ಬೆಂಗಳೂರಿನ ಪ್ರತಿಷ್ಟಿತ ಭರತನಾಟ್ಯ ಕೇಂದ್ರ ಕಲಾಕ್ಷಿತಿಯ ಗುರು ಎಂ ಆರ್ ಕೃಷ್ಣ ಮೂರ್ತಿ ತಮ್ಮ ಗುರುಗಳಾದ ಕಲಾಕ್ಷೇತ್ರ ಖ್ಯಾತಿಯ ಶ್ರೀಮತಿ ರುಕ್ಮಿಣಿ ದೇವಿ ಅರುಂಡೇಲ್ ಸ್ಮರಣಾರ್ಥ ಭರತನಾಟ್ಯ ನೃತ್ಯೋತ್ಸವವನ್ನು ಎರಡು ದಿನಗಳ ಕಾಲ ಎಪ್ರಿಲ್ 29 ಮತ್ತು 30 ರಂದು ಕಲಾಕ್ಷಿತಿ ವೇದಿಕೆಯಲ್ಲಿ ಆಯೋಜಿಸಿದ್ದರು.
ಫ್ಲೂಟ್ ಮತ್ತು ಫೀಟ್ ಸಂಸ್ಥೆಯ ಗುರು ಶ್ರೀಮತಿ ಅರಣ್ಯಾ ನರೇನ್ ರವರ ಶಿಷ್ಯೆಯರು ಹಾಗು ಗುರು ಶ್ರೀಮತಿ ದೀಪಾಭಟ್ ರವರ ನೃತ್ಯಕುಟೀರದ ಕಲಾವಿದರುಗಳು ಸಮೂಹ ನೃತ್ಯದ ಮೂಲಕ ಕಲಾರಸಿಕರನ್ನು ಆಕರ್ಷಿಸಿ ಕಣ್ಮನ ಸೆಳೆದರು.
ನೃತ್ಯಕುಟೀರದ ಶಿಷ್ಯೆಯರು ನಾಟ್ಯಾಂಜಲಿ ಮುಖೇನ ಗಣೇಶ, ಸರಸ್ವತಿ, ವಿಷ್ಣು, ಶಿವ ಹಾಗು ಗುರುಗಳಿಗೆ ನಮನ ಅರ್ಪಿಸಿ, ನಂತರ ಪ್ರಸಿದ್ದ ಶ್ರೀ ಕೃಷ್ಣ ಕಮಲಾ ನಾಥೋ ಎಂಬ ರೀತಿಗೌಳ ರಾಗದ ಸುಂದರ ವರ್ಣದಲ್ಲಿ ಕೃಷ್ಣನ ಜನನ, ಪೂತನಾ ಸಂಹಾರ, ಗೋವರ್ಧನ ಗಿರಿ ಎತ್ತಿದ ಪರಿ, ಕಾಳಿಂಗ ವಧೆ, ಗೋಪಿಕಾ ಸ್ತ್ರೀಯರೊಂದಿಗೆ ರಾಸಲೀಲೆ ಮುಂತಾದ ಕಥಾವಳಿಗಳನ್ನು ಸಂಚಾರಿಯಲ್ಲಿ ಅತಿ ಸುಂದರವಾಗಿ ಪ್ರದರ್ಶಿಸಿದರು. ವೇಗದ ಗತಿಯಲ್ಲಿನ ಜತಿಗಳಿಗೆ ವಿವಿಧ ಕ್ಲಿಷ್ಟ ವಿನ್ಯಾಸದ ಮೂಲಕ ನರ್ತಕಿಯರು ಅಚ್ಚುಕಟ್ಟಾಗಿ ನರ್ತಿಸಿ ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡರು.
ಪದ್ಮ ಚರಣ್ ರಚಿತ ಶೃಂಗೇರಿ ಶಾರದೆಯ ಕೃತಿಯ ನಂತರ ಕಡೆಯದಾಗಿ ಶ್ರೀಮತಿ ರುಕ್ಮಿಣಿ ದೇವಿ ಅರುಂಡೇಲ್ ರವರೇ ಸಂಯೋಜಿಸಿದ ನಟಭೈರವಿ ತಿಲ್ಲಾನ ನೃತ್ಯ ವೀಕ್ಷಕರನ್ನು ಸಂತೋಷ ಪಡಿಸಿತು. ಮಂಗಳದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದ ನಾಟ್ಯ ರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತ ಗುರು ಎಂ ಆರ್ ಕೃಷ್ಣ ಮೂರ್ತಿ, ಕಲಾಕ್ಷಿತಿ ಸಂಸ್ಥೆಯ ಸದಸ್ಯರಾದ ಶ್ರೀಮತಿ ಪುಷ್ಪಾ ಮೋಹನ್ ಹಾಗು ಶ್ರೀಮತಿ ಶೋಭಾ ನರೇನ್ ರವರು ಕಲಾವಿದರನ್ನು ಸತ್ಕರಿಸಿದರು.






0 Comments