ಕನ್ನಡ ಗೆಳೆಯರ ಬಳಗವು ನವೆಂಬರ್ ತಿಂಗಳಲ್ಲಿ ೨-೩ ಶಾಲೆಗಳಿಗೆ ನೆರವು ನೀಡುತ್ತಾ ಬಂದಿದೆ. ನೆರವು ನೀಡುವ ಮುನ್ನ ಆ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತದೆ. ಬಂದ ಸಲಹೆಗಳನ್ನು ಪರಿಗಣಿಸಿ ಕಲ್ಯಾಣ ಕರ್ನಾಟಕ(!)ದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲುಕ್ನ ನಾಗಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ, ಎಚ್.ಎಎಲ್. ಕೇಂದ್ರೀಯ ಕನ್ನಡ ಸಂಘದ ಅಧ್ಯಕ್ಷ ಆರ್. ರಾಮಸ್ವಾಮಿ ಮತ್ತು ಕೇಂದ್ರೀಯ ಸದನ ಕನ್ನಡ ಸಂಘದ ಅಧ್ಯಕ್ಷ ಮ. ಚಂದ್ರಶೇಖರ ಹೋಗಿ ಪರಿಶೀಲಿಸಿದೆವು.


.jpg)


ಶಾಲೆಯಲ್ಲಿ ೧ರಿಂದ ೬ನೇ ತರಗತಿವರೆಗೂ ೬೮ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ೩ ಜನ ಉಪಾಧ್ಯಾಯರಿದ್ದಾರೆ. ನಾವು ಶಾಲೆಯನ್ನು ಪರಿಶೀಲಿಸಿದೆವು. ೩ ಕೊಠಡಿಯಲ್ಲಿ ೧-೬ನೆಯ ತರಗತಿ ನಡೆಯುತ್ತಿದೆ. ಶೌಚಾಲಯವಿದೆ. ೨-೩ ತರಗತಿಗಳು ಒಂದು ಕೊಠಡಿಯಲ್ಲಿ ನಡೆಯುತ್ತದೆ. ಹೆಚ್ಚನ ಮಕ್ಕಳು ಬಡತನದ ರೇಕೆಗಿಂತ ಕೆಳಗಿರುವವರು ಅನ್ನುವುದು ಸ್ಪಷ್ಟವಾಗುತ್ತದೆ. ಮಕ್ಕಳ ಬಾಡಿದ ಮುಖ ನೋಡಿದರೆ ಕರಳು ಕಿತ್ತು ಬರುತ್ತದೆ. ಬಿಸಿ ಊಟ ಮಾಡಿದೆವು. ಶಾಲೆಗೆ ರಸ್ತೆಯಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಶಾಲೆಯ ಮುಂಭಾಗದಲ್ಲಿ ವಿಶಾಲವಾದ ಜಾಗವಿದೆ. ಆದರೆ, ಸುಸ್ಥಿತಿಯಲ್ಲಿಲ್ಲ. ಬರಿಗಾಲಲ್ಲಿ ಮಕ್ಕಳು ಹೇಗೆಹೋಗುತ್ತಾರೆ ಭಯವಾಗುತ್ತದೆ. ಶಾಲೆಯ ಉಪಾಧ್ಯಾಯರಗಳು ಆಸಕ್ತಿವಹಸಿ ಕಾಂಪೌಂಡ್ ಹಾಕಲು ಹೋದರೆ, ಒತ್ತುವರಿ ಮಾಡಿಕೊಂಡಿರುವವರು ಅಡ್ಡಿಪಡಿಸುತ್ತಿದ್ದಾರೆ. ಶಾಲೆಯ ಮೇಷ್ಟ್ರುಗಳು ನೆರವು ಪಡೆದು ಅಭಿವೃದ್ಧಿ ಪಡಿಸಲು ಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಬಹುತೇಕ ಶಾಲೆಗಳ ಸ್ಥಿತಿ ಹೀಗೇ ಇದೆ, ಇನ್ನಷ್ಟು ಕೆಟ್ಟದಾಗದೆ. ಆಳುವವರು ಕಣ್ಣು ಮುಚ್ಚಿಕೊಂಡಿರುವಾಗ ಇಂತಹ ಪ್ರಯತ್ನ ಫಲ ನೀಡುವುದಿಲ್ಲ.
0 Comments