ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಅಕ್ರಮವಾಗಿರುವುದು ಲೋಕಾಯುಕ್ತ ತನಿಖೆಯಿಂದ ಸಾಬೀತಾದ ಹಿನ್ನೆಲೆಯಲ್ಲಿ ಶಾಸಕ ಮುನಿರತ್ನರವರನ್ನು ಸಚಿವ ಸ್ಥಾನದಿಂದ ವಜಾ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, “ಮುಖ್ಯಮಂತ್ರಿಯ ನವ ನಗರೋತ್ಥಾನ ಯೋಜನೆಯಡಿ ಕೆಆರ್ಐಡಿಎಲ್ಗೆ ನಕಲಿ ಬಿಲ್ ಪಾವತಿಸಲಾಗಿದೆ. ಕೆಲವು ಕಾಮಗಾರಿಗಳ ಅನುಷ್ಠಾನವೇ ಆಗಿಲ್ಲ. ಕೆಲವು ಕಾಮಗಾರಿಗಳಲ್ಲಿ ಹೆಚ್ಚುವರಿ ಅಳತೆ ನಮೂದಿಸಲಾಗಿದೆ. ಕೆಲವು ಕಾಮಗಾರಿಗಳ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಇನ್ನೂ ಕೆಲವು ಕಾಮಗಾರಿಗಳಲ್ಲಿ, ಟೆಂಡರ್ನಲ್ಲಿ ನಿಗದಿಪಡಿಸಿದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಒಟ್ಟು 114 ಕಾಮಗಾರಿಗಳಿಂದ ಸರ್ಕಾರದ ಬೊಕ್ಕಸಕ್ಕೆ 118.26 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಲೋಕಾಯುಕ್ತ ವರದಿಯಲ್ಲಿ ಸ್ಪಷ್ಟ ಉಲ್ಲೇಖವಿದೆ” ಎಂದು ಹೇಳಿದರು.
“ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿಯವರು ಜನವರಿ 24ರಂದೇ 60 ಪುಟಗಳ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಈವರೆಗೆ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಟೆಂಡರ್ನಲ್ಲಿ ನಿಗದಿಪಡಿಸಿದಂತೆಯೇ ಕಾಮಗಾರಿ ನಡೆದಿದೆ ಎಂದು ವರದಿ ನೀಡಿದ ಸಿವಿಲ್ ಸ್ಕ್ವೇರ್ ಕನ್ಸಲ್ಟಂಟ್ಸ್ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಲೋಕಾಯುಕ್ತ ವರದಿಯಲ್ಲಿ ಆಪಾದಿತರೆಂದು ಹೇಳಲಾಗಿರುವ ಎಲ್ಲ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಬೇಕು. ಸಂಬಂಧಪಟ್ಟ ಶಾಸಕ ಮುನಿರತ್ನರವರು ಇಡೀ ಅಕ್ರಮದ ಸೂತ್ರಧಾರರಾಗಿದ್ದು, ಅವರನ್ನು ಸಚಿವ ಸ್ಥಾನದಿಂದ ಉಚ್ಚಾಟಿಸಿ ವಿಚಾರಣೆಗೆ ಒಳಪಡಿಸಬೇಕು. ಆಗ ಮಾತ್ರ ಹಗರಣದ ಸಂಪೂರ್ಣ ಸ್ವರೂಪ ಬಹಿರಂಗವಾಗಲಿದೆ” ಎಂದು ಮೋಹನ್ ದಾಸರಿ ಹೇಳಿದರು.
“2018ರ ಚುನಾವಣೆಯಲ್ಲಿ ಮುನಿರತ್ನರವರು ಭಾರೀ ಅಕ್ರಮ ಮಾಡಿದ್ದನ್ನು ಬಿಜೆಪಿ ನಾಯಕರೇ ಸಾಕ್ಷಿ ಸಮೇತ ಬಹಿರಂಗ ಪಡಿಸಿದ್ದರು. ಆದರೆ ಮುನಿರತ್ನ ಬಿಜೆಪಿ ಸೇರಿದ ನಂತರ ಬಿಜೆಪಿಯವರೇ ಪ್ರಕರಣವನ್ನು ಹಿಂಪಡೆದು ಆರೋಪಿಯನ್ನು ರಕ್ಷಿಸಿದರು. ಈಗ ನಾವು ಸುಮ್ಮನಿದ್ದರೆ ಈ 118.26 ಕೋಟಿ ಮೊತ್ತದ ಹಗರಣವನ್ನು ಕೂಡ ಬಿಜೆಪಿ ಸರ್ಕಾರ ಮೂಲೆಗುಂಪು ಮಾಡಲಿದೆ. ಇದಕ್ಕೆ ಆಮ್ ಆದ್ಮಿ ಪಾರ್ಟಿ ಅವಕಾಶ ನೀಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಹೋರಾಟ ಮಾಡಲಾಗುತ್ತದೆ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಎಚ್ಚರಿಸಿದರು.
ಈ ರೀತಿಯ ಕಳಂಕಿತ ಶಾಸಕರು ನಮಗೆ ಬೇಕೆ ಎಂಬುದನ್ನು ಸುಶಿಕ್ಷಿತ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜನತಾ ನ್ಯಾಯಾಲಯದಲ್ಲಿ ಮುಂದಿನ ದಿನಗಳಲ್ಲಿ ಪ್ರಶ್ನಿಸಲಾಗುವುದು ಎಂದು ಕ್ಷೇತ್ರದ ಅಧ್ಯಕ್ಷ ಸತೀಶ್ ಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರುಗಳಾದ ಚನ್ನಪ್ಪ ಗೌಡ ಹಾಗೂ ವಿಜಯ್ ಶಾಸ್ತ್ರಿಮಠ ಇದ್ದರು
0 Comments