ಕೋಲಾರ, ಡಿ ೧೪: ಈ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷದ ಕೆಲವು ಒಳ ಜಗಳಗಳು, ಭಿನ್ನಮತ ಮುಂದುವರೆದಿತ್ತು. ಅದರ ಜೊತೆಗೆ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರಾದ ಚಂದ್ರಾರೆಡ್ಡಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ವರ್ತೂರ್ ಪ್ರಕಾಶ್ ಬಿಜೆಪಿಗೆ ಬೆಂಬಲ ಕೊಟ್ಟಿದ್ದು ಹಾಗೂ ಕಾಂಗ್ರೇಸ್ನ ಕೆಲ ಗುಂಪುಗಳು ಜೆಡಿಎಸ್ ಪರವಾಗಿ ಮತಯಾಚನೆ ಮಾಡಿದ್ದು ಕಾಂಗ್ರೆಸ್ಗೆ ಗೆಲುವು ಕಷ್ಟ ಎನ್ನುವಂತೆ ಮಾಡಿತ್ತು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಹಣದ ಜೊತೆಗೆ ಶನಿ ಮಹಾತ್ಮ, ಧರ್ಮಸ್ಥಳ ಮಂಜನಾಥಸ್ವಾಮಿ, ತಿರುಪತಿ ತಿಮ್ಮಪ್ಪನ ಮೇಲೆ ಆಣೆ ಪ್ರಮಾಣ ಮಾಡಿಸಿದ್ದವು. ಇಂಥ ಅಬ್ಬರಗಳ ನಡುವೆ ಕಾಂಗ್ರೆಸ್ ಗೆಲುವು ಕಷ್ಟ ಎಂದೇ ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಈ ಎಲ್ಲದರ ಜೊತೆಗೆ ಸಚಿವರಾದ ಸುಧಾಕರ್ ಹಾಗೂ ಮುನಿರತ್ನ ಅವರ ಪ್ರಭಾವವನ್ನು ಮೀರಿ ಮತದಾರನ ತೀರ್ಪು ಬೇರೆಯೇ ಕೊಟ್ಟಿದ್ದು, ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಎಂ.ಎಲ್.ಅನಿಲ್ಕುಮಾರ್ ಗೆಲುವು ದಾಖಲಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದುಕೊ0ಡಿದ್ದ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳೇ ಕೊನೆಗೆ ಜಿದ್ದಾಜಿದ್ದಿಗೆ ಬಿದ್ದು, ಗೆಲುವಿಗಾಗಿ ಹಣದ ಹೊಳೆಯನ್ನೇ ಹರಿಸಿದವು. ಆದರೆ ಮತದಾರನ ಲೆಕ್ಕಾಚಾರ ಬೇರೆಯೇ ಇತ್ತು. ಅಲ್ಲಿ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ಮತದಾರರು ಕಾಂಗ್ರೆಸ್ ಕೈ ಹಿಡಿದರು. ವಿಧಾನಪರಿಷತ್ ಚುನಾವಣೆ ಫಲಿತಾಂಶವು ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಸಾಕಷ್ಟು ಬದಲಾವಣೆ ಪರ್ವಕ್ಕೆ ನಾಂದಿ ಹಾಡಿದೆ. ಅಷ್ಟೇ ಅಲ್ಲದೆ ಸಾಕಷ್ಟು ಮುಖಂಡರಿಗೆ ಒಳ್ಳೆಯ ಪಾಠವನ್ನು ಕಲಿಸಿದೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ವಿಧಾನ ಪರಿಷತ್ನ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲರ ಲೆಕ್ಕಾಚಾರವನ್ನು ಮೀರಿಸುವಂತೆ ಕಾಂಗ್ರೇಸ್ ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ಫಲಿತಾಂಶ ಹೊರಬಿದ್ದಿದೆ.
ಆರಂಭದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತದೆ ಅನ್ನೋ ಮಾತು ಶುರುವಾಗಿತ್ತಾದರೂ ಅಂತಿಮವಾಗಿ ಮೈತ್ರಿಗೆ ಬದಲಾಗಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಗೆಲುವಿಗಾಗಿ ಪರಸ್ಪರ ಹಟಕ್ಕೆ ಬಿದ್ದವರಂತೆ ಚುನಾವಣೆಯಲ್ಲಿ ಓಟಿಗೆ (50) ೫೦ ಸಾವಿರದಿಂದ ಒಂದು ಲಕ್ಷದ ವರೆಗೆ ಹಣ ಹಂಚಿಕೆ ಮಾಡಿದ್ದಾರೆಂಬ ಆರೋಪ ಕೂಡಾ ಕೇಳಿ ಬಂದಿತ್ತು. ಹಣ ಹಂಚಿಕೆ ಮತವಾಗಿ ಪರಿವರ್ತನೆಯಾಗದ ಕಾರಣ ಉಳಿದಿದ್ದು ಎರಡೂ ಪಕ್ಷಗಳು ಮುಖಭಂಗ ಅನುಭವಿಸಿದವು.
ಕಾಂಗ್ರೆಸ್ಗೆ ಉತ್ಸಾಹ ತುಂಬಿದ ಗೆಲುವು: ವಿಧಾನಪರಿಷತ್ ಚುನಾವಣೆಯ ಫಲಿತಾಂಶದಿ0ದ ಕಾಂಗ್ರೆಸ್ ಪಕ್ಷಕ್ಕೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೊಸ ಹುಮ್ಮಸ್ಸು ಬಂದ0ತಾಗಿದೆ. ಜೊತೆಗೆ ಮುಳಬಾಗಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಚಿಂತಾಮಣಿ ಮಾಜಿ ಶಾಸಕ ಸುಧಾಕರ್ ಇಬ್ಬರೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸೇರುವ ಸುಳಿವು ಕೊಟ್ಟಿದ್ದಾರೆ. ಈ ನಡುವೆ ಕೊತ್ತೂರು ಮಂಜುನಾಥ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅವಕಾಶ ಸಿಕ್ಕರೆ ತಾನೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುವ ಮನದಾಸೆಯನ್ನು ಹೊರಹಾಕಿದ್ದಾರೆ. ಒಟ್ಟಾರೆ ಗುಂಪುಗಾರಿಕೆ ನಡುವೆಯೂ ಕಾಂಗ್ರೇಸ್ ಪಕ್ಷಕ್ಕೆ ಗೆಲುವು ಒಲಿದು ಬಂದಿದ್ದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಲೆಕ್ಕಾಚಾರ ಉಲ್ಟಾ ಆಗಿದೆ. ಮುಂಬರುವ ವಿಧಾನಸಭೆ ಚುನಾವಣೆಗೂ ಇದು ದಿಕ್ಸೂಚಿಯಾಗಬಹುದೇ ಎಂಬ ವಿಶ್ಲೇಷಣೆಗಳೂ ಚಾಲ್ತಿಯಲ್ಲಿದೆ.
ಜೆಡಿಎಸ್ಗೆ ಕೈಕೊಟ್ಟ ಅತ್ಯುತ್ಸಾಹ: ಇನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಿಂದ ಚಲಾವಣೆಯಾಗಿದ್ದ ಒಟ್ಟು (5587) ೫೫೮೭ ಮತಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ಗೆ (2340) ೨೩೪೦ ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿ ಅಭ್ಯರ್ಥಿ ವೇಣುಗೋಪಾಲ್ (1899) ೧೮೯೯ ಮತ ಪಡೆದರೆ, ಜೆಡಿಎಸ್ ಅಭ್ಯರ್ಥಿ ರಾಮಚಂದ್ರ (1438) ೧೪೩೮ ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ (10) ೧೦ ಮತ ಪಡೆದಿದ್ದರೆ (177) ೧೭೭ ಮತಗಳು ಅಸಿಂಧುವಾಗಿವೆ. ಗೆಲುವು ಸಾಧಿಸಬಹುದು, ಕನಿಷ್ಠ (2) ೨ನೇ ಸ್ಥಾನವನ್ನಾದರೂ ಪಡೆಯಬಹುದು ಎಂದುಕೊ0ಡಿದ್ದ ಜೆಡಿಎಸ್ ಮೂರನೇ ಸ್ಥಾನಕ್ಕೆ ಕುಸಿಯುವ ಮೂಲಕ ಮುಖಭಂಗ ಅನುಭವಿಸಿದೆ.
Varthajala Daily, Bengaluru
0 Comments