ಊರಿಗೆ ಬಂದವರು ನೀರಿಗೆ ಬರಲ್ವಾ ಎಂಬಂತೆ ಕಬ್ಬನ್ ಪಾರ್ಕಿನ ಪ್ರತಿ ಮರದ ಹಿಂದೆ ಒಬ್ಬೊಬ್ಬ ವ್ಯಾಲಂಟೈನ್ ಇದ್ದ ಬಗ್ಗೆ ಪ್ರೇಮಿಗಳ ದಿನಾಚರಣೆಯ ಸಂಭ್ರಮ ಮುಗಿದ ನಂತರ ಸ್ವಲ್ಪ ತಿಳಿದುಕೊಳ್ಳೋಣ.
ಅವನು ದೊಡ್ಡವನಾ ಅವಳು ದೊಡ್ಡವಳಾ ಅಂತ ಒಂದು ಬರಹ ಕೆಲವು ವರ್ಷಗಳ ಹಿಂದೆ ಬರೆದಿದ್ದೆ.ಆಗ ಉದಯವಾಣಿಯ I love ಬೆಂಗಳೂರು ಪುರವಣಿಯ ಲವ್ ಇನ್ ಬೆಂಗ್ಳೂರು ನೀಡಿದ್ದ ದಶಕಗಳ ಹಿಂದಿನ ಪ್ರೇಮಿಗಳ ಕತೆ ಓದುತ್ತಾ ಓದುತ್ತಾ ಕಬ್ಬನ್ ಪಾರ್ಕಿನ ಪ್ರತಿ ಮರದ ಹಿಂದೆಯೂ ಒಂದೊಂದು ಜೋಡಿ ಕುಳಿತಿರುತ್ತಿದ್ದ ಲಾಲ್ ಬಾಗ್ ಲೋಟಸ್ ಪಾಂಡಿನ ಸುತ್ತಾ ಕಲ್ಲಿನ ಮತ್ತು ಕಬ್ಬಿಣದ ಬೆಂಚುಗಳ ಮೇಲೆ ಕುಳಿತಿರುತ್ತಿದ್ದ ಜೋಡಿಗಳು ದೇವರ ಉತ್ಸವ ಮದುವೆ ಮನೆ ಕವಿಗೋಷ್ಟಿ ಕಾಲೇಜಿನ ಅಂಗಳದಲ್ಲಿ ಪರಸ್ಪರ ಮೆಚ್ಚಿಕೊಂಡವರು ಎರಡನೇ ಭೇಟಿಗೆ ಬರುತ್ತಿದ್ದ ಜಾಗವೇ ಮಲ್ಲೇಶ್ವರಂ ಎಂಟನೇ ಕ್ರಾಸು ! ಬೆಂಗಳೂರಿಗೆ ಬಂದವರು ಮಲ್ಲೇಶ್ವರಂಗೆ ಬರಲ್ವಾ ? ಎಂಬ ಮಾತೇ ಆಗ ಚಾಲ್ತಿಯಲ್ಲಿತ್ತು. ಅವಳ/ಅವನ ಮೇಲೆ ಪ್ರೀತಿಯಾಗಿದೆ.ಈ ಸಂಗತಿ ಅವಳಿಗೂ(ಅವನಿಗೂ) ಗೊತ್ತಾಗಿದೆ ಹೀಗೆ ಸುಂದರವಾಗಿ ಓದಿಸಿಕೊಂಡು ಹೋಗಿತ್ತು ಚೇತೋಹಾರಿ ವಿಚಾರಗಳು.
