Ticker

6/recent/ticker-posts

Ad Code

Responsive Advertisement

ಕೃಷಿಯಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಲಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕಲಬುರಗಿ ,ನವೆಂಬರ್ 14 :  ಕೃಷಿಯಲ್ಲಿ ಬಂಡವಾಳ ಹೂಡಿಕೆ ಹೆಚ್ಚಾದರೆ ರೈತರ ಆದಾಯವೂ ಹೆಚ್ಚುತ್ತದೆ. ಸ್ವಾಭಿಮಾನದ ಬದುಕು ರೈತರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಕಲಬುರಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ, ವಿವಿಧ ಸಹಕಾರ ಸಂಘಗಳ ಸಹಯೋಗದೊಂದಿಗೆ ಸೇಡಂ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ “ 69ನೇ ಅಖಿಲ ಭಾರತ ಸಹಕಾರ ಸಪ್ತಾಹ - 2022” ವನ್ನುಉದ್ಘಾಟಿಸಿ ಮಾತನಾಡಿದರು.

ಒಂದು ಹೆಕ್ಟೇರಿಗೆ ನೀಡುವ ಸಾಲದ ಮೊತ್ತಕ್ಕೆ ಆರ್ಥಿಕ ಮಾಪನವನ್ನು ಸಹಕಾರ ಸಂಘಗಳೇ ತೀರ್ಮಾನ ಮಾಡಬೇಕು. ಆಗಮಾತ್ರ ರೈತರು ಮೀಟರ್ ಬಡ್ಡಿಯ ಸುಳಿಗೆ ಸಿಲುಕದೇ ಅವರ ಬಾಳು ಹಸನಾಗುತ್ತದೆ. ಸರ್ಕಾರ ಕೃಷಿ ಮೇಲಿನ ಬಂಡವಾಳವನ್ನು ಹೆಚ್ಚಿಸುವ ಕೆಲಸ ಪ್ರಾರಂಭಿಸಿದೆ. 10 ಲಕ್ಷ ಜನ ರೈತರಿಗೆ ಸಾಲ, ಯಶಸ್ವಿನಿ ಮತ್ತೆ ಜಾರಿ, ಬ್ಯಾಂಕುಗಳ ಕಂಪ್ಯೂಟರೀಕರಣ ಮಾಡಿದ್ದು, ರೈತರ ಮಕ್ಕಳಿಗೆ ವಿದ್ಯಾನಿಧಿಯನ್ನು ನೀಡಿರುವ  ಸರ್ಕಾರವಿದು ಎಂದರು.

32 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಸಾಲ :

32 ಲಕ್ಷ ರೈತರಿಗೆ 24 ಸಾವಿರ ಕೋಟಿ ರು. ಸಾಲವನ್ನು ನೀಡುವ ಗುರಿ ಸರ್ಕಾರ ಹೊಂದಿದೆ. ಕೃಷಿ ಮೇಲಿನ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸಂಪೂರ್ಣ ಗಣಕೀಕರಣ ಮಾಡಲು ತೀರ್ಮಾನಿಸಲಾಗಿದ್ದು, ಸರ್ಕಾರ 45 ಕೋಟಿ ರೂ.  ಅನುದಾನವನ್ನು ಮೀಸಲಿಡಲಾಗಿದೆ. ರೈತರ ಖಾತೆಗೆ ನೇರವಾಗಿ ಹಣ ಪಾವತಿಯಾಗಲು ಈ ಗಣಕೀರಣದಿಂದ ಅನುಕೂಲವಾಗಲಿದೆ ಎಂದರು.

ಗುಲ್ಬರ್ಗಾ ಡಿಸಿಸಿ ಬ್ಯಾಂಕ್  ಕಾಯಕಲ್ಪ :

