥಗಳಲ್ಲೊಂದಾದ ಪಾರ್ವತಿ ದೇವಿಯ ರಥದ ಚಕ್ರದಲ್ಲಿ ವಿಘ್ನ ಉಂಟಾಗಿದೆ. ಟೊಳ್ಳು ಹಿಡಿದು ಪುಡಿಪುಡಿಯಾಗಿ ಉದುರಿದ ರಥದ ಚಕ್ರ, ಕೊಂಚ ದೂರ ಸಾಗುತ್ತಿದ್ದಂತೆ ಸಂಪೂರ್ಣವಾಗಿ ಮುರಿದುಕೊಂಡಿತು. ಇದರಿಂದಾಗಿ ಪಾರ್ವತಿ ಉತ್ಸವ ಮೂರ್ತಿಯ ರಥದ ಮೆರವಣಿಗೆಯನ್ನು ಅಲ್ಲಿಗೆ ನಿಲ್ಲಿಸಿ. ದೇವಿಯ ವಿಗ್ರಹವನ್ನು ಚಿಕ್ಕರಥಕ್ಕೆ ಸ್ಥಳಾಂತರ ಮಾಡಿ ಪರ್ಯಾಯ ರಥದಲ್ಲಿ ರಥೋತ್ಸವ ಮುಂದುವರೆಸಲಾಯಿತು.
ನಂಜನಗೂಡು ರಥೋತ್ಸವದಲ್ಲಿ ಭಕ್ತಸಾಗರ ಹರಿದುಬಂದು ಕೊರೋನಾ ನಿಯಮಗಳು ಸಂಪೂರ್ಣ ಉಲ್ಲಂಘನೆಯಾಗಿ, ಕೊರೋನಾ ಆತಂಕವನ್ನು ಹೆಚ್ಚಿಸಿದೆ. ನೋಡನೋಡುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ಪಂಚರಥಗಳನ್ನು ಎಳೆಯಲು ಆಗಮಿಸಿದರು. ಕೇವಲ 500 ಜನರಿಗಷ್ಟೆ ಸೀಮಿತವಾಗಿದ್ದ ಜಾತ್ರೆಯಲ್ಲಿ ಸಾವಿರ ಸಾವಿರ ಸಂಖ್ಯೆಯ ಭಕ್ತರು ಇದ್ದಿದ್ದು, ಜಿಲ್ಲಾಡಳಿತದ ಮಾರ್ಗಸೂಚಿಗಳ ಸಂಪೂರ್ಣ ಉಲ್ಲಂಘನೆ ಎದ್ದು ಕಾಣುತ್ತಿತ್ತು. ದೊಡ್ಡ ರಥ ಎಳೆಯದೆ ಇದ್ದರೂ ಚಿಕ್ಕರಥಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ಕೊರೋನಾ ಭೀತಿಯನ್ನು ಮತ್ತಷ್ಟು ಹೆಚ್ಚು ಮಾಡಿದೆ.
0 Comments