ಇಂದು ಕಾಫಿ ಡೇಯಲ್ಲಿ ಕುಳಿತು ಮೂರು ಘಂಟೆ ಕುಳಿತರೂ ಏಕಾಂತದ ವನ್ ಟು ವನ್ ಮುಖಾಮುಖಿಗೆ ತೊಂದರೆಯಿಲ್ಲ. ಆಗ ಕಬ್ಬನ್ ಪಾರ್ಕ್ ಲಾಲ್ ಬಾಗ್ ಬಿಟ್ಟರೆ ಗಾಂಧಿ ಬಜಾರಿನ ಕಹಳೆ ಬಂಡೆ ( ಬ್ಯೂಗಲ್ ರಾಕ್ ಪಾರ್ಕ್) ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್ ಆಸುಪಾಸು, ಎಂ ಜಿ ರಸ್ತೆ ಬ್ರಿಗೇಡ್ ರಸ್ತೆಯಲ್ಲಿ ಪ್ರೀತಿಯ ಲೋಕದಲ್ಲಿ ಮುಳುಗಿದ್ದವರು ಮಾತ್ರವೇ ಇರುತ್ತಿದ್ದರು.ಐ ಲವ್ ಯೂ ಅಂದದ್ದಾಗಿದೆ.ಕೈ ಕೈ ಹಿಡಿದು ಸುತ್ತುವ ಧೈರ್ಯವೂ ಜೊತೆಗಿರುವುದನ್ನು ನೋಡಿ ಕಬ್ಬನ್ ಪಾರ್ಕಿಗೂ ಖುಷಿಯಾಗುತ್ತಿತ್ತಂತೆ. ಎಲ್ಲರೂ ಗುಟ್ಟಾಗಿ ಮಾತನಾಡಲೆಂದು ಬಂದವರೇ. ಅದನ್ನು ಕಂಡ ಮೇಲೆ ನೀರಿಗಿಳಿದ ಮೇಲೆ ಮಳೆಯೇನು ಚಳಿಯೇನು ಅನ್ನಿಸಿ ಆಗಷ್ಟೇ ನಡೆದು ಬಂದ ಯುವ ಜೋಡಿಗೂ ಮಾತನಾಡುವ ಹಾಗೆಯೇ ಮೈ ಮರೆಯುವ ಹುಕಿ ಬರುತ್ತಿತ್ತಂತೆ ಹೀಗೆ ಚೇತೋಹಾರಿ ತರೇಹವಾರಿ ವಿಷಯಗಳ ಅಡಕ ಸೂಪರ್ರಾಗಿತ್ತು. ನಾ ನಿನ್ನ ಬಿಡಲಾರೆ ಎಂಬಂತಹ ಪ್ರೇಮಿಗಳು ಬರುತ್ತಿದ್ದುದು ಕಹಳೆ ಬಂಡೆಗಂತೆ.
ಆ ಕೆಂಪು ಗುಲಾಬಿ ಬಣ್ಣದ ವ್ಯಾಲಂಟೈನ್ ಮತ್ತು ಲವ್ ಹೃದಯದ ಬಣ್ಣದ ಸಾಂಕೇತಿಕತೆ ಎಷ್ಟೊಂದು ನವಿರು ಅಲ್ವಾ. ಪಟಾಯಿಸುವಾಗ ಸಿಗುವ ಸುಖ ಪಟಾಯಿಸಿದ ನಂತರದ ದಿನಗಳಲ್ಲಿ ಸವಾಲಾಗಿ ಮಾರ್ಪಾಡಾಗುವುದು. ನಿರಂತರ ನಗು ಖುಷಿಗಳ ವಿನಿಮಯ ಯಾವಾಗ ಅತ್ಯಂತ ಭಾವುಕ ಯಾತನೆಯಾಗಿ ಬದಲಾವಣೆಯಾಗುತ್ತದೋ ಪ್ರೀತಿಸಿದ್ದು ಸರಿಯೋ ಅಥವಾ ಪ್ರೀತ್ಸೋದ್ ತಪ್ಪಾ ! ಪ್ರೀತ್ಸು ತಪ್ಪೇನಿಲ್ಲ !! ಪ್ರೀತಿಸಿ ತಪ್ಪಾಯ್ತಾ ಎಂಬ ತರ್ಕಗಳ ನಡುವೆ ಪ್ರೀತ್ಸೆ ಪ್ರೀತ್ಸೆ ಕಣ್ಣು ಮುಚ್ಚಿ ನನ್ನ ಪ್ರೀತ್ಸೆ ಉನ್ಮಾದ !!!ಹೆಂಗಿತ್ತು ಈ ವರ್ಷದ ವ್ಯಾಲಂಟೈನ್ ದಿನ ? ಶಿವ್ರಾಜ್ಕುಮಾರು ಕಿಸ್ಸಿಗೆ ಡಮಾರು ಅಂತಲೋ ಓ ಗುಲಾಬಿಯೆ ಓಹೋ ಗುಲಾಬಿಯ ಅಂತ ಓಂ ಚಿತ್ರವನ್ನು ನೆನಪಿಸಿ ಬಿಡುತ್ತದೆ ಅಲ್ವಾ ?
