ಮಂಡ್ಯ: ಕಲಿಯುಗದ ಕರ್ಣ ರೆಬಲ್ ಸ್ಟಾರ್ ಅಂಬರೀಶ್, ನಗುಮುಖದ ಒಡೆಯ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ನಮ್ಮನ್ನು ಅಗಲಿದ್ದಾರೆ. ದೈಹಿಕವಾಗಿರುವ ಈ ಇಬ್ಬರು ಇದೀಗ ಒಂದೇ ಗುಡಿಯಲ್ಲಿ ದೇವರಂತೆ ಇಟ್ಟು ಅಭಿಮಾನಿಗಳು ಆರಾಧಿಸುತ್ತಿದ್ದಾರೆ.
ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನು ಅಗಲಿ ೪ ವರ್ಷಗಳು ಕಳೆದಿವೆ. ಇನ್ನೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಅಗಲಿ ಒಂದು ವರ್ಷ ಉರುಳಿದೆ. ಇಷ್ಟು ವರ್ಷಗಳು ಕಳೆದರೂ ಸಹ ಕರುನಾಡಿನ ಜನಮಾನಸದಲ್ಲಿ ಇನ್ನೂ ಸಹ ಹಚ್ಚ ಹಸಿರಾಗಿದ್ದಾರೆ. ಇವರು ನಟಿಸಿರುವ ಚಲನಚಿತ್ರಗಳಿಗಿಂತ ಇವರ ಮಾನವೀಯ ಗುಣಗಳಿಂದಲೇ ಇವರನ್ನು ಜನರು ಇಷ್ಟಪಡುತ್ತಾರೆ. ಈ ಇಬ್ಬರು ಮಾನವೀಯ ದೊರೆಗಳನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಡಿ.ಹೊಸೂರು ಗ್ರಾಮದಲ್ಲಿ ಅರಮನೆಯ ಹೆಸರಿನಲ್ಲಿ ಗುಡಿಯನ್ನು ಕಟ್ಟಿ ಆ ಗುಡಿಯಲ್ಲಿ ಪೂಜೆ ಮಾಡುತ್ತಿದ್ದಾರೆ.
ಡಿ.ಹೊಸೂರು ಗ್ರಾಮದ ಉಮೇಶ್ ಅವರು ಅಂಬರೀಶ್ ಹಾಗೂ ಪುನೀತ್ ರಾಜ್ಕುಮಾರ್ ಅವರ ಅಪ್ಪಟ್ಟ ಅಭಿಮಾನಿ. ಇವರು ಊರಿನ ಗ್ರಾಮಸ್ಥರೊಂದಿಗೆ ಮಾತನಾಡಿ, ನಮ್ಮೂರಲ್ಲಿ ಅಂಬಿ ಹಾಗೂ ಅಪ್ಪು ಅವರನ್ನು ಗುಡಿಕಟ್ಟಿ ಆರಾಧಿಸೋಣಾ ಎಂದು ಕೇಳಿದ್ದಾರೆ. ಇದಕ್ಕೆ ಗ್ರಾಮಸ್ಥರೆಲ್ಲ ಸಹಮತ ನೀಡಿದ್ದಾರೆ.
ಬಳಿಕ ಉಮೇಶ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ದೇವರ ಕಲ್ಲಿನಲ್ಲಿ ವೀರಪರಂಪರೆ ಚಿತ್ರದಲ್ಲಿ ಕಾಣಿಸಿಕೊಂಡಿರುವ ಅಂಬರೀಶ್ ಅವರ ಪುತ್ಥಳಿ. ಇನ್ನೂ ರಾಜಕುಮಾರ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಅವರ ಹೆಗಲ ಮೇಲೆ ಪಾರಿವಾಳ ಕೂರುವ ದೃಶ್ಯದ ಪುತ್ಥಳಿಯನ್ನು ಕೆತ್ತಿಸಲಾಗಿದೆ. ಬಳಿಕ ಗ್ರಾಮದ ಸರ್ಕಲ್ನಲ್ಲಿ ಗುಡಿಯ ರೀತಿ ನಿರ್ಮಾಣ ಮಾಡಿದ್ದಾರೆ. ಅದಕ್ಕೆ ಅಂಬಿ ಅಪ್ಪು ಅರಮನೆ ಎಂದು ಹೆಸರಿಟ್ಟಿ, ಅದರೊಳಗೆ ಎರಡು ಪುತ್ಥಳಿಯನ್ನು ಇಟ್ಟು ಆರಾಧನೆ ಮಾಡುತ್ತಿದ್ದಾರೆ.
ಈ ಅರಮನೆಯನ್ನು ನೋಡಿದ ಗ್ರಾಮಸ್ಥರು ಸಹ ಫುಲ್ ಖುಷಿಯಾಗಿದ್ದಾರೆ. ಅಂಬಿ ಅಪ್ಪು ಅವರ ಅಭಿಮಾನ ಎಂದಿಗೂ ಅಜರಾಮರ, ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎನ್ನುತ್ತಾರೆ. ಇದಲ್ಲದೇ ಸಂಸದೆ ಸುಮಲತಾ ಅಂಬರೀಶ್ ಅಭಿಮಾನಿಗಳ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂಬಿ ಹಾಗೂ ಅಪ್ಪು ರಾಜ್ಯಾದ್ಯಂತ ಅಭಿಮಾನಿಗಳು ಇದ್ದಾರೆ. ಇಬ್ಬರನ್ನು ಒಟ್ಟಿಗೆ ಆರಾಧನೆ ಮಾಡುತ್ತಿರುವುದು ಸಂತೋಷದ ವಿಚಾರ ಎಂದಿದ್ದಾರೆ.
0 Comments