ಚಿಕ್ಕಬಳ್ಳಾಪುರ: ಕೋಲಾರದಿಂದ ಸ್ಪರ್ಧೆ ಬಯಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗುವುದಿಲ್ಲ, ಅವರ ಗೆಲುವು ತೀವ್ರ ಕಠಿಣವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭವಿಷ್ಯ ನುಡಿದರು.
ಮಂಗಳವಾರ ನಗರದ ಸರ್.ಎಂ. ವಿಶ್ವಶ್ವರಯ್ಯ ಕಲಾಭವನದ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಲು ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ. ಹಾಗಾಗಿ ಸಿದ್ದರಾಮಯ್ಯನವರು ಎಲ್ಲಿ ಬೇಕಾದರೂ ಸ್ಪರ್ಧಿಸಹುದಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಲಿದೆ. ಸ್ವಯಂಘೋಷಿತವಾಗಿ ಹೇಳಿಕೊಳ್ಳುವುದಲ್ಲ, ಕೋಲಾರದಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸಿದರೆ ಮುಂದೆ ಏನಾಗಲಿದೆ ಎಂಬುದು ಕಾದು ನೋಡಿ ಎಂದು ಸಚಿವರು ಮಾರ್ಮಿಕವಾಗಿ ನುಡಿದರು.
ಚುನಾವಣೆ ವೇಳೆ ಪಕ್ಷಾಂತರ ಸಹಜ
ಇತ್ತೀಚಿಗೆ ಐವರು ನಗರಸಭಾ ಸದಸ್ಯರು ಕಾಂಗ್ರೆಸ್ ಸೇರಿದ ವಿಚಾರಕ್ಕೆ ಸಂಬಂಧಿಸಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜಕಾರಣವೇ ಲಾಭ ನಷ್ಟದ ಲೆಕ್ಕಾಚಾರ. ಚುನಾವಣೆ ಸಮಯದಲ್ಲಿ ಇಂತಹ ಘಟನೆಗಳು ಸಹಜ.
ನನ್ನ ಚುನಾವಣೆಯಲ್ಲಿ ಇವರು ಯಾರೂ ಇರಲಿಲ್ಲ, ನಗರಸಭಾ ಅಧ್ಯಕ್ಷ ಚುನಾವಣೆ ವೇಳೆ ಅವರಾಗಿ ಅವರೇ ಬಂದು ಅಧ್ಯಕ್ಷರ ಪರ ಮತ ಚಲಾಯಿಸಿದರು ಎಂದು ಸಚಿವರು ವಿವರಿಸಿದರು.
ಈಗ ಯಾಕೆ ಹೋಗಿದ್ದಾರೆ ಎಂಬುದನ್ನು ಅವರನ್ನೇ ಕೇಳಬೇಕು, ಕೆಲವರು ಸಂತೆಯಂಲ್ಲಿ ನಡೆಸುವ ವಹಿವಾಟು ರೀತಿಯಲ್ಲಿ ವ್ಯವಹರಿಸುತ್ತಾರೆ. ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಚಿವರು ಹೇಳಿದರು.


0 Comments