ಪ್ರೇಮಿಗಳ ದಿನಕ್ಕೆ ಮುನ್ನಾ... ನಿಮ್ಮಲ್ಲಿ ಒಂದೆರಡು ಪ್ರಶ್ನೆ ?
ಒಂದು ಶನಿವಾರದ ಸಂಜೆ ಸುಶ್ರಾವ್ಯವಾಗಿ ಹಾಡಿದ್ದ ಸೌರಭ್ ಅಹ್ಲುವಾಲಿಯಾ ಎಂಬ ವ್ಯಕ್ತಿಯನ್ನು ಕುರಿತು ನಿರೂಪಕಿ.ಬಹಳ ಚೆನ್ನಾಗಿ ಹಾಡಿದಿರಿ.ನಿಮ್ಮ ಹಾಡನ್ನು ಕೇಳಿದ ಮಂದಿಗೆ ನೀವು ಏನಾದರೂ ಸಂದೇಶ ಹೇಳಬಯಸುವಿರಿ ಎಂದಾಗ ಅವರು ಹೇಳಿದ್ದು " If you have loved someone in life, don’t hide but just tell that you loved"ನಿಮ್ಮಲ್ಲಿ ಒಂದೆರಡು ಪ್ರಶ್ನೆ ? ನಿಮಗೆ ಯಾರಾದರೂ ಪ್ರೀತಿಸುತ್ತೇನೆ ಎಂದರೆ ನಿಮಗೆ ಏನನಿಸುತ್ತದೆ ? ನಿಮ್ಮನ್ನು ಪ್ರೀತಿಸಿದವರ ಬಗ್ಗೆ. ಪ್ರೀತಿ ಅಮರ ಅಂತಾರೆ ಆಲ್ವಾ ? ಪ್ರೀತಿ ಎನ್ನುವುದು ನಿಜಕ್ಕೂ ಸುಖಾನಾ ದುಃಖಾನ ? ಸಿಂಪಲ್ ಉತ್ತರ ಕೊಟ್ಟು ನಿರಾಳರಾದರೆ ನಿಜವಾದ ಸಂಭ್ರಮ.
ಗಾಂಧರ್ವ ಪ್ರೀತಿ ಮತ್ತು ಗಾಂಧಿ ತಾತನ ಹೊಸ ನೋಟು !
ಅವರಿಬ್ಬರೂ ಬಹಳ ಅದ್ಭುತ ಪ್ರೇಮಿಗಳು. ಅಪರಿಮಿತ ಅನ್ಯೋನ್ಯತೆ. ಒಬ್ಬರನ್ನೊಬ್ಬರು ನೋಡುವುದು ಬಹಳ ಅಪರೂಪ. ಒಬ್ಬರಿಗೊಬ್ಬರು ಮಾತನಾಡುವುದೂ ಅಪರೂಪ. ಆದರೆ ಒಬ್ಬರನ್ನೊಬ್ಬರು ಪ್ರತಿದಿನ ತಪ್ಪದೆ ನೆನಪಿಸಿಕೊಳ್ಳುತ್ತಾರೆ. ಪ್ರತಿದಿನ ಒಬ್ಬರಿಗೊಬ್ಬರು ಮನದಲ್ಲಿ ಹಾರೈಸಿಕೊಳ್ಳುತ್ತಾರೆ. ದೇವರು ಚೆನ್ನಾಗಿಟ್ಟಿರಲಿ ಸದಾ ಅವನು ನೀನು ಚೆನ್ನಾಗಿರಬೇಕು-ಅವಳು ಚೆನ್ನಾಗಿರಬೇಕು ಎಂಬುದಷ್ಟೇ ಎರಡೂ ಹೃದಯಗಳ ಒಂದು ಸೆಳೆತ ಮತ್ತು ಮಿಡಿತ.
