ಮೈಸೂರು, 11 ಡಿಸೆಂಬರ್ 2021: ಶ್ರೀರಂಗಪಟ್ಟಣವನ್ನು ಮತ್ತೊಮ್ಮೆ ಕೋಮುವಾದಿಗಳು ಕೋಮುಧ್ರುವೀಕರಣದ ಕೇಂದ್ರ ಸ್ಥಾನವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿರುವುದರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷವು ಮೈಸೂರು ಜಿಲ್ಲಾ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಿದೆ.
ಇನ್ನೇನು ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಲಿದೆ, ಅದರ ಬೆನ್ನಲ್ಲೇ ವಿಧಾನಸಭಾ ಚುನಾವಣೆಗೂ ಸಿದ್ದತೆ ನಡೆಯುತ್ತಿದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ ಶೂನ್ಯ, ಜೊತೆಗೆ ಈ ದೇಶದ ಪ್ರಜ್ಞಾವಂತ ಮತದಾರನನ್ನು ಎದುರಿಸುವ ಶಕ್ತಿ ಕಳೆದುಕೊಂಡಿವೆ. ಅಲ್ಲದೆ, ಈ ಹಿಂದೆ ನಾಡಿನ ಜನರನ್ನು ಭಾವನಾತ್ಮಕವಾಗಿ ಉದ್ರೇಕಗೊಳಿಸಲು ಬಳಸುತ್ತಿದ್ದ ರಾಮ ಮಂದಿರ ನಿರ್ಮಾಣ, ಭಯೋತ್ಪಾದನೆ ಎಲ್ಲ ಹಳಸಲು ಸರಕಾಗಿರುವುದರಿಂದ, ಇದೀಗ ಮತ್ತೊಂದು ಹೊಸ ಸರಕಿನ ಹುಡುಕಾಟದಲ್ಲಿ ಈ ಸರ್ಕಾರಗಳು ತೊಡಗಿವೆ. ಇದರ ಫಲಿತಾಂಶವೇ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಅಥವಾ ಮಸ್ಜಿದ್ ಎ ಆಲಾವನ್ನು ಮಂದಿರವಾಗಿ ಪರಿವರ್ತಿಸುವ ಹುನ್ನಾರ.
ಭಾರತೀಯ ಆರಾಧನಾ ಸ್ಥಳಗಳ ವಿಶೇಷ ನಿಬಂಧನಾ ಕಾಯ್ದೆ 1991ರ ಪ್ರಕಾರ 1947ರ ಆಗಸ್ಟ್ 15ರ ಹಿಂದೆ ಈ ದೇಶದಲ್ಲಿ ನೆಲೆನಿಂತಿರುವ ಧಾರ್ಮಿಕ ಆರಾಧನಾ ಸ್ಥಳಗಳನ್ನು ಯತಾಸ್ಥಿತಿಯಲ್ಲಿ ಕಾಪಾಡಬೇಕು. ಅಲ್ಲದೆ, ಇಂಥಹ ಧಾರ್ಮಿಕ ಆರಾಧನಾ ಕೇಂದ್ರಗಳ ಮೇಲೆ ಯಾರೂ ಕೂಡ ದಾಳಿ ಮಾಡುವಂತಿಲ್ಲ. ಹಾಗೇನಾದರೂ ದಾಳಿ ಮಾಡಿದಲ್ಲಿ ಅವರ ವಿರುದ್ದ ಪೊಲೀಸ್ ಇಲಾಖೆ ಸುಮೋಟೋ ಕೇಸ್ (ಸ್ವಯಂ ಪ್ರೇರಿತ) ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬಹುದು.
ಹೀಗಿದ್ದರು ಕೆಲವು ಕೋಮುವಾದಿ ಸಂಘಟನೆಗಳು ಈ ಭಾಗದ ಜನರನ್ನು ಭಾವನಾತ್ಮಕವಾಗಿ ಉದ್ರೇಕಗೊಳಿಸಲಿಕ್ಕಾಗಿ ಮೂಡಲಬಾಗಿಲು ಶ್ರೀ ಹನುಮಾನ್ ದೇವಾಲಯದ ಹೆಸರಿನಲ್ಲಿ ಜಾಮಿಯಾ ಮಸೀದಿಯ ಮೇಲೆ ದಾಳಿ ಮಾಡಲು ತಂತ್ರ ರೂಪಿಸಿದೆ. ಇದು ನಾಡಿನ ಸಹಿಷ್ಣುತೆಗೆ ಧಕ್ಕೆತರುವ ಕಾರ್ಯವಾಗಿದ್ದು ಈ ಸಮಾಜದ ಆರೋಗ್ಯವನ್ನು ಹಾಳುಗೆಡವುತ್ತದೆ. ಈ ಕಾರಣದಿಂದಾಗಿ ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಕ್ಷದ ರಾಜ್ಯಾಧ್ಯಕ್ಷರು ಅಬ್ದುಲ್ ಮಜೀದ್ ಮೈಸೂರು ಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
0 Comments