ಶ್ರೀ ರಾಜಕುಮಾರ್ ಪಾಟೀಲ್ ರವರು, ಸಂಕಷ್ಟದಲ್ಲಿದ್ದ ಗುಲ್ಬರ್ಗಾ ಡಿಸಿಸಿ ಬ್ಯಾಂಕ್  ಕಾಯಕಲ್ಪ ಮಾಡಿ , ಸದೃಢ ಬ್ಯಾಂಕ್ ಆಗಿ ಅಭಿವೃದ್ಧಿಪಡಿಸಲು ಸಹಕಾರವೇ ಕಾರಣ.  ನಮ್ಮ ಸರ್ಕಾರದ ಬೆಂಬಲದಿಂದ ಮುಚ್ಚುವ ಹಂತದಲ್ಲಿದ್ದ ಬ್ಯಾಂಕೊಂದು ಇಂದು ಕಲ್ಬುರ್ಗಿ ಜಿಲ್ಲೆಯ 2 ಲಕ್ಷ ರೈತರಿಗೆ 1012 ಕೋಟಿ ರೂ. ಸಾಲವನ್ನು ನೀಡುತ್ತಿದೆ.  ಸರ್ಕಾರದ ಸಹಕಾರದಿಂದ 2 ಲಕ್ಷ ರೈತರ ಜೀವನವನ್ನು ಈ ಮೂಲಕ ಸುಗಮಗೊಳಿಸಲಾಗಿದೆ ಎಂದು ತಿಳಿಸಿದರು.

ರೈತರ ಆರೋಗ್ಯ ಹಿತರಕ್ಷಣೆಗೆ ಯಶಸ್ವಿನಿ ಮತ್ತೆ ಪ್ರಾರಂಭ:

ರೈತರ ಆರೋಗ್ಯ ಹಿತರಕ್ಷಣೆಗೆ ಯಶಸ್ವಿನಿ ಯೋಜನೆ ಪ್ರಾರಂಭಿಸಲಾಯಿತು. ಇದರಿಂದ ಆಸ್ಪತ್ರೆಯಲ್ಲಿ ತ್ವರಿತ ಚಿಕಿತ್ಸೆ ದೊರೆಯುತ್ತದೆ. ಈ ವರ್ಷ ಆಯವ್ಯಯದಲ್ಲಿ ಯಶಸ್ವಿನಿ ಯೋಜನೆಗೆ 300 ಕೋಟಿಯನ್ನು ಇಡಲಾಗಿದೆ. ಯಶಸ್ವಿನಿ ಯೋಜನೆಯಿಂದ ಚಿಕಿತ್ಸೆಗೆ  ಅಲೆದಾಟ ತಪ್ಪಿಸಲಿದೆ. ಕುಟುಂಬದ ಎಲ್ಲ ಸದಸ್ಯರು  ಯೋಜನೆಯ ಲಾಭವನ್ನು ಪಡೆಯಬಹುದಾಗಿದ್ದು, ಹೃದಯ, ಕಿಡ್ನಿ, ಕ್ಯಾನ್ಸರ್ ಕಾಯಿಲೆಗಳ ಚಿಕಿತ್ಸೆಯೂ ಈ ಯೋಜನೆಯ ವ್ಯಾಪ್ತಿಗೆ ಬರುತ್ತದೆ. ನವೆಂಬರ್ ಒಂದರನ್ನು ನೋಂದಣಿ ಪ್ರಾರಂಭವಾಗಿದ್ದು, ಡಿಸೆಂಬರ್ ವರೆಗೆ ನೋಂದಣಿಯಾಗಲಿದೆ. ಜನವರಿಯಿಂದ ಮುಂದಿನ ಒಂದು ವರ್ಷದವರೆಗೂ ಟ್ರಸ್ಟಿನ ಮೂಲಕ ರೈತರಿಗೆ ಆರೋಗ್ಯ ವಿಮೆ ಸೌಲಭ್ಯ ದೊರೆಯಲಿದೆ. ರೈತರಿಗೆ ಸ್ಪಂದಿಸುವ ಮಹತ್ವದ ಕಾರ್ಯಕ್ರಮಕ್ಕೆ ನಮ್ಮ ಸರ್ಕಾರ ಬಜೆಟ್ಟಿನಲ್ಲಿ ಹಣ ಮೀಸಲಿರಿಸಿ ಪುರಸ್ಕರಿಸಿದೆ. ರೈತರ ಪರವಾದ ಸರ್ಕಾರದಿಂದ ಮಾತ್ರ ಇದು ಸಾಧ್ಯ ಎಂದರು.