ಗಂಡು ಒಂದು ಕರೆ ಮಾಡಿ ಕೇಳ್ತಾನೆ, ಅಲ್ಲಾ ಕಣೆ ನಾನು ನೀನು ಭೇಟಿ ಮಾಡಲ್ಲ, ಪ್ರೇಮಿಗಳ ಹಾಗೆ ಏನೂ ಮಾಡಲ್ಲ, ನೀನು ನನಗೆ ಕರೆ ಮಾಡಲ್ಲ, ನಾನು ನಿನಗೆ ಕರೆ ಮಾಡಲ್ಲ, ಮಾಡಿದರೂ ನಿನಗೆ ಮಾತನಾಡಲು ಕಷ್ಟ. ನಮ್ಮಿಬ್ಬರ ಮಧ್ಯೆ ಏನೂ ಇಲ್ಲ ಆದರೂ ಲವ್! ಏನೂ ಇಲ್ಲದಿದ್ದರೂ ಒಂದು ಸಂಭ್ರಮ. ಹೆಣ್ಣು ನಗು ತಳೆಯಲಾರದೆ ಅದೇ ಮಾತು ಹೇಳ್ತಾಳೆ. ನಾವು ನೋಡಲ್ಲ, ನಾವು ಮಾತನಾಡಲ್ಲ ಆದರೂ ಒಂತರಾ ಸಂಭ್ರಮ. ಒಂತರಾ ಗಾಂಧರ್ವ ಪ್ರೀತಿ ಎನ್ನುತ್ತಾಳೆ.
ಗಂಡಿನ ಮನದಲ್ಲಿ ಸುಳಿಯುವ ಒಂದು ವಿಶೇಷ ಉಪಮೆ ತನ್ನ ಪರ್ಸಿನಲ್ಲಿರುವ ಹೊಸ ಎರಡು ಸಾವಿರ ರೂಪಾಯಿಯ ಗಾಂಧಿ ತಾತನ ನೋಟು. ನಮ್ಮ ಪ್ರೀತಿ ಎಂಬುದಕ್ಕೆ ಸಾಕಷ್ಟು ಬೆಲೆ ಇದೆ. ಈ ನೋಟಿನ ತರಹ. ಆದರೆ ಚಿಲ್ಲರೆ ಸಿಗಲ್ಲ. ಪ್ರೀತಿ ಕರಗಲ್ಲ ಚಿಲ್ಲರೆ ಖುಷಿ ಸಿಗಲ್ಲ. ಎಲ್ಲವೂ ಪೂರ್ಣ ಪ್ರೀತಿ, ಅಪೂರ್ಣತೆಗಳ ನಡುವೆ ಪೂರ್ಣತೆ ನೆನೆಯುತ್ತಾ ಸ್ವಾರ್ಥವಿಲ್ಲದ ಬಂಧವೂ ಸಂಬಂಧವೂ ಈ ಪ್ರೀತಿ ಎಂದು ಮುಗುಳುನಕ್ಕು ಸಂಭ್ರಮಿಸುತ್ತಾನೆ. ಪ್ರೇಯಸಿಯ ನಗು ಮತ್ತು ಅವಳಾಡಿದ ನಾವು ನೋಡಲ್ಲ, ನಾವು ಮಾತನಾಡಲ್ಲ ಆದರೂ ಒಂತರಾ ಸಂಭ್ರಮ. ಒಂತರಾ ಗಾಂಧರ್ವ ಪ್ರೀತಿ ಎಂಬ ಮಾತನ್ನು ನೆನೆಯುತ್ತಾ ಸಂಭ್ರಮಿಸುತ್ತಾ !!!
-C.N.Ramesh
0 Comments