ಬೆಂಗಳೂರು(ಫೆ.27): ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ವಿರೋಧಿಸಿ ವಾಟಾಳ್ ನಾಗರಾಜ್ ಇಂದು ಪತ್ರಿಕಾಗೋಷ್ಠಿ ನಡೆಸಿ, ಸಿಎಂ ಬಿಎಸ್ ಯಡಿಯೂರಪ್ಪನವರ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರಕ್ಕೆ ಗಂಭೀರತೆ ಅರ್ಥವಾಗ್ತಿಲ್ಲ, ನಮಗೆ ಅರ್ಥವಾಗ್ತಿದೆ ಕರ್ನಾಟಕ ರಾಜ್ಯಕ್ಕೆ ನಾನಾ ದಿಕ್ಕುಗಳಿಂದ ತೊಂದರೆ ಆಗಿದೆ. ಯಾವುದಕ್ಕೂ ಸರ್ಕಾರ ಪರಿಣಾಮಕಾರಿಯಾಗಿ ಚಿಂತನೆ ಮಾಡ್ತಿಲ್ಲ, ಇದು ಆಘಾತಕಾರಿ. ಮಹಾರಾಷ್ಟ್ರ ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳು ನಿರಂತರವಾಗಿ ನಮ್ಮ ಮೇಲೆ ದಾಳಿ ಮಾಡ್ತಿವೆ. ತಮಿಳುನಾಡಿನಲ್ಲಿ ಯಾರಿಗೂ ತಿಳಿಯದಂತೆ ಅನೇಕ ಯೋಜನೆಗಳನ್ನು ಆರಂಭಿಸ್ತಿದ್ದಾರೆ ಕೇಂದ್ರ ಸರ್ಕಾರ ಅವರಿಗೆ ಅನುಮತಿ ಕೊಟ್ಟಿದೆ. 118 ಕಿಲೋಮೀಟರ್ ಕಾಲುವೆ ತೆಗೆದು ಕಾವೇರಿ ಜೋಡಣೆ ಮಾಡಿ ಹೆಚ್ಚುವರಿ ನೀರು ಬಳಕೆಗೆ ಪಿತೂರಿ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾರನ್ನೂ ನಂಬುವಂತಿಲ್ಲ. ಎಲ್ಲರೂ ಯಾವಾಗ ರಾಜಿಯಾಗ್ತಾರೋ ಹೇಳಕ್ಕಾಗಲ್ಲ. ಕರ್ನಾಟಕ ತಮಿಳುನಾಡಿನ ಮೇಲೆ ಯುದ್ಧ ಮಾಡಬೇಕಿತ್ತು. ಕನ್ನಡಪರ ಸಂಘಟನೆ ಬಿಟ್ಟರೆ ಉಳಿದವರ್ಯಾರಿಗೂ ಇದು ಬೇಕಾಗಿಲ್ಲ. ಸುಮ್ನೆ ಅವ್ರಿಗೆ ವಯಸ್ಸಾಗ್ತಿದೆ ಅಷ್ಟೇ. ಮಹಾದಾಯಿ ವಿಚಾರದಲ್ಲೂ ನಮ್ಮವರು ನಿರ್ಲಕ್ಷ್ಯ ವಹಿಸಿದ್ದಾರೆ. ಕರ್ನಾಟಕ ಸರ್ಕಾರ ಯಾರ ಏಜೆಂಟರು? ಗೋವಾದಾ ಮಹಾರಾಷ್ಟ್ರದ್ದಾ? ಯಡಿಯೂರಪ್ಪ ಈ ರಾಜ್ಯಕ್ಕೆ ಕಾಲಿಟ್ಟಾಗಿನಿಂದ ನಮ್ಮ ರಾಜ್ಯಕ್ಕೆ ಬರಬಾರದ ಪರಿಸ್ಥಿತಿ ಬಂದಿದೆ ಎಂದು ವಾಗ್ದಾಳಿ ನಡೆಸಿದರು. ಮಾರ್ಚ್ 13 ರೊಳಗೆ ಬಂದ್ನ ದಿನಾಂಕದ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಮಠಾಧಿಪತಿಗಳು ಕಡ್ಡಾಯವಾಗಿ ಬೀದಿಗೆ ಬರಬಾರದು. ನೈತಿಕ ಬೆಂಬಲ ನಮಗೆ ಬೇಡ, ಆ ಪದವೇ ಬೇಡ. ಹೋಟೆಲ್ ಮಾಲೀಕರು ಸೇರಿದಂತೆ ಯಾರೂ ನೈತಿಕ ಬೆಂಬಲ ಕೊಡಬೇಡಿ. ನೈತಿಕ ಬೆಂಬಲ ಕೊಡೋದಾದ್ರೆ ಬೆಂಬಲ ಕೊಡಲೇಬೇಡಿ ಮಹಾದಾಯಿ, ಮೇಕೆದಾಟು, ಪೆಟ್ರೋಲ್ ಡೀಸೆಲ್ ಬೆಲೆ, ಕಾವೇರಿ, ಕುಡಿಯೋ ನೀರಿನ ವ್ಯವಸ್ಥೆ, ಗ್ರಾನೈಟ್ ಲೂಟಿ, ಬೆಲೆಯೇರಿಕೆ ಎಲ್ಲಾ ಉದ್ದೇಶಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತೇವೆ, ಮುಖ್ಯಮಂತ್ರಿಗಳಿಗೆ ಮಾನ ಮಾರ್ಯಾದೆ ಇದ್ರೆ ಜನ್ಮದಿನ ಆಚರಣೆ ಮಾಡಿಕೊಳ್ಳಬಾರದು ಎಂದರು.

0 Comments