ಮಲ್ಲೇಶ್ವರಕ್ಕೆ ಕಾಲಿಡುತ್ತಿದ್ದಂತೆಯೇ ಥಟ್ಟನೆ ಕಾಣಸಿಗುವುದು ಮಂತ್ರಿ ಮಾಲ್... ಆ ದಟ್ಟಣೆ ಸಂಚಾರ, ಜನ ಜಂಗುಳಿ.... ವಿಶಾಲವಾದ ಮರಗಳು ಕಣ್ಣಿಗೆ ಆನಂದ ನೀಡುವುದು ಸಹಜ. ಸ್ವಲ್ಪ ಮುಂದೆ ಹಾದಿ ಹೋದಂತೆ ಪ್ರತಿಷ್ಠಿತ ನ್ಯೂ ಕೃಷ್ಣ ಭವನ್...
ಹೀಗೆ ವಿಶಾಲ ಪ್ರದೇಶದ ಮಂತ್ರಿ ಮಾಲ್ ಮಲ್ಲೇಶ್ವರ ಅಲ್ಲದೇ ಬೆಂಗಳೂರು ಜನತೆಯ ಮನದಲ್ಲಿ ಮನೆ ಮಾಡಿತ್ತು...
ಆದರೆ, ಪ್ರತಿಷ್ಠಿತ ಮಲ್ಲೇಶ್ವರದ ಮಂತ್ರಿ ಮಾಲ್ ಕಳೆದ ಮೂರು ವರ್ಷಗಳಿಂದಲೂ ಆಸ್ತಿ ತೆರಿಗೆ ಪಾವತಿಸದೇ ಹಾಗೆಯೇಉಳಿಸಿಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಮಾಲ್ಗೆ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಬೀಗ ಹಾಕಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿದ ಪಶ್ಚಿಮ ವಲಯ ಉಪ ಆಯುಕ್ತ ಪ್ರಸನ್ನ ಕುಮಾರ್, ಮಲ್ಲೇಶ್ವರದ ಮಂತ್ರಿ ಮಾಲ್ ಮಾಲೀಕರು ಕಳೆದ ಮೂರು ವರ್ಷ ಹಾಗೂ ಪ್ರಸಕ್ತ ಆರ್ಥಿಕ ವರ್ಷ ಸೇರಿದಂತೆ ಒಟ್ಟು 32 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಆಸ್ತಿ ತೆರಿಗೆ ಪಾವತಿಗೆ ಕಳೆದ 15 ದಿನಗಳ ಹಿಂದೆ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ, ನೋಟಿಸ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 8ರಿಂದ ಸಂಜೆ 4ರವರೆಗೂ ಬಂದ್ ಮಾಡಲಾಗಿತ್ತು.
ಮಾಲ್ನ ಮಾಲೀಕರು ಆಸ್ತಿ ತೆರಿಗೆ ಪಾವತಿಗೆ ಮತ್ತೆ 15 ದಿನ ಸಮಯ ನೀಡುವಂತೆ ಮನವಿ ಮಾಡಿದರು. ಆದರೆ, ಈಗಾಗಲೇ ನೋಟಿಸ್ ನೀಡಿ 15 ದಿನ ಕಾಲಾವಕಾಶ ನೀಡಿದ ಹಿನ್ನೆಲೆಯಲ್ಲಿ ಮತ್ತೆ 15 ದಿನ ಅವಕಾಶ ನೀಡುವುದಕ್ಕೆ ಸಾಧ್ಯವಿಲ್ಲ. ಸೋಮವಾರದ ಒಳಗೆ ಆಸ್ತಿ ತೆರಿಗೆ ಪಾವತಿ ಮಾಡುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಸೋಮವಾರದೊಳಗೆ ಆಸ್ತಿ ತೆರಿಗೆ ಪಾವತಿ ಮಾಡದಿದ್ದರೆ ಮಾಲ್ಅನ್ನು ಬಿಬಿಎಂಪಿ ವಶಕ್ಕೆ ಪಡೆಯಲಾಗುವುದು ಎಂದು ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಚೆಕ್ ಬೌನ್ಸ್ ಪ್ರಕರಣ : ಮಂತ್ರಿ ಮಾಲ್ನ ಮಾಲೀಕರು ಈ ಹಿಂದೆ ಆಸ್ತಿ ತೆರಿಗೆ ಪಾವತಿಗೆ 10 ಕೋಟಿ ಚೆಕ್ ನೀಡಿದ್ದರು. ಆದರೆ, ಚೆಕ್ ಬೌನ್ಸ್ ಆಗಿದ್ದು, ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪಾಲಿಕೆ ಕಾನೂನು ಕೋಶದಿಂದ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಡಾ. ಬಸವರಾಜು ಮಾಹಿತಿ ನೀಡಿದ್ದಾರೆ.

0 Comments