ಬೆಂಗಳೂರು, ಫೆಬ್ರವರಿ 27: ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆ ಖಂಡಿಸಿ ಆಮ್ ಆದ್ಮಿ ಪಕ್ಷ ಶನಿವಾರ ಬೆಂಗಳೂರು ನಗರದಾದ್ಯಂತ ಸರಣಿ ಪ್ರತಿಭಟನೆ ನಡೆಸಿತು. ನಗರದಾದ್ಯಂತ ಪಕ್ಷದ ಕಾರ್ಯಕರ್ತರು ಫೇಸ್ಬುಕ್ ಲೈವ್ ಮೂಲಕ ತೈಲ ಬೆಲೆ ಏರಿಕೆ ಕುರಿತು ಜನಾಭಿಪ್ರಾಯ ಸಂಗ್ರಹಿಸಿದರು. ಬೆಂಗಳೂರು ನಗರದ ಪ್ರಮುಖ ಸ್ಥಳಗಳು ಹಾಗೂ 198 ವಾರ್ಡ್ ವ್ಯಾಪ್ತಿಯ ಎಲ್ಲಾ ಪೆಟ್ರೋಲ್ ಬಂಕ್ಗಳ ಬಳಿ ಜಮಾಯಿಸಿದ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭ, ಜಿಎಸ್ಟಿ, ನೋಟು ಅಮಾನ್ಯೀಕರಣ, ಕೊರೊನಾದಿಂದ ಜೀವನ ಮೂರಾಬಟ್ಟೆಯಾಗಿದೆ. ಆದರೆ ಪ್ರಧಾನಿ ಮೋದಿಯವರು ಅಂಬಾನಿ, ಅದಾನಿ ಗೆಳೆಯರ ಜೊತೆ ಸುಖವಾಗಿದ್ದಾರೆ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು.
ಮಾಗಡಿ ರಸ್ತೆಯ ಟೋಲ್ ಗೇಟ್, ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಪ್ರಕಾಶ್ ನಗರ ವಾರ್ಡ್, ಅಯೋಧ್ಯ ಹೋಟೆಲ್, ಬಸವೇಶ್ವರ ನಗರದ ಟೋಟಲ್ ಗ್ಯಾಸ್ ಸ್ಟೇಷನ್, ಗಂಗಮ್ಮ ತಿಮ್ಮಯ್ಯ ಕಮ್ಯುನಿಟಿ ಹಾಲ್ ಬಂಕ್, ಡಾ.ರಾಜ್ಕುಮಾರ್ ರಸ್ತೆಯ ಶ್ರೀರಾಮ ಮಂದಿರ ವಾರ್ಡ್, ಕೆ.ಜಿ.ಹಳ್ಳಿ, ಶಾಂತಿನಗರ, ಆರ್.ಆರ್.ನಗರ, ಮಲ್ಲೇಶ್ವರಂ, ಬಿಟಿಎಂ ಲೇಔಟ್, ಕೋರಮಂಗಲ, ಸರ್ವಜ್ಞ ನಗರ, ಪುಲಕೇಶಿ ನಗರ, ಎಂ.ಜಿ.ರಸ್ತೆ, ಯಲಹಂಕ, ವಿಧಾನಸೌಧ ಹಲವೆಡೆ ಪ್ರತಿಭಟನೆ ನಡೆಸಲಾಯಿತು. ಚಾಮರಾಜಪೇಟೆ, ಪಾದರಾಯನಪುರ, ಚಿಕ್ಕಪೇಟೆ ಭಾಗದಲ್ಲಿ ಆಟೋ ಚಾಲಕರು ಪ್ರತಿಭಟನೆಗೆ ಕೈ ಜೋಡಿಸಿದರು. ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ವಾರ್ಡ್ ಸೇರಿದಂತೆ ಅನೇಕ ಕಡೆ ನಾಗರೀಕರು ತಮ್ಮ ಮನೆಯ ಮುಂದೆ ಬಿತ್ತಿಫಲಕ ಪ್ರದರ್ಶಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

0 Comments