ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದ ಜೊತೆಗೆ ಕನ್ನಡ - ಕನ್ನಡಿಗ - ಕರ್ನಾಟಕ ಇವುಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಹಾಗೂ ಎಲ್ಲ ಕನ್ನಡ ಸಂಘ-ಸ0ಸ್ಥೆಗಳ ಮಾತೃ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಸಾಹಿತ್ಯ “ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಪರಿವರ್ತಿಸುವ” ಹಾಗೂ ನಿಜ ಅರ್ಥದಲ್ಲಿ “ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆ”ಯನ್ನಾಗಿಸಲು ಒಂದು ಕೋಟಿ ಸದಸ್ಯರನ್ನು ಪರಿಷತ್ತಿಗೆ ನೋಂದಾಯಿಸುವ ಗುರಿ ಹೊಂದಿದ್ದಾರೆ.
“ಕನ್ನಡ ಸಾಹಿತ್ಯ ಪರಿಷತ್ತಿನ ನಡೆ - ಕನ್ನಡಿಗರ ಕಡೆ” ಎಂಬ ಆಶಯದೊಂದಿಗೆ ಒಂದು ಕೋಟಿ ಸದಸ್ಯರ ಸಂಖ್ಯೆಯನ್ನು ಮುಟ್ಟುವ ಹಾಗೂ ಕನ್ನಡ-ಕನ್ನಡಿಗ-ಕರ್ನಾಟಕದ ಏಳ್ಗೆಗಾಗಿ, ಪರಿಷತ್ತನ್ನು ಗ್ರಾಮಮಟ್ಟಕ್ಕೆ ತಲುಪಿಸುವ ಸದುದ್ದೇಶದಿಂದ ಗಣ್ಯ ವ್ಯಕ್ತಿಗಳ / ಮಹನೀಯರುಗಳ ಮನೆ ಮನೆಗೆ ಹೋಗಿ, ಆಜೀವ ಸದಸ್ಯತ್ವ ನೋಂದಣಿಗಾಗಿ ಮನವಿ ಸಲ್ಲಿಸುವ ಮುಖೇನ ಪರಿಷತ್ತು ಹೊಸ ಹೆಜ್ಜೆಯನ್ನಿರಿಸಿದೆ.
ಪ್ರಾರಂಭಿಕವಾಗಿ, ಕನ್ನಡದ ಮೊಟ್ಟ ಮೊದಲನೆಯ ಭಾರತದ ಪ್ರಧಾನ ಮಂತ್ರಿಗಳೂ ಹಾಗೂ ಹಿರಿಯ ಮುತ್ಸದ್ದಿಗಳೂ ಆದ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡ ಅವರ ಮನೆಗೆ ಅಧ್ಯಕ್ಷರು ಭೇಟಿ ನೀಡಿ, ಪರಿಷತ್ತಿನ ಸದಸ್ಯರಾಗುವಂತೆ ಮನವಿ ಮಾಡಿದ್ದರು. ಅಧ್ಯಕ್ಷರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾಜಿ ಪ್ರಧಾನಿಗಳು, “ಬಹಳ ಹೆಮ್ಮೆ, ಗೌರವ ಹಾಗೂ ಅಭಿಮಾನದಿಂದಾಗಿ ಪರಿಷತ್ತಿನ ಸದಸ್ಯತ್ವ ಪಡೆಯುತ್ತೇನೆ ಹಾಗೂ ತಮ್ಮ ಅಧ್ಯಕ್ಷಾವಧಿಯಲ್ಲಿ ಏರ್ಪಡಿಸುವ ಪರಿಷತ್ತಿನ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ, ಜೊತೆಗೆ ಕೈಲಾದ ಸಹಾಯ ಮಾಡುತ್ತೇನೆ” ಎಂದು ನಾಡೋಜ ಡಾ. ಮಹೇಶ ಜೋಶಿ ಅವರಿಗೆ ಶುಭಹಾರೈಸಿದ್ದರು.
ಮಾನ್ಯಶ್ರೀ ಹೆಚ್.ಡಿ. ದೇವೇಗೌಡರು ದಿನಾಂಕ 24-01-2022 ರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗಿದ್ದಾರೆ ಎಂದು ತಿಳಿಸಲು ಪರಿಷತ್ತು ಹೆಮ್ಮೆ ಪಡುತ್ತದೆ.
0 Comments