ದುಡಿಯುವ ವರ್ಗಕ್ಕೆ  ಸಹಕಾರಿ ರಂಗ ದೊಡ್ಡ ಸಹಕಾರ ನೀಡಿದೆ :

ಎಲ್ಲಿಯವರೆಗೆ ರೈತರು  ಆರ್ಥಿಕವಾಗಿ ಬಲಿಷ್ಠ, ಸಬಲೀಕರಣ, ಸ್ವಾವಲಂಬಿಯಾಗುವುದಿಲ್ಲವೋ ಅಲ್ಲಿಯವರೆಗೂ ಈ ದೇಶದ ಆಹಾರ ಸುರಕ್ಷತೆಯ ಪ್ರಶ್ನೆ ಏಳುತ್ತದೆ. ರೈತರನ್ನು ಸಶಕ್ತರನ್ನಾಗಿಸುವ ಹಲವಾರು ಕಾರ್ಯಕ್ರಗಳನ್ನು ನಾವು ರೂಪಿಸಿದ್ದೇವೆ. ನಮ್ಮ ಸರ್ಕಾರ ರೈತರ ವಿದಾಭ್ಯಾಸ ನೋಡಿಕೊಳ್ಳುತ್ತದೆ. ಈ ವರ್ಷ 10 ಲಕ್ಷ ಜನ ರೈತರ ಮಕ್ಕಳಿಗೆ, 6 ಲಕ್ಷ ರೈತ ಕೂಲಿಕಾರರ ಮಕ್ಕಳಿಗೆ, ನೇಕಾರರು, ಟ್ಯಾಕ್ಸಿಚಾಲಕರು, ಆಟೋಚಾಲಕರ ಮಕ್ಕಳಿಗೆ ವಿಸ್ತರಣೆ ಮಾಡಲಾಗಿದೆ.  ಕಾಯಕ ಯೋಜನೆಯಡಿ ಗ್ರಾಮೀಣ ಕುಶಲಕರ್ಮಿಗಳಿಗೆ 50 ಸಾವಿರ ರೂ.ಗಳ ಸಹಾಯಧನ ಒದಗಿಸಲಾಗುತ್ತಿದೆ. ದುಡಿಯುವ ವರ್ಗ ದೇಶವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ.   ದುಡಿಮೆಯನ್ನು ನಂಬಿರುವ ಈ ಸಮಾಜಕ್ಕೆ  ಸಹಕಾರಿ ರಂಗ ದೊಡ್ಡ ಸಹಕಾರವನ್ನು ಕೊಟ್ಟಿದೆ.

ಕೇಂದ್ರ ಸಹಕಾರ ಇಲಾಖೆಯಿಂದ ದೊಡ್ಡ ಸಹಕಾರ ಕ್ರಾಂತಿ:

ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಹಕಾರಿ ರಂಗ ಬೆಳೆಯುತ್ತಿದೆ. ಪ್ರಜಾಪ್ರಭುತ್ವದಡಿಯಲ್ಲಿರುವ ಈ ಸಹಕಾರ ರಂಗವನ್ನು ಇನ್ನಷ್ಟು ಗಟ್ಟಿಗೊಳಿಸಿ ಇದಕ್ಕೆ ಆರ್ಥಿಕ ಬೆಂಬಲ ಕೊಟ್ಟು  ಇನ್ನಷ್ಟು ಬಲಿಷ್ಠ ಮಾಡಲು ಕೇಂದ್ರದಲ್ಲಿ ಪ್ರಥಮ ಬಾರಿ ಸಹಕಾರಿ ಇಲಾಖೆಯನ್ನು ಸೃಷ್ಟಿಸಿ ಅತ್ಯಂತ ದಕ್ಷ ನಾಯಕ ಅಮಿತ್ ಶಾ ಅವರನ್ನು ಸಚಿವರನ್ನಾಗಿ ಬಹಳ ದೊಡ್ಡ ಕ್ರಾಂತಿಯನ್ನು ಇಡೀ ದೇಶದಲ್ಲಿ ಆಗಲಿದೆ ಎಂದರು.

