*86 ವಸಂತಕಂಡ ಪತ್ರಕರ್ತ ಪ್ರಹ್ಲಾದ ಕುಳಲಿ ಅವರಿಗೆ ಕೆಯುಡಬ್ಲ್ಯೂಜೆ ಗೌರವ*
ರಿಪೋರ್ಟ್ರ್ಸ್ ಗಿಲ್ಡ್ ಮೊದಲ ಪ್ರಧಾನ ಕಾರ್ಯದರ್ಶಿ ಕುಳಲಿ
ಬೆಂಗಳೂರು: ಪತ್ರಕರ್ತರಾದವರು ಆತ್ಮ ಸಾಕ್ಷಿಯ ವಿರುದ್ದವಾಗಿ ಕೆಲಸ ಮಾಡಿ ವೃತ್ತಿಗೆ ಕಳಂಕ ತರಬಾರದು. ತಮ್ಮ ವೃತ್ತಿಯಲ್ಲಿ ಮಾಡುವ ಕೆಲಸವು ಅವರ ಮನಸಾಕ್ಷಿ ಒಪ್ಪುವಂತಿರಬೇಕು ಎಂದು ಹಿರಿಯ ಪತ್ರಕರ್ತ ಪ್ರಹ್ಲಾದ ಕುಳಲಿ ಅಭಿಪ್ರಾಯಪಟ್ಟರು.
75ನೇ ಸ್ವಾತಂತ್ರ್ಯೋತ್ಸ ಸಲುವಾಗಿ ಕೆಯುಡಬ್ಲ್ಯೂಜೆ ಹಿರಿಯ ಪತ್ರಕರ್ತರನ್ನು ಗೌರವಿಸುವ "ಮನೆಯಂಗಳದಲ್ಲಿ ಮನತುಂಬಿ ನಮನ" ಕಾರ್ಯಕ್ರಮದಲ್ಲಿ ಪ್ರಹ್ಲಾದ ಕುಳಲಿ ಅವರು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟರು.
ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸಂಪಾದಕರಾಗಿದ್ದ ಮೊಹರೆ ಹನುಮಂತರಾಯರ ಗರಡಿಯಲ್ಲಿ ಪಳಗಿದ ಪ್ರಹ್ಲಾದ ಕುಳಲಿಯವರು 4 ದಶಕಗಳ ಕಾಲ ಒಂದೇ ಪತ್ರಿಕೆಯಲ್ಲಿ ಕೆಲಸ ಮಾಡಿದ ಹೆಗ್ಗಳಿಕೆಗೆ ಪಾತ್ರರಾದ ಕುಳಲಿ ಅವರು, ಸಚ್ಚಾರಿತ್ರ್ಯದ ಪತ್ರಕರ್ತ ಎಂದು ಗುರುತಿಸಿಕೊಂಡಿದ್ದಕ್ಕೆ ಇವರು ಮುಖ್ಯಮಂತ್ರಿಗಳಾಗಿದ್ದ ಗುಂಡೂರಾವ್ ಅವರ ಒಡನಾಟದಲ್ಲಿರುವ ಅವಕಾಶ ಲಭಿಸಿತ್ತು ಎಂದರು.
ಸುದ್ದಿ ಮನೆ ಒಳಗಡೆ ಅನೇಕ ಏಳು- ಬೀಳುಗಳನ್ನು ಕಂಡ ಇವರು ತಮ್ಮ ವೃತ್ತಿ ಬದ್ಧತೆ ಬಿಡದೆ ಕಿರಿಯ ಪತ್ರಕರ್ತರಿಗೆ ಪ್ರೇರಣೆಯಾಗುವ ನಿಟ್ಟಿನಲ್ಲಿ ಕೆಲಸ ಮಾಡಿದ್ದನ್ನು ಯಾರೂ ಮರೆಯುವಂತಿಲ್ಲ ಎಂದರು.
ರಿಪೋಟರ್ಸ್ ಗೀಲ್ಡ್ ( ವರದಿಗಾರರ ಕೂಟ) ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಇವರು ಪತ್ರಕರ್ತರ ಸಂಘಟನೆಯಲ್ಲಿ ಒಡನಾಟ ಇಟ್ಟು ಕೊಂಡಿದ್ದರು ಎಂದರು.
ವೃತ್ತಿ ಬದ್ದತೆಯನ್ನು ತಮ್ಮ ಅವಧಿಯಲ್ಲಿ
ಕಾಪಾಡಿಕೊಂಡು ಬಂದ 86 ರ ಇಳಿ ವಯಸ್ಸಿನ ಸರಳ ಜೀವನದ ಹಿರಿಯ ಪತ್ರಕರ್ತರಾದ ಪ್ರಹ್ಲಾದ ಕುಳಲಿ ಅವರನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲು ಹೆಮ್ಮೆ ಎನಿಸುತ್ತದೆ ಎಂದರು.
ಕೆಯುಡಬ್ಲ್ಯೂಜೆ ಮಾಜಿ ಅಧ್ಯಕ್ಷ ಎಚ್. ಎಸ್.ಸುಧೀಂದ್ರಕುಮರ್ ಮಾತನಾಡಿ, ಕೆಯುಡಬ್ಲ್ಯೂಜೆ ದೊಡ್ಡ ಆಲದಮರವಿದ್ದಂತೆ. ಸ್ವಾರ್ಥ ಕಾರಣದಿಂದ ದೂರ ಸರಿದವರು ಹೊಟ್ಟೆ ಕಿಚ್ಚಿನಿಂದ ಮಾತನಾಡುವುದು ತಪ್ಪು. ಸಂಘಟನೆ ಮುಖ್ಯವಾದಾಗ ಮಾತ್ರ ಪತ್ರಕರ್ತರು ಆ ಮೂಲಕ ಹೋರಾಟದಿಂದ ಸೌಲಭ್ಯ ಪಡೆದುಕೊಳ್ಳಲು ಸಾಧ್ಯ ಎಂದು ಹೇಳಿದರು.
- ಪ್ರಹ್ಲಾದ ಕುಳಲಿ ಅವರು ಗುಂಡೂರಾವ್ ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ಮಾಧ್ಯಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದನ್ನು ನೆನಪಿಸಿದರು.
ಆಕಾಶವಾಣಿ, ದೂರದರ್ಶನ ಸೇರಿದಂತೆ ಹಲವು ಕಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂಥಹ ಹಿರಿಯರನ್ನು ಸನ್ಮಾನಿಸುತ್ತಿರುವ ಕೆಯುಡಬ್ಲ್ಯೂಜೆ ಪದಾಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದರು.
ನಿಯೋಜಿತ ಖಜಾಂಚಿ ವಾಸುದೇವ ಹೊಳ್ಳ ವಂದಿಸಿದರು.
ಹಿರಿಯ ಪತ್ರಕರ್ತ ಕಂ.ಕ. ಮೂರ್ತಿ, ಛಾಯಾಗ್ರಾಹಕ ಶರಣ ಬಸಪ್ಪ ಇನ್ನಿತರರು ಹಾಜರಿದ್ದರು.
.jpg)
0 Comments