ಬಳ್ಳಾರಿ,ಜು.07: ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಹಾಗೂ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ಕಾಲ ವಿಮ್ಸ್ ಆವರಣದಲ್ಲಿ ನಡೆದ ಬೆಳಗಾವಿ ವಲಯಮಟ್ಟದ ಚೆಸ್ ಪಂದ್ಯಾವಳಿಗೆ ಗುರುವಾರ ತೆರೆಬಿದ್ದಿದೆ.
ವಿಮ್ಸ್ನ ಬಿ.ಸಿ.ರಾಯ್ ಸಭಾಂಗಣದಲ್ಲಿ ನಡೆದ ಎರಡು ದಿನಗಳ ಸ್ಪರ್ಧೆಗಳನ್ನು ಉದ್ಘಾಟಿಸಿದ ವಿಮ್ಸ್ನ ನಿರ್ದೇಶಕರಾದ ಡಾ.ಗಂಗಾಧರ ಗೌಡ ಅವರು ಪಠ್ಯಗಳ ಜೊತೆ ಈ ತರಹದ ಸ್ಪರ್ಧೆಗಳು ವಿದ್ಯಾರ್ಥಿಗಳ ಕೌಶಲ್ಯಗಳನ್ನು ವೃದ್ಧಿಸುವುದರ ಜೊತೆಗೆ ಅವರ ಸರ್ವತೋಮುಖ ಬೆಳವಣಿಗೆ ಹಾಗೂ ಅವರ ಸಂಘಟನಾ ಸಾಮಥ್ರ್ಯವನ್ನು ಸಹ ಹೆಚ್ಚಿಸುತ್ತವೆ ಎಂದರು. ವಿದ್ಯಾರ್ಥಿಗಳು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಗೀಳಿನ ಬದಲು ಇಂಥಾ ಆಟಗಳಲ್ಲಿ ಮಗ್ನರಾಗುವುದು ಉತ್ತಮ ಎಂದು ಹೇಳಿ ಎಲ್ಲಾ ಸ್ಪರ್ಧಿಗಳಿಗೆ ಶುಭಕೋರಿದರು.
ನಂತರ 6 ಜಿಲ್ಲೆಗಳಿಂದ ಆಗಮಿಸಿದ್ದ ಸ್ಪರ್ಧಿಗಳು ಉತ್ಸಾಹದಿಂದ ಆಟದಲ್ಲಿ ಮಗ್ನರಾಗಿದ್ದರು. 2ದಿನಗಳ ಕಾಲ ಅತ್ಯಂತ ರೋಚಕತೆಯಿಂದ ಕೂಡಿದ್ದ ಪಂದ್ಯಗಳು ಗುರುವಾರದಂದು ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯವಾದವು.
ವಲಯಮಟ್ಟದ ಪಂದ್ಯಾವಳಿಗಳ ವಿದ್ಯಾರ್ಥಿಗಳ ವಿಭಾಗದಲ್ಲಿ ಕಾರವಾರ ವೈದ್ಯಕೀಯ ಕಾಲೇಜು ಮೊದಲ ಸ್ಥಾನ ಮತ್ತು ವಿಮ್ಸ್ನ ವಿದ್ಯಾರ್ಥಿಗಳು 2ನೇ ಸ್ಥಾನ ಪಡೆದುಕೊಂಡರು. ವಿದ್ಯಾರ್ಥಿನಿಯರ ವಿಭಾಗದಲ್ಲಿ ಶ್ಯಾಮನೂರು ಶಿವಶಂಕ್ರಪ್ಪ ವೈದ್ಯಕೀಯ ಕಾಲೇಜು ಪ್ರಥಮ ಸ್ಥಾನ ಪಡೆದರೆ ಗದಗ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರು 2ನೇ ಸ್ಥಾನ ಪಡೆದರು.ತುಂಬಾ ಅಚ್ಚುಕಟ್ಟಾಗಿ ನಡೆದ ಈ ಸ್ಪರ್ಧೆಗಳಿಗೆ ಸಂಯೋಜಕರಾಗಿ ಡಾ.ಮಲ್ಲಿಕಾರ್ಜುನ ಹಾಗೂ ಡಾ.ನೂರ್ ಜಹಾನ್ ಬೇಗಮ್, ಸಂಘಟನಾ ಕಾರ್ಯದರ್ಶಿಗಳಾಗಿ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಅನಿಲ್ ಜೋಸೆಫ್ ಅವರು ಕಾರ್ಯ ನಿರ್ವಹಿಸಿದರು.ಬೆಳಗಾವಿ ವಲಯಮಟ್ಟದ ಸಂಯೋಜಕರಾದ ಡಾ.ಅಭಯ್ ಪ್ರಕಾಶ್, ವಿಮ್ಸ್ನ ಪ್ರಾಂಶುಪಾಲರಾದ ಡಾ.ಕೃಷ್ಣಸ್ವಾಮಿ, ವಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಯೋಗೇಶ್, ಪ್ರಾಧ್ಯಾಪಕರಾದ ಡಾ.ಶಂಕರ್, ನಿಲಯಪಾಲಕರಾರಾದ ಡಾ.ಅರುಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ಗೆದ್ದ ತಂಡಗಳಿಗೆ ವಿಮ್ಸ್ ನಿರ್ದೇಶಕರಾದ ಡಾ.ಗಂಗಾಧರ ಗೌಡ ಅವರು ಬಹುಮಾನಗಳನ್ನು ವಿತರಿಸಿದರು.

0 Comments