ಯಶೋಗಾಥೆಗಳು : ನಮ್ಮಲ್ಲಿ ಯಶೋಗಾಥೆಗಳಿವೆ. ಕೆಎಂಎಫ್ ಎಷ್ಟು ದೊಡ್ಡ ಪ್ರಮಾಣದ  ಹಾಲು ಉತ್ಪಾದಕರಿಗೆ ಆಶ್ರಯ ಆಗಿದೆ. ಕ್ಯಾಂಪ್ಕೋ ಕೂಡ ಯಶಸ್ಸಿನ ಕಥೆ. ಈ ಜಿಲ್ಲೆಯ ಡಿಸಿಸಿ ಬ್ಯಾಂಕ್ ಬರುವ ದಿನಗಳಲ್ಲಿ ಅತಿ ಹೆಚ್ಚು ಜನರಿಗೆ ಸಾಲವನ್ನು ಕೊಟ್ಟು ಮತ್ತೊಂದು ಯಶೋಗಾಥೆಯನ್ನು ಬರೆಯಲಿ. ರಾಜ್ ಕುಮಾರ್ ತೇಲ್ಕೂರ್ ಅವರು ಇದನ್ನು ಸಾಧ್ಯವಾಗಿಸಬೇಕು ಎಂದರು.

ಸರ್ಕಾರದ ಸ್ಪಂದನೆ : ಸಹಕಾರಿ ರಂಗದಲ್ಲಿ ಇನ್ನಷ್ಟು ಬದಲಾವಣೆ, ಅಭಿವೃದ್ಧಿಪರವಾದ ನಿರ್ಣಯಗಳನ್ನು ಕೈಗೊಳ್ಳುವ ಚಿಂತನೆಯ ಸಪ್ತಾಹ ಕಲ್ಯಾಣ ಕರ್ನಾಟಕದ ಭಾಗದಲ್ಲಿ ನಡೆಯುತ್ತಿರುವುದು ಸಂತೋಷ. ಜಿ.ಟಿ. ದೇವೇಗೌಡರ ನೇತೃತ್ವದಲ್ಲಿ ಸಪ್ತಾಹದಲ್ಲಿ ಮೂಡಿಬಂದ ವಿಚಾರಗಳಿಗೆ ನಮ್ಮ ಸರ್ಕಾರ ಸಂಪೂರ್ಣವಾಗಿ ಸ್ಪಂದಿಸುತ್ತದೆ. ಬರುವ  ದಿನಗಳಲ್ಲಿ ಸಹಕಾರಿ ಕ್ಷೇತ್ರ ಮುಖ್ಯವಾಹಿನಿಗೆ ಬಂದು  ರಾಜ್ಯದ ಆರ್ಥಿಕ, ಸಾಮಾಜಿಕ, ಸಾಂಸ್ಕøತಿಕ, ಶೈಕ್ಷಣಿಕ ರಂಗದಲ್ಲಿ ಮುಖ್ಯವಾಹಿನಿಗೆ ಬರಬೇಕು. ಜನರಿಂದ ಜನರಿಗೋಸ್ಕರವಾಗಿ ಇರುವ ಸಹಕಾರ ಚಳವಳಿ ಯಶಸ್ವಿಯಾಗಬೇಕು. ನಾಡಿನ ದುಡಿಯುವ ವರ್ಗಕ್ಕೆ ಸಹಕಾರ ಸ್ಪಂದಿಸಬೇಕು. ಸಹಕಾರ ರಂಗ ಸರ್ವಸ್ಪರ್ಶಿ, ಸರ್ವವ್ಯಾಪಿವಾಗಲಿ ಎಂದರು.  ಕೆಲವೇ ದಿನಗಳಲ್ಲಿ ಬೃಹತ್ ಕಾಗಿನ ಯೋಜನೆಗೆ ಅಡಿಗಲ್ಲು ಹಾಕಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಭಗವಂತ ಖೂಬಾ, ಕೈಗಾರಿಕಾ  ಸಚಿವ ಮುರುಗೇಶ ನಿರಾಣಿ, ಸಂಸದ ಉಮೇಶ ಜಾಧವ, ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಸವರಾಜ ಮತ್ತಿಮೂಡ್, ಜಿ.ಟಿ.ದೇವೇಗೌಡ, ವಿಧಾನ‌ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಬಾಬುರಾವ್ ಚಿಂಚನಸೂರ ಹಾಗೂ ಮತ್ತಿತರರು ಹಾಜರಿದ್ದರು.

Post a Comment

0 Comments

Ad Code

Responsive Advertisement