ಮಧುಗಿರಿ:-" ಪ್ರಸ್ತುತ ದಿನಗಳಲ್ಲಿ ಹಿರಿಯ ನಾಗರಿಕರು ಮಾನಸಿಕ ಒತ್ತಡಕ್ಕೆ ಸಿಲುಕಿ ಸಾಕಷ್ಟು ರೋಗಗಳಿಗೆ ತುತ್ತಾಗುತ್ತಿದ್ದು, ಇದರಿಂದ ಹೊರಬರಬೇಕಾದರೆ ಯೋಗ -ಧ್ಯಾನ- ಪ್ರಾರ್ಥನೆ- ಭಜನೆ ಮಾಡುವುದರಿಂದ ಸಾಧ್ಯ' ವೆಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಎಚ್. ಎ. ಶಿಲ್ಪಾ ರವರು ತಿಳಿಸಿದರು
ಗುರುವಾರದಂದು ಪಟ್ಟಣದಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನ (ಸಂತೆ ಮೈದಾನ)ದಲ್ಲಿರುವ ಪತಂಜಲಿ ಯೋಗಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ,ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ತಾಲ್ಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಿರಿಯ ನಾಗರಿಕರಿಗೆ ಯೋಗ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಪಾಶ್ಚಾತ್ಯ ದೇಶಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಯೋಗ ಮತ್ತು ಧ್ಯಾನವನ್ನು ಅಲ್ಲಿನ ನಾಗರಿಕರು ಅಳವಡಿಸಿಕೊಂಡಿದ್ದು ನಮ್ಮಲ್ಲಿ ಅಸಡ್ಡೆ ತೋರುತ್ತಿರುವುದು ವಿಷಾದನೀಯ, ಹಿರಿಯ ನಾಗರಿಕರಿಗೆ ಯೋಗ ತರಬೇತಿ ನೀಡಬೇಕೆಂದು ರಾಜ್ಯ ಉಚ್ಛ ನ್ಯಾಯಾಲಯದ ಆದೇಶದಂತೆ ತಾಲ್ಲೂಕಿನಲ್ಲಿ ಪ್ರಾರಂಭಿಸಲಾಗಿದೆ. ಹಿತಮಿತ ಆಹಾರ, ಪ್ರಾಣಾಯಾಮ "ಓಂ'ಕಾರದ ಬೀಜಾಕ್ಷರ ಮಂತ್ರ ಪಠಣದಿಂದ ಆರೋಗ್ಯವನ್ನು ಕಾಪಡಬಹುದು, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗ ಕಲಿಸುವುದು ಒಳ್ಳೆಯದು. ನಾನು ನ್ಯಾಯಾಧೀಶ ರಾದ ನಂತರ ಸಾಕಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೆ ಆಗ ಹುಬ್ಬಳ್ಳಿಯಲ್ಲಿನ ಪ್ರಖ್ಯಾತ ವೈದ್ಯರನ್ನು ಸಂಪರ್ಕಿಸಿದಾಗ ಪ್ರತಿನಿತ್ಯ ಯೋಗಾಭ್ಯಾಸ ಮಾಡಿ ಎಂಬ ಸಲಹೆ ನೀಡಿದರು. ನಾನು ಯೋಗ ಕಲಿತು ಕೊಂಡ ಪರಿಣಾಮ ಮಾನಸಿಕ ಒತ್ತಡ ಕಡಿಮೆಯಾಗಿದೆ ಎಂದು ಸ್ವತಃ ಅನುಭವವನ್ನು ತಿಳಿಸಿ ಯೋಗಕ್ಕಿರುವ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ ರಮೇಶ್ ಬಾಬು ಮಾತನಾಡಿ, ಹಿರಿಯ ನಾಗರಿಕರಿಗೆ ಮರೆವೂ ಎಂಬುದು ಸಾಮಾನ್ಯವಾಗಿದೆ. ಯೋಗವನ್ನು ಮಾಡುವುದರಿಂದ ಏಕಾಗ್ರತೆ ಬರುವುದರ ಜೊತೆಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯ ಸೀಮಿತವಾಗಿರುತ್ತದೆಂದರು.ದೇಶದಲ್ಲಿ ಈ ಹಿಂದೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿತ್ತು. ಈಗ ಅಸಾಂಕ್ರಾಮಿಕ ರೋಗಗಳಾದ ಬಿಪಿ, ಶುಗರ್, ಹೃದಯಾಘಾತ ಮತ್ತಿತರ ಕಾಯಿಲೆಗಳು ಹೆಚ್ಚಾಗಿದ್ದು ಮೂವತ್ತು ವರ್ಷ ತುಂಬಿದ ಪ್ರತಿಯೊಬ್ಬ ನಾಗರಿಕನು ಎಲ್ಲಾ ರೀತಿಯ ತಪಾಸಣೆಗೆ ಒಳಗಾಗಬೇಕು. ಸರ್ಕಾರವೇ ಪ್ರಾಚೀನ ವೈದ್ಯಕೀಯ ಪದ್ಧತಿಯನ್ನು ಒಪ್ಪಿಕೊಂಡಿದ್ದು ಜನರು ಯೋಗ ಕ್ಕೆ ದಾಸರಾದರೆ ರೋಗ ಬರುವುದಿಲ್ಲವೆಂದರು.
ವಕೀಲರ ಸಂಘದ ಅಧ್ಯಕ್ಷ ಪಿ. ಸಿ. ಕೃಷ್ಣಾರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದೆ ಯೋಗವನ್ನು ಋಷಿಮುನಿಗಳು ಮಾತ್ರ ಮಾಡುತ್ತಿದ್ದರು. ಹುಟ್ಟು ಉಚಿತ ಸಾವು ಖಚಿತ ಈ ನಡುವೆ ಸುಖಕರ ಜೀವನ ಮಾಡಬೇಕಾದರೆ ಯೋಗ ಅತ್ಯವಶ್ಯಕವಾಗಿದ್ದು, ಮನುಷ್ಯ ಜಡತ್ವದಿಂದ ಹೊರ ಬರಬೇಕಾದರೆ ಧ್ಯಾನ ಮತ್ತು ಯೋಗ ಮಾಡಿದಾಗ ಮಾತ್ರ ಸಾಧ್ಯ ಇದರಿಂದಾಗಿ ಲವಲವಿಕೆಯಿಂದಿರಬಹುದೆಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಹವಳದ ಸೌಮ್ಯಶ್ರೀ, ಪತಂಜಲಿ ಯೋಗ ಮಂದಿರದ ಅಧ್ಯಕ್ಷ ಕೆ. ವಿ .ಮಂಜುನಾಥ್ ಗುಪ್ತಾ, ಸಂಚಾಲಕ ಎಂ.ಎನ್. ನರಸಿಂಹಮೂರ್ತಿ, ಆರ್.ಐ. ಹಾಗೂ ರೋಟರಿ ಸಂಸ್ಥೆಯ ಅಧ್ಯಕ್ಷ ಜಯರಾಮಯ್ಯ, ವಕೀಲ ಆರ್. ಆನಂದ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷೆ ಸಹನಾ ನಾಗೇಶ್
ವರದಾಯಿನಿ ಟ್ರಸ್ಟ್ ನ ಅಧ್ಯಕ್ಷೆ ಗಾಯತ್ರಿ ನಾರಾಯಣ್, ಯೋಗ ಶಿಕ್ಷಣ ಸುವರ್ಣ ರಮೇಶ್, ವಿಜಯಶ್ರೀನಾಥ್, ಸುಜಾತಾ,ಎಂ.ವಿ.ಮೂಡ್ಲಗೀರಿಶ್, ಇತರರು ಹಾಜರಿದ್ದರು.
ವರದಿ:ನಾಗೇಶ್ ಜೀವಾ ಮಧುಗಿರಿ
0 Comments