ಯಲಹಂಕ ಉಪನಗರ ವಾರ್ಡ್ನಲ್ಲಿ ಮೂರು ವರ್ಷಗಳಿಂದ ಮುಚ್ಚಲ್ಪಟ್ಟಿರುವ ಆರೋಗ್ಯ ಕೇಂದ್ರದ ಪುನರಾರಂಭಕ್ಕೆ ಆಗ್ರಹಿಸಿ ಫೆ. 9ರಂದು ಬೃಹತ್ ಪ್ರತಿಭಟನೆ ನಡೆಸಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬೆಂಗಳೂರು ಎಎಪಿ ಉಪಾಧ್ಯಕ್ಷರಾದ ಬಿ.ಟಿ.ನಾಗಣ್ಣ, “ಯಲಹಂಕ ಉಪನಗರ ವಾರ್ಡ್ ಹಾಗೂ ಸುತ್ತಮುತ್ತಲಿನ ಸುಮಾರು ಒಂದು ಲಕ್ಷ ಜನರಿಗೆ ನೆರವಾಗಬೇಕಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವು ಕಳೆದ ಮೂರು ವರ್ಷಗಳಿಗೆ ಕಾರ್ಯನಿರ್ವಹಿಸುತ್ತಿಲ್ಲ. ಇದಕ್ಕೆ ಸ್ಥಳೀಯ ಶಾಸಕ ಎಸ್.ಆರ್.ವಿಶ್ವನಾಥ್ರವರ ನಿರ್ಲಕ್ಷ್ಯವೇ ಕಾರಣ. ಆರೋಗ್ಯ ಕೇಂದ್ರ ಮುಚ್ಚಿರುವುದರಿಂದ ಕೋವಿಡ್ ಆತಂಕದ ಸಂದರ್ಭದಲ್ಲೂ ರೋಗಿಗಳು ದೂರದ ಆಸ್ಪತ್ರೆಗಳಿಗೆ ಪ್ರಯಾಣಿಸಬೇಕಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸುಹಾಸಿನಿ ಫಣಿರಾಜ್ ಮಾತನಾಡಿ, “ಆರೋಗ್ಯ ಕೇಂದ್ರದ ಪುನರಾರಂಭಕ್ಕೆ ಆಗ್ರಹಿಸಿ ಫೆಬ್ರವರಿ 9ರ ಬುಧವಾರ ಬೆಳಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಕೇಂದ್ರದ ಎದುರು ನೂರಾರು ಕಾರ್ಯಕರ್ತ ಜಮಾವಣೆಗೊಂಡು ಶಾಸಕರು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಲಿದ್ದಾರೆ” ಎಂದು ತಿಳಿಸಿದರು.
0 Comments