ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಅಕ್ರಮಗಳು ಮಿತಿಮೀರಿರುವುದರಿಂದ ಚುನಾವಣೆಯನ್ನು ರದ್ದು ಪಡಿಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಮುಖಂಡ ಹಾಗೂ ಅಭ್ಯರ್ಥಿ ಚನ್ನಪ್ಪಗೌಡ ನೆಲ್ಲೂರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚನ್ನಪ್ಪಗೌಡ ನೆಲ್ಲೂರು, “ಡಿ. 12ರಂದು ನಡೆಯಲಿರುವ ಒಕ್ಕಲಿಗರ ಸಂಘದ 35 ನಿರ್ದೇಶಕರ ಸ್ಥಾನದ ಚುನಾವಣೆಗೆ ಅನೇಕ ರಾಜಕಾರಣಿಗಳು, ನಿವೃತ್ತ ಸರ್ಕಾರಿ ಅಧಿಕಾರಿಗಳು, ಪ್ರಸ್ತುತ ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿಗಳು ಹಾಗೂ ಭ್ರಷ್ಟರು ಸ್ಪರ್ಧಿಸಿದ್ದಾರೆ. ಅವರು ಅಕ್ರಮ ಮಾರ್ಗಗಳಲ್ಲಿ ಗಳಿಸಿದ ಹಣವನ್ನು ಮತದಾರರಿಗೆ ಹಂಚಲು ರಾಜ್ಯದ ಮೂಲೆಮೂಲೆಗೂ ಕೋಟ್ಯಂತರ ರೂಪಾಯಿಗಳನ್ನು ವಾಮಮಾರ್ಗಗಳ ಮೂಲಕ ಸಾಗಿಸುತ್ತಿದ್ದಾರೆ. ಇದಕ್ಕೆ ಯಾವುದೇ ಲೆಕ್ಕವನ್ನು ಆದಾಯ ತೆರಿಗೆ ಇಲಾಖೆ ಅಥವಾ ಸರ್ಕಾರದ ಯಾವುದೇ ಪ್ರಾಧಿಕಾರಗಳಿಗೆ ಸಲ್ಲಿಸದಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆಯ ಜಾರಿ ನಿರ್ದೇಶನಾಲಯದ ಜಂಟಿ ಆಯುಕ್ತರು ಹಾಗೂ ಒಕ್ಕಲಿಗರ ಸಂಘದ ಚುನಾವಣಾಧಿಕಾರಿಗಳಿಗೆ ದೂರನ್ನು ಸಹ ಸಲ್ಲಿಸಲಾಗಿದೆ ಎಂದು ಚನ್ನಪ್ಪ ಗೌಡ ಹೇಳಿದರು
ರಾಜ್ಯ ಭೂಕಬಳಿಕೆ ಹೋರಾಟ ಸಮಿತಿ ಅಧ್ಯಕ್ಷರಾದ ಎಚ್.ಸುರೇಶ್ ಮಾತನಾಡಿ, “ಅಕ್ರಮ ಹಣವನ್ನು ಮನಸೋ ಇಚ್ಛೆ ಮತದಾರರಿಗೆ ಹಂಚಿ ಚುನಾವಣಾ ಅಕ್ರಮಗಳ ಮೂಲಕ ಗೆಲ್ಲಲು ಹೊರಟಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಈ ದೇಶದ ಕಾನೂನುಗಳಿಗೆ ಎಳ್ಳಷ್ಟೂ ಬೆಲೆ ನೀಡದೇ ಅಕ್ರಮ ಆರ್ಥಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಆದ್ದರಿಂದ ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಆದಾಯ ತೆರಿಗೆ (ಐಟಿ) ಇಲಾಖೆಗಳು ಶೀಘ್ರವೇ ದಾಳಿ ನಡೆಸಿ, ಅಭ್ಯರ್ಥಿಗಳು ಅಡಗಿಸಿಟ್ಟಿರುವ ಹಾಗೂ ಸಾಗಿಸುತ್ತಿರುವ ಅಕ್ರಮ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಉಪಾಧ್ಯಕ್ಷ ಬಿ .ಟಿ .ನಾಗಣ್ಣರವರು ಮಾತನಾಡಿ, “ಮತದಾರರ ಪಟ್ಟಿಯಲ್ಲಿನ ಅಕ್ರಮದ ಬಗ್ಗೆ ಚನ್ನಪ್ಪಗೌಡರು ಸಾಕ್ಷಿ ಸಮೇತ ದೂರು ದಾಖಲಿಸಿದ್ದರೂ, ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಪ್ರಾಮಾಣಿಕ ಅಭ್ಯರ್ಥಿಗಳು ಗೆದ್ದು ಬಂದು ಮುಂದಿನ ದಿನಗಳಲ್ಲಿ ಸಂಘದ ಆಸ್ತಿ ಪಾಸ್ತಿಗಳಿಗೆ ಧಕ್ಕೆಯಾಗುವ ಸಂಭವವಿದೆ. ಆದ್ದರಿಂದ ಚುನಾವಣೆಯನ್ನು ರದ್ದು ಪಡಿಸುವುದೇ ಸೂಕ್ತ” ಎಂದು ಅಭಿಪ್ರಾಯಪಟ್ಟರು.
0 Comments