ಸೈಟ್ ಕೊಡಿಸುತ್ತೇನೆ ಎಂದು ಜನರಿಂದ ಲಕ್ಷ ಲಕ್ಷ ರೂ. ಪಡೆದು ವಂಚನೆ ಮಾಡಿದ್ದ. ಆತನಿಗೆ ಹಣ ಕೊಟ್ಟು ಕೈ ಸುಟ್ಟುಕೊಂಡ ವ್ಯಕ್ತಿ ಸೈಟ್ ಸಿಗದೆ ಹಣವೂ ವಾಪಾಸ್ ಬಾರದೆ ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು ನೀಡಿದ್ದರು. ಪೊಲೀಸರು ವಂಚಕ ವ್ಯಕ್ತಿಯನ್ನು ಬಂಧಿಸಿದ್ದರು, ಆದರೆ ಮಹಜರು ನಡೆಸೋ ವೇಳೆಗೆ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಿಡಿಎ ಸೈಟ್ ಕೊಡಿಸ್ತೀನಿ ಅಂತ ಲಕ್ಷಾಂತರ ರೂ ಹಣ ಪಡೆದಿದ್ದ ಎಂದು ತಿಳಿದುಬಂದಿದೆ. ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ಸೈಟ್ ಕೊಡಿಸುವುದು ಹಾಗೂ ಹಾಲಿ ನಿವೇಶನಕ್ಕೆ ಬದಲಿ ನಿವೇಶನ ಕೊಡಿಸುತ್ತೇನೆ ಎಂದು ಹೇಳಿ ನಾಗರಾಜು ಎಂಬುವರಿಗೆ ವಂಚಿಸಿದ್ದನಂತೆ. ನಾಗರಾಜು ಮತ್ತು ಅವರ ಸಂಬಂಧಿಕರ ಬಳಿ ಸುಮಾರು 13 ಲಕ್ಷಕ್ಕೂ ಅಧಿಕ ಹಣ ಪಡೆದಿದ್ದನಂತೆ. ಬಳಿಕ ಸೈಟ್ ಅಗಲಿ ಅಥವಾ ಹಣವಾಗಲಿ ವಾಪಸ್ ಕೊಟ್ಟಿರಲಿಲ್ವಂತೆ. ಈ ಬಗ್ಗೆ ನಾಗರಾಜು 2020ರ ಡಿಸೆಂಬರ್ ನಲ್ಲಿ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣ ದಾಖಲಾದ ಬಳಿಕ ಆರೋಪಿ ನಾಪತ್ತೆಯಾಗಿದ್ದ. ಪೊಲೀಸರು ಆರೋಪಿಗಾಗಿ ಶೋಧ ನಡೆಸಿದರು ಸಿಕ್ಕಿರಲಿಲ್ಲ. ಮಂಡ್ಯದ ಮಳವಳ್ಳಿ ಬಳಿ ಆತನನ್ನ ವಶಕ್ಕೆ ಪಡೆದು ಫೆಬ್ರವರಿ 25ರಂದು ಪೊಲೀಸರು ಬಂಧಿಸಿದ್ದರು.
ಆರೋಪಿ ಸಿದ್ದಲಿಂಗಸ್ವಾಮಿಯನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ ಬಳಿಕ ಪೊಲೀಸರು ಹೆಚ್ಚಿನ ವಿಚಾರಣೆ ಸಲುವಾಗಿ ತಮ್ಮ ವಶಕ್ಕೆ ಪಡೆದಿದ್ದರು. ನಿನ್ನೆ ಆರೋಪಿ ಸಿದ್ದಲಿಂಗಸ್ವಾಮಿಯನ್ನ ಮನೆಯಲ್ಲಿ ಪರಿಶೀಲನೆ ನಡೆಸೋ ಸಲುವಾಗಿ ಹನುಮಂತನಗರ ಪೊಲೀಸರು ವಿದ್ಯಾರಣ್ಯಪುರದ ಆತನ ಮನೆಗೆ ಕರೆದೊಯ್ದಿದ್ದರು.
ಆರೋಪಿ ಪೊಲೀಸರ ವಿಚಾರಣೆ ವೇಳೆ ತನ್ನ ಮನೆಯಲ್ಲಿ ಕೆಲವು ದಾಖಲೆ ಪತ್ರಗಳನ್ನ ತನ್ನ ಇಟ್ಟಿರೋದಾಗಿ ಹೇಳಿದ್ದ. ಈ ಹಿನ್ನಲೆಯಲ್ಲಿ ಆತನನ್ನ ಪೊಲೀಸರು ಸ್ಥಳ ಮಹಜರಿಗೆ ಕರೆತಂದಿದ್ದರು. ಈ ವೇಳೆ ಮನೆಯಲ್ಲಿದ್ದ ತನ್ನ ಪತ್ನಿಯನ್ನ ಕಂಡು ಮೌನ ವಹಿಸಿದ ಸಿದ್ದಲಿಂಗಸ್ವಾಮಿ ಪೊಲೀಸರನ್ನು ತಳ್ಳಿ ಮನೆಯ ಕಿಚನ್ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ.
ಬಾಲ್ಕನಿಯಿಂದ ಹಾರಿದ ವೇಳೆ ಆರೋಪಿಗೆ ತೀವ್ರ ಗಾಯವಾಗಿದ್ದು, ರಕ್ತ ಸ್ರಾವದಿಂದ ಬಳಲುತ್ತಿದ್ದ ಆತನನ್ನು ಕೂಡಲೇ ಪೊಲೀಸರು ಖಾಸಗಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನ ಪಟ್ಟಿದ್ದರು. ಆದರೆ, ಸಿದ್ದಲಿಂಗಸ್ವಾಮಿ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.
ಪೊಲೀಸರ ತನಿಖೆಯಲ್ಲಿ ಸಿದ್ದಲಿಂಗಸ್ವಾಮಿ ಬಿಡಿಎ ನೌಕರನಲ್ಲ ಎಂದು ತಿಳಿದು ಬಂದಿದೆ.

0 Comments