ಬೆಂಗಳೂರಿನ ಬಿನ್ನಿಮಿಲ್ನಲ್ಲಿರುವ ಪೊಲೀಸ್ ವಸತಿ ಸಮುಚ್ಚಯ ವಾಲಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೇ ನೇರ ಹೊಣೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದ್ದು, ಕಟ್ಟಡದ ನಿರ್ಮಾಣ ಕಾಮಗಾರಿಯಲ್ಲಿನ ಅವ್ಯವಹಾರದ ಕುರಿತು ಮುಖ್ಯ ನ್ಯಾಯಮೂರ್ತಿ ನಿಗಾದಲ್ಲಿ ತನಿಖೆ ನಡೆಸಬೇಕೆಂದು ಎಂದು ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರರಾದ ಶರತ್ ಖಾದ್ರಿಯವರು, “ಬಿ.ಎಸ್.ಯಡಿಯೂರಪ್ಪನವರ ಆಡಳಿತಾವಧಿಯಲ್ಲಿ ಬಸವರಾಜ್ ಬೊಮ್ಮಾಯಿಯವರು ಗೃಹ ಸಚಿವರಾಗಿದ್ದಾಗ ಕಟ್ಟಡದ ಕಾಮಗಾರಿ ನಡೆದಿದೆ. 2019ರಲ್ಲೇ ಬಿರುಕು ಕಾಣಿಸಿಕೊಂಡಿದ್ದರೂ ನಿರ್ಲಕ್ಷ್ಯ ತೋರಲಾಗಿತ್ತು. ನಿರ್ಮಾಣ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಮುಖ್ಯ ನ್ಯಾಯಮೂರ್ತಿ ನಿಗಾದಲ್ಲಿ ತನಿಖೆಯಾದರೆ ಸತ್ಯ ಹೊರಬರಲಿದೆ. ಗುತ್ತಿಗೆದಾರರು, ಎಂಜಿನಿಯರ್ಗಳು, ಅಧಿಕಾರಿಗಳು ಹಾಗೂ ಗೃಹಸಚಿವರು ಒಟ್ಟುಗೂಡಿ ದುಡ್ಡು ಹೊಡೆಯುವ ಉದ್ದೇಶದಿಂದ ಕಳಪೆ ಕಾಮಗಾರಿ ಮಾಡಿರುವುದೇ ಇಂದಿನ ಪರಿಸ್ಥಿತಿಗೆ ಕಾರಣ” ಎಂದು ಹೇಳಿದರು.
ಬಿನ್ನಿಮಿಲ್ನಲ್ಲಿರುವ ʻಬಿʼ ಬ್ಲಾಕ್ ಸದ್ಯ ಎರಡು ಅಡಿ ವಾಲಿದ್ದು, ಇದೇ ರೀತಿ ಅದರ ಪಕ್ಕದಲ್ಲೇ ನಿರ್ಮಿಸಲಾಗಿರುವ ʻಎʼ ಹಾಗೂ ʻಸಿʼ ಬ್ಲಾಕ್ ಕಟ್ಟಡಗಳ ನಿರ್ಮಾಣದ ಕುರಿತೂ ತನಿಖೆ ನಡೆಯಬೇಕು. ತ್ಯಾಜ್ಯದ ರಾಶಿಯನ್ನು ಮಣ್ಣಿನಿಂದ ಮುಚ್ಚಿ ಕಟ್ಟಡ ನಿರ್ಮಿಸಲಾಗಿದೆ. ನೆಲವನ್ನು ಭದ್ರಪಡಿಸಿಕೊಂಡು ಅಡಿಪಾಯ ಹಾಕಲು ನಿರ್ಲಕ್ಷ್ಯ ತೋರಲಾಗಿದೆ. ಕಳಪೆ ಗುಣಮಟ್ಟದ ಸಿಮೆಂಟ್ ಬಳಸಿ ಪಿಲ್ಲರ್, ಭೀಮ್ ಹಾಕಲಾಗಿದೆ. ಜನರನ್ನು ರಕ್ಷಿಸಬೇಕಾದ ಪೊಲೀಸರ ಕುಟುಂಬಗಳೇ ಸರ್ಕಾರದ ತಪ್ಪಿನಿಂದಾಗಿ ಇಂದು ಅತಂತ್ರ ಸ್ಥಿತಿಗೆ ತಲುಪಿರುವುದು ಬೇಸರದ ಸಂಗತಿ ಎಂದು ಶರತ್ ಖಾದ್ರಿ ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಮಹಿಳಾ ಮುಖಂಡರಾದ ಪಲ್ಲವಿ ಚಿದಂಬರಂರವರು ಮಾತನಾಡಿ, “ಬಿನ್ನಿಮಿಲ್ ಪೊಲೀಸ್ ಕ್ವಾರ್ಟರ್ಸ್ಗಳಲ್ಲಿ ಕಟ್ಟಡದ ಲೋಪ ಮಾತ್ರವಲ್ಲದೇ, ಇನ್ನೂ ಅನೇಕ ಸಮಸ್ಯೆಗಳಿವೆ. ಶೌಚಾಲಯದ ಪೈಪುಗಳು ಒಡೆದು ನೀರು ಸೋರುತ್ತಿದೆ. ದೀರ್ಘಕಾಲದಿಂದ ಇದ್ದ ಕುಡಿಯುವ ನೀರಿನ ಸಮಸ್ಯೆಯನ್ನು ತೀವ್ರ ಒತ್ತಡ ಹಾಕಿದ್ದರಿಂದ ಕೆಲ ದಿನಗಳ ಹಿಂದೆಯಷ್ಟೇ ಬಗೆಹರಿಸಲಾಗಿದೆ. ಇನ್ನೂ ಅನೇಕ ಮೂಲಸೌಕರ್ಯಗಳ ಕೊರತೆಯಿದೆ. ಆರಕ್ಷಕರ ಕುಟುಂಬಗಳನ್ನು ಸರ್ಕಾರವು ಶೋಚನೀಯ ಸ್ಥಿತಿಯಲ್ಲಿ ಇಟ್ಟಿರುವುದು ಖಂಡನೀಯ” ಎಂದು ಹೇಳಿದರು..
0 Comments