ಮಧುಗಿರಿ : ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡಾಗ ಮಾತ್ರ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಾಧ್ಯ ಎಂದು ತಹಶೀಲ್ದಾರ್ ಕೆ ಅರುಂಧತಿ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಿಕ್ಷಣದಿಂದ ಮಾತ್ರ ಬಡತನ ಹೋಗಲಾಡಿಸಲು ಸಾಧ್ಯ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದರು.
ಕಾರ್ಯಕ್ರಮದಲ್ಲಿ ಸರ್ವಜ್ಞ ವೇದಿಕೆಯ ಅಧ್ಯಕ್ಷ ವೆಂಕಟರವಣಪ್ಪ ಮಾತನಾಡಿ ಅತಿ ಹಿಂದುಳಿದ ವರ್ಗಗಳು ಆರ್ಥಿಕವಾಗಿ, ರಾಜಕೀಯವಾಗಿ ಬಹಳಷ್ಟು ಶೋಚನೀಯ ಸ್ಥಿತಿಯಲ್ಲಿವೆ. ರಾಜಕೀಯ ಜಾಗೃತಿ ಬೆಳೆಸಿಕೊಳ್ಳದ ಹೊರತು ತಳ ಸಮುದಾಯಗಳ ಅಭಿವೃದ್ಧಿ ಸಾಧ್ಯವಿಲ್ಲ. ಹಿಂದುಳಿದ ವರ್ಗಗಳ ಏಳಿಗೆಗಾಗಿ ಸರ್ಕಾರ ದೀರ್ಘಾವಧಿ ಯೋಜನೆಗಳನ್ನು ಘೋಷಿಸಬೇಕು ಎಂದರು.
12 ನೇ ಶತಮಾನದಲ್ಲಿ ಕಲ್ಯಾಣ ಪಟ್ಟಣದಲ್ಲಾದ ದಾಳಿಯಲ್ಲಿ ಶರಣರನ್ನು ಮತ್ತು ಶರಣ ಸಾಹಿತ್ಯವನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ದೊರೆಯುವಂತೆ ಮಾಡಿದ ಧೀರ ಶರಣ ಮಡಿವಾಳ ಮಾಚಯ್ಯ ಎಂದರು.
ಮಡಿವಾಳ ಸಂಘದ ಅಧ್ಯಕ್ಷ ಈಶ್ವರಯ್ಯ ಮಾತನಾಡಿ ಡಾ. ಅನ್ನಪೂರ್ಣಮ್ಮ ವರದಿ ಆಧಾರದ ಮೇಲೆ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಶೀಲ್ದಾರ್ ಕಮಲಮ್ಮ, ಶಿರಸ್ತೇದಾರ್ ಶ್ರೀನಿವಾಸ್, ಹೆಚ್ಚುವರಿ ಶಿರಸ್ತೇದಾರ್ ಉಮೇಶ್, ಗ್ರಾಮಲೆಕ್ಕಿಗರಾದ ಶಿವರಾಮಯ್ಯ, ಪರಮೇಶ್, ಸಮುದಾಯದ ಮುಖಂಡರಾದ ಎಂ.ಸಿ ವೆಂಕಟಾಚಲಪತಿ, ಬಿ.ಎನ್. ಮಂಜುನಾಥ್, ಎಂ ಗಂಗಾಧರ್, ಶಿವಣ್ಣ ಲಕ್ಷ್ಮಿಪತಿ, ಸಿದ್ದಯ್ಯ, ಚಿಕ್ಕ ರಂಗಪ್ಪ ಇತರರಿದ್ದರು.
ವರದಿ:ನಾಗೇಶ್ ಜೀವಾ ಮಧುಗಿರಿ.
0 Comments